ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪಕ್ಷತೀತವಾಗಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಗೊಂಡ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ದೇವಾಲಯದಲ್ಲಿ ಮತ್ತು ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸಿಹಿ ಹಂಚುವುದರ ಮೂಲಕ ಸಂಭ್ರಮಿಸಿದರು.
ಮೊದಲು ನೀರು ಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ನಂತರ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಪಕ್ಷದ ಕಾರ್ಯಕರ್ತರು ಒಬ್ಬರಿಗೊಬ್ಬರೂ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ ಮತ್ತು ಜಿಪಂ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ರವರು, ದೀನಾ ದಲಿತರ, ಬಡವರ ಹೇಳಿಗೆಗಾಗಿ ಹೋರಾಡಿದಂತಹ ಮಣ್ಣಿನ ಮಗ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರವರು ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ದೆ ಮಾಡಿ ಸೋಲು ಅನುಭವಿಸಿದ್ದರಿಂದ ಇಡೀ ದೇಶ, ರಾಜ್ಯ ಹಾಗೂ ವಿಶೇಷವಾಗಿ ಹಾಸನ ಜಿಲ್ಲೆಯ ಜನತೆಗೆ ತುಂಬ ನೋವನ್ನುಂಟು ಮಾಡಿತ್ತು. ಕಿರಿಯರಿಗೆ ಮತ್ತು ಹಿರಿಯರಿಗೆ ದೇವೇಗೌಡರ ಮಾರ್ಗದರ್ಶನ ಬೇಕೆಂದು ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ನಮ್ಮ ಪಕ್ಷದವರು ಎಲ್ಲಾ ಸೇರಿ ಒಟ್ಟಾಗಿ ದೇವೇಗೌಡರನ್ನು ಆಯ್ಕೆ ಮಾಡಿದ್ದಾರೆ ಎಂದರು. ರೈತರ ಪರವಾಗಿ ಧ್ವನಿಯನ್ನು ಎತ್ತಬೇಕು ಎಂದು ಇಂತಹ ಒಳ್ಳೆ ನಿರ್ಧಾರ ಮಾಡಿರುವ ಎಲ್ಲಾರಿಗೂ ತುಂಬು ಹೃದಯದ ಅಭಿನಂದನೆಯನ್ನು ಹಾಸನದ ಜನತೆ ಪರವಾಗಿ ತಿಳಿಸಿದರು. ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮತ್ತು ಭವಾನಿರವರ ಮದುವೆ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೂಡ ಕೋರಿದರು.
ಇದೆ ವೇಳೆ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಸ್. ಅನೀಲ್ ಕುಮಾರ್, ಅಪ್ಪಣ, ಕಾರ್ಲೇ ಇಂದ್ರೇಶ್, ಸಮೀರ್ ಖಾನ್, ಪ್ರಭು, ರಘು ಇತರರು ಪಾಲ್ಗೊಂಡಿದ್ದರು.
Tags
ಹಾಸನ