ಏಡ್ಸ್ ಸೋಂಕಿತರು ಧೈರ್ಯವನ್ನು ಕಳೆದುಕೊಳ್ಳಬಾರದು - ನ್ಯಾಯಾಧೀಶರಾದ ರವೀಂದ್ರ ಹೆಗಡೆ

 ಹಾಸನ ಡಿ.01 : ಹೆಚ್‍ಐವಿ/ಏಡ್ಸ್ ಸೋಂಕಿತರು ಧೈರ್ಯವನ್ನು ಕಳೆದುಕೊಳ್ಳದೇ ವೈದ್ಯರನ್ನು ಸಂಪರ್ಕಿಸಿ ಲಭ್ಯವಿರುವ ಪರಿಣಾಮಕಾರಿ ಚಿಕಿತ್ಸೆ ಪಡೆಯಬೇಕು ಆತ್ಮವಿಶ್ವಾಸದಿಂದ ಬದಕಬೇಕು ಎಂದು ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿಮ್ಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಾಸನದ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿಂದು ವಿಶ್ವ ಏಡ್ಸ್ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಹೆಚ್‍ಐವಿ ಸೋಂಕು ತಗಲದಂತೆ ಮುಂಜಾಗ್ರತೆ ವಹಿಸಬೇಕು ಒಂದು ವೇಳೆ  ರೋಗ ಬಂದರೆ ಧೃತಿಗೆಡದೆ ಚಿಕಿತ್ಸೆ  ಪಡೆಯಬೇಕು ಎಂದು ತಿಳಿಸಿದರು. 
    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್ ಅವರು ಮಾತನಾಡಿ ಏಡ್ಸ್ ಸೋಂಕಿನ ಬಗ್ಗೆ ಹೆಚ್ಚು ಜಾಗೃತಿಯನ್ನು ಮೂಡಿಸಬೇಕು.  ಏಡ್ಸ್ ಸೋಂಕಿತರಿಗೆ  ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದಂತೆ ವೈದ್ಯರು ಆಪ್ತ ಸಮಲೋಚಕರು ಸ್ಪೂರ್ತಿ ನೀಡಬೇಕು ಎಂದರು. 

    ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಸಿ.ಕೆ ಬಸವರಾಜ್ ಅವರು ಮಾತನಾಡಿ  ಹೆಚ್‍ಐವಿ ಸೋಂಕು ಕುರಿತು ಹೆಚ್ಚಿನ ರೀತಿಯಲ್ಲಿ ಜಾಗೃತಿಯನ್ನು ಮೂಡಿಸುತ್ತಿರುವುದರಿಂದ  ಜಿಲ್ಲೆಯಲ್ಲಿ ಹೆಚ್‍ಐವಿ ಸೋಂಕಿತರ ಸಂಖ್ಯೆ  ಕಡಿಮೆಯಾಗುತ್ತಿದೆ  ವೈದ್ಯರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

   ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಕೆ. ಎಂ ಸತೀಶ್ ಅವರು ಮಾತನಾಡಿ ಕೋವಿಡ್-19  ಹಿನ್ನೆಲೆಯಲ್ಲಿ ಹೆಚ್.ಐ.ವಿ/ಏಡ್ಸ್ ಬಗ್ಗೆ ಹೆಚ್ಚು  ಜಾಗೃತಿ ಮೂಡಿಸಲು ಸಾಧ್ಯವಾಗಿಲ್ಲ.ಮುಂದಿನ ದಿನಗಳಲ್ಲಿ ವ್ಯಾಪಾಕ ಅರಿವು ಮೂಡಿಸಗುವುದು ಎಂದರು.
 
    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಮೋಹನ್ ಹೆಚ್.ಪಿ  ಮಾತನಾಡಿ ಹೆಚ್‍ಐವಿ ಸೋಂಕಿತರಿಗೆ ಸರ್ಕಾರ ನಿರಂತರವಾಗಿ ಉಚಿತ ಚಿಕಿತ್ಸೆಯನ್ನು ನೀಡುತ್ತಿದೆ ಸೋಂಕಿತರು  ಚಿಕಿತ್ಸೆ ಪಡೆದುಕೊಳ್ಳಬೇಕು ಹಾಗೂ ಸ್ವಯಂ ಸೇವಕರು ಇನ್ನಷ್ಟು ಹೆಚ್ಚು ಅರಿವು  ಮೂಡಿಸಬೇಕು  ವಿಶ್ವದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಅದನ್ನು ನಿಯಂತ್ರಣಕ್ಕೆ ತರಬೇಕು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಹಾಸನ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ನಿರ್ದೇಶಕರಾದ ಡಾ|| ಬಿ.ಸಿ ರವಿಕುಮಾರ್, ಎ ಆರ್ ಟಿ ಕೇಂದ್ರದ  ವೈದ್ಯಾಧಿಕಾರಿಗಳಾದ ಡಾ||. ಪೂರ್ಣಿಮಾ, ನೋಡಲ್ ಅಧಿಕಾರಿಯಾದ ಡಾ|| ಸುರೇಶ್, ಹಾಗೂ ಇತರರು ಹಾಜರಿದ್ದರು.

Post a Comment

Previous Post Next Post