ಬಕ್ರೀದ್ ಸಾಮೂಹಿಕ ಪ್ರಾರ್ಥನೆ: ಈದ್ಗಾ ಮೈದಾನದಲ್ಲಿ ನಿರ್ಬಂಧಿಸಲಾಗಿದೆ

ಆಲೂರು :  ಕೊರೋನಾ  ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಆಗಸ್ಟ್ 1 ರಂದು ನಡೆಯುವ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯನ್ನು  ಈದ್ಗಾ ಮೈದಾನಗಳಲ್ಲಿ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಸಕಲೇಶಪುರ ಡಿವೈಎಸ್ಪಿ ಗೋಪಿ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಬಕ್ರೀದ್ ಹಬ್ಬ ಆಚರಣೆಯ ಶಾಂತಿ ಸಭೆಯಲ್ಲಿ ಮಾತನಾಡಿದರು.

ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಯ ಸುತ್ತೋಲೆಯಂತೆ ಆ. 1 ರಂದು ಆಚರಿಸುವ  ಬಕ್ರೀದ್ ಹಬ್ಬದ ದಿನದಂದು ಈದ್ಗಾ ಮೈದಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸುವಂತಿಲ್ಲ ,ಬದಲಾಗಿ ಮಸೀದಿಯಲ್ಲಿಯೇ ಪ್ರಾರ್ಥನೆಯನ್ನು ಸಲ್ಲಿಸುವುದು.  ಮಸೀದಿಯಲ್ಲಿಯೂ ಸಹ  50 ಕ್ಕಿಂತ ಹೆಚ್ಚಿನ ಜನರು ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತಿಲ್ಲ , ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಹಾಕತಕ್ಕದ್ದು,60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿ ಪ್ರಾರ್ಥನೆ ಮಾಡುವುದು, ನಮಾಜ್ ನಿರ್ವಹಿಸುವ ಮಧ್ಯೆ ಕನಿಷ್ಠ 6 ಅಡಿ ಅಂತರ ಕಾಯ್ದು ಕೊಳ್ಳುವುದು,ನಮಾಜ್ ಗೆ ಮಸೀದಿಗೆ ಪ್ರವೇಶಿಸುವ ಮೊದಲು ದೇಹದ ತಾಪಮಾನವನ್ನು ತಪಾಸಣೆ ಮಾಡುವುದು,ಕೈಗಳನ್ನು ಸೋಪು ಅಥವಾ ಸ್ಯಾನಿಟೇಜರ್‌ ನಿಂದ ಶುಚಿಗೊಳಿಸುವುದು, ಮಸೀದಿಯಲ್ಲಿರುವ ಧಾರ್ಮಿಕ ಗ್ರಂಥವನ್ನು ಮುಟ್ಟುವಂತಿಲ್ಲ, ಹಸ್ತಲಾಘವ ಮತ್ತು ಆಲಿಂಗನ ಮಾಡದಿರಲು ಸೂಚಿಸುವುದು, ಅಪರಿಚಿತರು ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಬಂದಲ್ಲಿ ಅವರ ಬಗ್ಗೆ ವಿಶೇಷ ಗಮನ ಹರಿಸುವುದು ಸೇರಿದಂತೆ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ವಹಿಸುವ ಮೊದಲು ಮಸೀದಿಗಳ ಆಡಳಿತ ಮಂಡಳಿ  ಮುನ್ನೆಚ್ಚರಿಕೆ  ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಶಾಂತಿ ಸಭೆಯಲ್ಲಿ ಎಪಿಎಂಸಿ ಜಿಲ್ಲಾಧ್ಯಕ್ಷ ಕೆ.ಎಸ್. ಮಂಜೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಎಚ್. ರಂಗೇಗೌಡ, ಪಟ್ಟಣ ಪಂಚಾಯಿತಿ ಸದಸ್ಯರಾದ ತೌಫಿಕ್,ಅಬ್ದುಲ್ ಖುದ್ದೂಸ್, ಹರೀಶ್ ನಾಜ಼ರೆ,ತಾಲ್ಲೂಕು ಬಿಜೆಪಿ ಘಟಕ ಅಧ್ಯಕ್ಷ ಹರೀಶ್,
ಜಾಮಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ವಹೀದ್ ,ಖಾಲಿದ್ ಪಾಷಾ,ಸರ್ವರ್ ಪಾಷಾ ರಂಗಯ್ಯ ಅಜ್ಜೇನಹಳ್ಳಿ, ಬಸವ ರಾಜು ಗೇಕರವಳ್ಳಿ, ಅರಸಪ್ಪ , ಸಿಪಿಐ ರೇವಣ್ಣ, ಎಸ್ ಐ ಸತ್ಯನಾರಾಯಣ್, ಮಂಜುನಾಥ್ ನಾಯಕ್ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

Post a Comment

Previous Post Next Post