ಹಾಸನ,ಜು.6:- ಯಾವುದೇ ರೋಗ ಲಕ್ಷಣ ಇಲ್ಲದ ಕೋವಿಡ್-19 ಸೋಂಕಿತರನ್ನು ಅವರವರ ಮನೆಗಳಲ್ಲಿಯೇ ಕ್ವಾರಂಟೈನ್ ಮಾಡಬೇಕೆಂದು ನಿರ್ದೇಶನವಿರುವುದರಿಂದ, ಸುತ್ತಮುತ್ತಲಿನ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಹಾಗೂ ಅನುಸರಿಸಬೇಕಾದ ಅಗತ್ಯ ಕ್ರಮಗಳ ಬಗ್ಗೆ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಬಾಂಗಣದಲ್ಲಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೊಂಕಿತರ ಸಂಖ್ಯೆಯು ಹೆಚ್ಚಾಗುತ್ತಿದ್ದು, ಸೌಮ್ಯ ರೊಗಲಕ್ಷಣಗಳಿರುವ ಸೋಂಕಿತರನ್ನು ಅವರ ಮನೆಯಲ್ಲಿಯೇ ಕ್ವಾರಂಟೈನ್ ಮಾಡಬೇಕಾಗಿರುವುದರಿಂದ ಅಧಿಕಾರಿಗಳು ಭೇಟಿ ನೀಡಿ, ಪ್ರತ್ಯೇಕ ಕೊಠಡಿ ಹಾಗೂ ಶೌಚಾಲಯದ ವ್ಯವಸ್ಥೆ ಇರುವವರನ್ನು ಮಾತ್ರ ಹೋಂ ಕ್ವಾರಂಟೈನ್ ಮಾಡಿ ಎಂದು ತಿಳಿಸಿದರು.
ಹೋಂ ಕ್ವಾರಂಟೈನ್ ಮಾಡಲಾದ ಸೋಂಕಿತರ ಸಂಪೂರ್ಣ ವಿವರಗಳನ್ನು ಗೂಗಲ್ ಸ್ಪ್ರೆಡ್ಶೀಟ್ನಲ್ಲಿ ಅಪ್ಲೋಡ್ ಮಾಡಿ ಪ್ರತಿದಿನದ ವರದಿಯನ್ನು ಅದರಲ್ಲಿ ಅಪ್ಡೇಟ್ ಮಾಡಬೇಕು ಹಾಗೂ ಪ್ರತಿದಿನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು, ಪ್ರೌಢಶಾಲಾ ಶಿಕ್ಷಕರು,ಟ್ಕಂದಾಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆ ಹಾಗೂ ಪೋಲೀಸ್ ಸಿಬ್ಬಂದಿಯನ್ನೊಳಗೊಂಡ 6 ವಿಶೇಷ ತಂಡಗಳನ್ನು ರಚಿಸಬೇಕು. ಇವು ತಾಲ್ಲೂಕು ಆರೋಗ್ಯ ಅಧಿಕಾರಿಯ ಸೂಚನೆಯಂತೆ ಕಾರ್ಯ ನಿರ್ವಹಿಸಬೇಕು. ಅದರಂತೆ ಈ ತಂಡಗಳನ್ನು ಪ್ರಥಮ ಸಂಪರ್ಕಿತರನ್ನು ಪತ್ತೆಹಚ್ಚುವುದು, ಹಾಗೂ ಕ್ವಾರಂಟೈನ್ನಲ್ಲಿರುವವರ ಬಗ್ಗೆ ನೀಗಾ ವಹಿಸಲು ನಿಯೊಜಿಸಿ ಎಂದು ಆರ್. ಗಿರೀಶ್ ಸೂಚಿಸಿದರು.
ಕೋವಿಡ್-19 ವ್ಯಾಪಕತೆ ಹೆಚ್ಚಾಗುತ್ತಿರುವುದರಿಂದ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಜುಲೈ 9 ರೊಳಗೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತರ ತಪಾಸಣೆಗೆಂದು ಹೆಚ್ಚುವರಿ ಕೊಠಡಿಗಳನ್ನು ಮೀಸಲಿಡುವಂತೆ ಸೂಚಿಸಿ ಎಂದರಲ್ಲದೆ, ಖಾಸಗಿ ಆಸ್ಪತ್ರೆಗಳು ಹಾಗೂ ಶಾಲೆಗಳಲ್ಲಿರುವ ಹೆಚ್ಚುವರಿ ಆ್ಯಂಬುಲೆನ್ಸ್ ಹಾಗೂ ವಾಹನಗಳನ್ನು ಕೋವಿಡ್-19 ಪರಿಕ್ಷಾ ಘಟಕವನ್ನಾಗಿ ಮಾಡಲು ಬಳಸಿಕೊಳ್ಳಿ ಎಂದು ಅವರು ಸೂಚಿಸಿದರು.
ಕೊರೋನಾ ಸೋಂಕಿನಿಂದ ಮೃತಪಟ್ಟವರನ್ನು ಅಂತ್ಯಕ್ರಿಯೆಗೆ ಒಯ್ಯುವ ನೌಕರರ ಕೊಡುಗೆ ಅಪಾರ, ಈ ನಿಟ್ಟಿನಲ್ಲಿ ಅವರ ಕಾರ್ಯಕ್ಷಮತೆಗೆ ಗೌರವ ಪೂರಕವಾಗಿ 4 ಜನರಿಂದ ತಲಾ 5 ಸಾವಿರದಂತೆ 20 ಸಾವಿರ ರೂಗಳನ್ನು ತಲುಪಿಸಲು ಜಿಲ್ಲಾಧಿಕಾರಿಯವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
Tags
ಹಾಸನ