ಕೆನಡಾ ವಾಟರ್ ಶೃಂಗಸಭೆ ಕೊಡಮಾಡುವ ವಾಟರ್ ನೆಕ್ಸ್ಟ್ 2020 ವಾರ್ಷಿಕ ಪ್ರಶಸ್ತಿಗೆ ಹಾಸನ ಮೂಲದ ಕನ್ನಡತಿ ಚಿತ್ರ ಗೌಡ ಆಯ್ಕೆಯಾಗಿದ್ದಾರೆ.
ನೀರಿನ ಕಾರ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಯೋಜನೆಗಳ ಮೂಲಕ ಮಹತ್ವದ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ನೀಡುವ ಈ ಪ್ರಶಸ್ತಿಗೆ ಮೊಟ್ಟ ಮೊದಲ ಬಾರಿಗೆ ಕನ್ನಡತಿಯೊಬ್ಬರು ಆಯ್ಕೆಯಾಗಿರುವುದು ವಿಶೇಷ.
ಚಿತ್ರ ಗೌಡ ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ತಗಡೂರು ಗ್ರಾಮದ ಪುರುದೇಗೌಡರ ಕುಟುಂಬದ ಡಾ.ಹಾಲಪ್ಪಗೌಡ ಮತ್ತು ರತ್ನಮ್ಮ ಅವರ ಸುಪುತ್ರಿ. ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ಪರಿಸರ ಎಂಜಿನಿಯರಿಂಗ್ ಮುಗಿಸಿರುವ ಚಿತ್ರಾ, ಉದ್ಯೋಗ ನಿಮಿತ್ತ ಕೆನಡಾದಲ್ಲಿ ನೆಲೆಸಿದ್ದಾರೆ.
ನೀರು ಸಂರಕ್ಷಣೆ, ಜಲಾನಯನ ಮೇಲ್ವಿಚಾರಣೆ ಮತ್ತು ಯೋಜನೆ, ಹವಾಮಾನ ಬದಲಾವಣೆಯ ಮೌಲ್ಯಮಾಪನ, ನೀರಿನ ನೀತಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಸಂಬಂಧಿಸಿದಂತೆ ಕೆನಡಾದಲ್ಲಿ ಪ್ರಾಂತೀಯ ಸರ್ಕಾರ, ಪುರಸಭೆ ಮತ್ತು ಸಂಘ ಸಂಸ್ಥೆಗಳ ಜೊತೆಯಲ್ಲಿ ಸುಮಾರು 20 ವರ್ಷಗಳಿಂದ ಚಿತ್ರ ಕೆಲಸ ಮಾಡುತ್ತಿದ್ದಾರೆ.
ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಚಿತ್ರಗೌಡ, ಈ ಸಾಧನೆ
ಗೌರವವನ್ನು ತಂದೆ ಹಾಲಪ್ಪಗೌಡ ಅವರಿಗೆ ಸಮರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ.
Tags
ಚನ್ನರಾಯಪಟ್ಟಣ