ಮಸೀದಿಗೆ ನುಗ್ಗಿದ ಖತರ್ನಾಕ್ ಕಳ್ಳ ಕಚೇರಿಯಲ್ಲಿದ್ದ ಕಂಪ್ಯೂಟರ್, ಕ್ಯಾಮೆರಾ ಹೊತ್ತೊಯ್ದಿರುವ ಘಟನೆ ಹಾಸನ ನಗರದ, ಶರೀಫ್ ಕಾಲೋನಿಯಲ್ಲಿ ನಡೆದಿದೆ.
ತಡರಾತ್ರಿ ಖುಬಾ ಮಸೀದಿಗೆ ನುಗ್ಗಿರುವ ಕಳ್ಳ, ಮಸೀದಿಯ ಮುಖ್ಯದ್ವಾರದ ಬೀಗ ಮುರಿದು ಹುಂಡಿ ಕದಿಯಲು ಯತ್ನಿಸಿದ್ದಾನೆ.
ಸಾಧ್ಯವಾಗದಿದ್ದಾಗ, ನಂತರ ಮಸೀದಿಯ ಕಚೇರಿ ಬೀಗ ಮುರಿದು ಒಳಗೆ ಪ್ರವೇಶಿಸಿ,ಕಂಪ್ಯೂಟರ್ ಹಾಗೂ ಕೆನೆನ್ ಕ್ಯಾಮೆರಾ ಕದ್ದೊಯ್ದಿದಿದ್ದಾನೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಇದೇ ಮಸೀದಿಯಲ್ಲಿ ಮೂರನೇ ಭಾರಿ ಕಳ್ಳತನವಾಗುತ್ತಿದೆ. ಸುಮಾರು ಮೂರು ಲಕ್ಷ ರೂ. ಬೆಲೆ ಬಾಳುವ ಕಂಪ್ಯೂಟರ್, ಕೆಮೆರಾ ಕಳುವಾಗಿದೆ. ರಾತ್ರಿ ಮಳೆ ಬರುತ್ತಿದ್ದ ಕಾರಣ ಪ್ರಮುಖ ಪತ್ರಿಕೆಯ ಛಾಯಾಗ್ರಾಹಕ ಅತೀಕ್ ಉರ್ ರೆಹಮಾನ್ ತಮ್ಮ ಕ್ಯಾಮೆರಾವನ್ನು ಮಸೀದಿಯ ಕಚೇರಿಯಲ್ಲಿಟ್ಟು ಮನೆಗೆ ತೆರಳಿದ್ದರು. ಆ ಕ್ಯಾಮೆರಾದೊಂದಿಗೆ ಕಳ್ಳ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.