ಹಾಸನ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಯಾರು ಜೆಡಿಎಸ್ ಪಕ್ಷದ ಅಭ್ಯರ್ಥಿ ಆಗಲಿದ್ದಾರೆ ಎಂಬುದೇ ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೇ ಕ್ಷೇತ್ರದ ಟಿಕೆಟ್ ಫೈಟ್ ಮತ್ತಷ್ಟು ಕಗ್ಗಂಟಾಗಿದೆ. ಇದರ ನಡುವೆಯೂ ಜಿಲ್ಲೆಯಲ್ಲಿ ನಡೆಯಬೇಕಿದ್ದಂತ ಜೆಡಿಎಸ್ ಸಭೆ ರದ್ದಾಗಿದೆ.ಆದ್ರೇ ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರ, ಸಭೆ ರದ್ದಾದರೂ ನನ್ನ ನಿಲುವು ಮಾತ್ರ ಬದಲಾಗಲ್ಲ ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ಹಾಸನದಲ್ಲಿ ನಿಗದಿಯಾಗಿದ್ದಂತ ಜೆಡಿಎಸ್ ಸಭೆ ರದ್ದಾದ ಬಗ್ಗೆ ಮಾಹಿತಿ ಪಡೆಯುತ್ತೇನೆ. ಸಭೆ ರದ್ದಾದರೂ ನನ್ನ ನಿಲುವಿನಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ ಎಂಬುದಾಗಿ ತಿಳಿಸಿದ್ದಾರೆ.
ನನಗೆ ಭಾನಾತ್ಮಕ ಸಂಬಂಧಗಳಿಗಿಂತ ಕಾರ್ಯಕರ್ತರು ಹಾಗೂ ಪಕ್ಷದ ಹಿತ ಮುಖ್ಯವಾಗಿದೆ. ಹಾಸನದಲ್ಲಿ ನಿಗದಿಯಾಗಿದ್ದಂತ ಜೆಡಿಎಸ್ ಸಭೆ ಮುಂದೂಡಿಕೆ ಬಗ್ಗೆ ನನಗೆ ಗೊತ್ತಿಲ್ಲ. ಯಾರಿಂದ ಮುಂದೂಡಲ್ಪಟ್ಟಿದೆ ಎಂದು ಮಾಹಿತಿ ಪಡೆಯುತ್ತೇನೆ ಎಂದರು.
ನಾನು ಜೆಡಿಎಸ್ ಕಾರ್ಯಕರ್ತರನ್ನು ಗೌರವಿಸುತ್ತೇನೆ. ಅಲ್ಲದೇ ಆ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲುವ ವಿಶ್ವಾಸ ನನಗೆ ಇದೆ. ಅದರಲ್ಲೂ ಬಿಜೆಪಿಯ ಅಹಂಕಾರದ ಅಭ್ಯರ್ಥಿ ವಿರುದ್ಧ ನಮ್ಮ ಕಾರ್ಯಕರ್ತರನ್ನೇ ನಿಲ್ಲಿಸಿ ಗೆಲ್ಲಿಸೋದಾಗಿ ತಿಳಿಸಿದರು.
ಹಾಸನ ಟಿಕೆಟ್ ಹಂಚಿಕೆ ಬಗ್ಗೆ ಯಾರಿಗೂ ಗೊಂದಲ, ಆತಂಕ ಬೇಡ. ಇಲ್ಲಿಯವರೆಗೆ ಹಾಸನ ರಾಜಕಾರಣದಲ್ಲಿ ಮಧ್ಯಪ್ರವೇಶಿಸಿಲ್ಲ. ಆದರೇ ಈಗ ಮೂಗು ತೂರಿಸುವ ಪರಿಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಪಕ್ಷ ಉಳಿಸಬೇಕಾಗಿದೆ. ದೇವೇಗೌಡರ ಹೆಸರು ಉಳಿಸಬೇಕಾಗಿದೆ. ಇಷ್ಟು ದಿನ ಭಾವನಾತ್ಮಕ ಸಂಬಂಧಗಳಿಗೆ ತೆಲೆಬಾಗಿದ್ದೆ, ಆದ್ರೇ ಈಗ ಭಾವನಾತ್ಮಕ ವಿಷಯಗಳಿಂದ ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.