ಹಾಸನ,ಜು.4:- ವಾಟೆಹೊಳೆ ಜಲಾಶಯ ಯೋಜನೆ ಅಚ್ಚುಕಟ್ಟಿನ ರೈತರ ಹಿತದೃಷ್ಟಿಯಿಂದ, ವಾಟೆಹೊಳೆ ಜಲಾಶಯದಿಂದ 2020ನೇ ಸಾಲಿನ ಖಾರಿಫ್ ಬೆಳೆಗೆ ಜು.10 ರಿಂದ ನ.30 ರವರೆಗೆ ಒಟ್ಟು 120 ದಿವಸಗಳು ನೀರು ಬಿಡುಗಡೆ ಮಾಡಲಾಗುವುದು ಎಂದು ಹೇಮಾವತಿ ಅಣೆಕಟ್ಟು ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ವಾಟೆಹೊಳೆ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಗಂಗಾಧರ್ ಅವರು ತಿಳಿಸಿದ್ದಾರೆ.
ನೀರು ಬಿಡುಗಡೆ ಮಾಡುವ ನಾಲೆಗಳ ವಿವರ: ವಾಟೆಹೊಳೆ ಬಲದಂಡೆ ನಾಲೆ 0 ಕಿ.ಮೀ ನಿಂದ 37 ಕಿ.ಮೀ ವರೆಗೆ 1 ರಿಂದ 34ನೇ ವಿತರಣಾ ನಾಲೆ 4047 ಎಕರೆ, ನಾಕಲಗೂಡು ಶಾಖಾ ನಾಲೆ 0 ಕಿ.ಮೀ ನಿಂದ 5 ಕಿ.ಮೀ ವರೆಗೆ 1 ರಿಂದ 5ನೇ ವಿತರಣಾ ನಾಲೆ 953 ಎಕರೆ ಹಾಗೂ ವಾಟೆಹೊಳೆ ಎಡದಂಡೆ ನಾಲೆ 0 ಕಿ.ಮೀ ನಿಂದ 10 ಕಿ.ಮೀ ವರೆಗೆ 500 ಎಕರೆ ಸೇರಿದಂತೆ ಒಟ್ಟು 5,500 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಗುವುದು.
ಮುಖ್ಯ ನಾಲೆಯಲ್ಲಿ ಮೇಲೆ ತಿಳಿಸಿದ ಪದ್ದತಿಯನ್ನು ಅನುಸರಿಸಿ ನೀರನ್ನು ಬಿಡಲಾಗುವುದು. ನೀರಿನ ನಿಯಂತ್ರಣವನ್ನು ವಾಟೆಹೊಳೆ ಜಲಾಶಯದಲ್ಲಿರುವ ನೀರಿನ ಶೇಖರಣೆ ಆಧಾರದ ಮೇಲೆ ಮಾಡಲಾಗಿದ್ದು, ಇಂತಹ ನಿಯಂತ್ರಣದ ಸೌಲಭ್ಯ ಮುಂದೆ ಯಾವುದೇ ಪ್ರಾಕೃತಿಕ ಅಥವಾ ನೈಸರ್ಗಿಕ ವ್ಯತ್ಯಾಸದಿಂದ ನೀರಿನ ಕೊರತೆ ಉಂಟಾದಲ್ಲಿ ಬೆಳೆಯ ನಷ್ಟಕ್ಕೆ ಇಲಾಖೆಯವರು ಜವಬ್ದಾರರಲ್ಲ ಹಾಗೂ ರೈತ ಬಾಂಧವರಿಗೆ ಯಾವುದೇ ಕಾರಣಕ್ಕೂ ಪರಿಹಾರ ಕೇಳುವ ಹಕ್ಕು ಇರುವುದಿಲ್ಲ. ನೀರಿನ ನಿಯಂತ್ರಣ ಸೌಲಭ್ಯವನ್ನು ರೈತರು ಕೃಷಿ ಅಧಿಕಾರಿಗಳ ಸಲಹೆ ಪಡೆದು ಸೂಕ್ತ ಬೆಳೆಗಳನ್ನು ಅಳವಡಿಸಿ ಸದುಪಯೋಗ ಪಡೆಯಬೇಕೆಂದು ತಿಳಿಸಲಾಗಿದೆ.
ರೈತ ಬಾಂದವರು ನಿಗದಿತ ಬೆಳೆಯನ್ನು ಬೆಳೆಯತಕ್ಕದ್ದು. ಬೇರೆ ಬೆಳೆಗಳನ್ನು ಬೆಳೆದ ಪಕ್ಷದಲ್ಲಿ ನೀರಾವರಿ ಕಾಯಿದೆ ಸೆಕ್ಷನ್ 32-4(ಬಿ) ಪ್ರಕಾರ ದಂಡ ಕರವನ್ನು ವಿಧಿಸಲಾಗುವುದು ಹಾಗೂ ಆಗಬಹುದಾದ ನೀರು ಕೊರತೆ ಮತ್ತು ಬೆಳೆಯ ನಷ್ಟಕ್ಕೆ ಸಂಬಂಧಿಸಿದ ರೈತರೇ ಜವಾಬ್ದಾರರು.
ನೀರನ್ನು ನಿಲ್ಲಿಸುವ ಅವಧಿಯನ್ನು ಯಾವುದೇ ಸಂದರ್ಭ ಹಾಗೂ ಕಾರಣಗಳಿಗಾಗಿಯೂ ಮುಂದುವರೆಸಲಾಗುವುದಿಲ್ಲ. ನೀರಾವರಿಗಾಗಿ ಸಂಬಂಧಪಟ್ಟ ವಿತರಣಾ ನಾಲಾವಾರು, ಗ್ರಾಮವಾರು, ಸರ್ವೆ ನಂಬರ್ ಹಾಗೂ ಮುಂತಾದ ಮಾಹಿತಿಗೆ ಸಂಬಂಧಿಸಿದ ಉಪವಿಭಾಗ ಕಚೇರಿಯಲ್ಲಿ ಸಂಪರ್ಕಿಸಿ ತಿಳಿಯಬಹುದಾಗಿದೆ ಎಂದು ಹೇಮಾವತಿ ಅಣೆಕಟ್ಟು ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ವಾಟೆಹೊಳೆ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಗಂಗಾಧರ್ ಅವರು ತಿಳಿಸಿದ್ದಾರೆ.
Tags
ಆಲೂರು