ನವದೆಹಲಿ: ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ಮೋದಿ ಜೂನ್ 19 ರಂದು ಸಂಜೆ 5 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಪಕ್ಷಗಳ ಮುಖಂಡರ ಜೊತೆ ಮಾತನಾಡಲಿರುವ ಪ್ರಧಾನಿ ಮೋದಿ, ಭಾರತ ಚೀನಾ ಬಿಕ್ಕಟ್ಟಿನ ಕುರಿತು ಪ್ರಮುಖವಾಗಿ ಚರ್ಚಿಸಲಿದ್ದಾರೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.
ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾದ ಸೈನಿಕರಿಂದ, ಕರ್ನಲ್ ಸೇರಿದಂತೆ ಕನಿಷ್ಠ 20 ಭಾರತೀಯ ಸೇನಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಇದು ಕಳೆದ 5 ದಶಕಗಳಲ್ಲಿ ನಡೆದ ಅತಿದೊಡ್ಡ ಮಿಲಿಟರಿ ಮುಖಾಮುಖಿಯಾಗಿದ್ದು, ಗಡಿ ಪ್ರದೇಶದಲ್ಲಿ ಸಂಘರ್ಷ ಹೆಚ್ಚಾಗುವ ಸಾಧ್ಯತೆ ಕಾಣಿಸುತ್ತಿದೆ.
ಏತನ್ಮಧ್ಯೆ, ಉಭಯ ದೇಶಗಳ ಸೈನ್ಯಗಳು ಮುಖಾಮುಖಿಯಾದ ಒಂದು ದಿನದ ನಂತರ ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದ ಸಾರ್ವಭೌಮತ್ವವು ತನಗೆ ಸೇರಿದೆ ಎಂದು ಚೀನಾ ಬುಧವಾರ ಹೇಳಿದೆ. ಇದೀಗ ಪ್ರಧಾನಿ ಮೋದಿ ಜೂನ್ 19 ರಂದು ಸರ್ವಪಕ್ಷಗಳ ಸಭೆ ಕರೆದಿರುವುದು ಕೂತೂಹಲಕ್ಕೆ ಎಡೆಮಾಡಿದೆ.