ಶ್ರವಣಬೆಳಗೊಳ-ಕುಶಾಲನಗರ ರೈಲು ಮಾರ್ಗ ಸಮೀಕ್ಷೆಗೆ ಒಪ್ಪಿಗೆ

ಹಾಸನ: ರೈಲ್ವೆ ಇಲಾಖೆ ರಾಜ್ಯದಲ್ಲಿ ಮತ್ತೊಂದು ಹೊಸ ರೈಲು ಯೋಜನೆ ಪ್ರಾರಂಭಿಸಲು ಹೆಜ್ಜೆ ಇಟ್ಟಿದೆ. ಶ್ರವಣಬೆಳಗೊಳ-ಕುಶಾಲನಗರ ನಡುವಿನ ಹೊಸ ರೈಲು ಮಾರ್ಗದ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದೆ.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ಪ್ರಧಾನ ಕಚೇರಿಗೆ ಈ ಕುರಿತು ಸೂಚನೆ ನೀಡಲಾಗಿದೆ. ಶ್ರವಣಬೆಳಗೊಳ-ಹೊಳೆನರಸೀಪುರ-ಕೊಣನೂರು-ಕುಶಾಲನಗರ ರೈಲು ಯೋಜನೆಗೆ ಸಮೀಕ್ಷೆ ನಡೆಸಲು ನಿರ್ದೇಶನ ಕೊಟ್ಟಿದೆ.  ರೈಲ್ವೆ ಬೋರ್ಡ್ ಯೋಜನಾ ನಿರ್ವಾಹಕ ಪಂಕಜ್ ಕುಮಾರ್ ಮೇ 12ರಂದು ಈ ಕುರಿತು ಪತ್ರದ ಮೂಲಕ ನಿರ್ದೇಶನ ನೀಡಿದ್ದಾರೆ. 
ಹಾಸನ ಜಿಲ್ಲೆಯ ಶ್ರವಣಬೆಳಗೊಳ ಮತ್ತು ಕೊಡಗು ಜಿಲ್ಲೆಯ ಕುಶಾಲನಗರ ನಡುವೆ ರೈಲು ಮಾರ್ಗ ನಿರ್ಮಾಣ ಮಾಡಲು ಸಮೀಕ್ಷೆ ನಡೆಸಲಾಗುತ್ತದೆ. 117 ಕಿಮೀ ಮಾರ್ಗ ರೈಲ್ವೆ ಇಲಾಖೆ ಪತ್ರದ ಅನ್ವಯ ನೂತನ ರೈಲು ಮಾರ್ಗ 117 ಕಿಮೀ ಇರಲಿದೆ. ಸಮೀಕ್ಷೆಗಾಗಿ ಅಗತ್ಯ ಅನುದಾನವನ್ನು ಇಲಾಖೆ ಬಿಡುಗಡೆ ಮಾಡಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಮಾರ್ಗ ನಿರ್ಮಾಣದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. 
ಹಾಸನ ಜಿಲ್ಲೆ ಶ್ರವಣಬೆಳಗೊಳದಿಂದ ಹೊರಡುವ ರೈಲು ಹೊಳೆನರಸೀಪುರ, ಕೊಣನೂರು ಮಾರ್ಗವಾಗಿ ಕೊಡಗು ಜಿಲ್ಲೆಯ ಕುಶಾಲನಗರವನ್ನು ತಲುಪಲಿದೆ. ಈ ರೈಲು ಮಾರ್ಗದಿಂದ ಆಗುವ ಲಾಭ, ವೆಚ್ಚ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಮೀಕ್ಷೆ ವರದಿ ತಯಾರು ಮಾಡಲಾಗುತ್ತದೆ. ಈಗಾಗಲೇ ರೈಲ್ವೆ ಇಲಾಖೆ ಮೈಸೂರು-ಕುಶಾಲನಗರ ರೈಲು ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಭವಿಷ್ಯದಲ್ಲಿ ಈ ಎರಡೂ ರೈಲು ಮಾರ್ಗಗಳನ್ನು ಸಂಪರ್ಕಿಸುವ ಲೆಕ್ಕಾಚಾರ ಇಲಾಖೆ ಮುಂದಿದೆ.
2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮೈಸೂರು-ಬೆಳಗೊಳ-ಕುಶಾಲನಗರ ರೈಲು ಯೋಜನೆಗೆ 100 ಕೋಟಿ ರೂ. ಅನುದಾನ ನೀಡಿದ್ದರು. 87.2 ಕಿ. ಮೀ. ರೈಲು ಯೋಜನೆ ಇದಾಗಿದೆ. ಈ ಯೋಜನೆಗೆ 1854.62 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಗೆ ಭೂ ಸ್ವಾಧೀನ ಕಾರ್ಯ ಈಗಾಗಲೇ ನಡೆಯುತ್ತಿದೆ. ಶೀಘ್ರವೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. 2019ರ ಪಿಂಕ್ ಬುಕ್ ನಲ್ಲಿ ಈ ರೈಲು ಯೋಜನೆ ಪ್ರಸ್ತಾಪ ಮಾಡಿ ಅನುದಾನ ನೀಡಲಾಗಿತ್ತು.
 ಹೊಸ ರೈಲು ಮಾರ್ಗದ ಸಮೀಕ್ಷೆ ಕಾರ್ಯಕ್ಕೆ ಈ ಹಿಂದೆ 2020ರಲ್ಲಿ ರೈಲ್ವೇ ಬೋರ್ಡ್ ಸಂಸದರ ಪ್ರದೇಶಾಭಿವೃದ್ಧಿ ಅನುದಾನ ಬಳಸುವಂತೆ ಸೂಚಿಸಿತ್ತು. ಆದರೆ ಕೋವಿಡ್ 19 ಕಾರಣಗಳಿಂದಾಗಿ 2 ವರ್ಷ ಸಂಸದರ ಪ್ರದೇಶಾಭಿವೃದ್ಧಿ ಅನುದಾನ ಮಂಜೂರಾಗದೇ ಇದ್ದುದರಿಂದ ಸರ್ವೇ ಕಾರ್ಯ ಪ್ರಾರಂಭವಾಗಿರಲಿಲ್ಲ. ಸಂಸದರು ಈ ಹೊಸ ರೈಲು ಮಾರ್ಗ ಕಾಮಗಾರಿಗೆ ಕೇಂದ್ರ ಸರ್ಕಾರವೇ ಅನುದಾನ ಒದಗಿಸಿ ಸಮೀಕ್ಷೆ ಕಾರ್ಯ ಕೈಗೊಳ್ಳಲು ರೈಲ್ವೆ ಸಚಿವರು ಮತ್ತು ರೈಲ್ವೆ ಬೋರ್ಡ್ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಸಂಸದರ ಒತ್ತಾಯದ ಮೇರೆಗೆ ಹೊಸ ಮಾರ್ಗದ ಸಮೀಕ್ಷೆಗೆ ಒಪ್ಪಿಗೆ ಸಿಕ್ಕಿದೆ.

Post a Comment

Previous Post Next Post