ಕೊರೋನಾ ಅಂತ ಕೇಳಿದಾಕ್ಷಣ ಭಯ,ಜಿಗುಪ್ಸೆ, ಅಸ್ಸಹಾಯಕತೆ, ನಿರುತ್ಸಾಹ ಹೀಗೆ ಎಲ್ಲಿಲ್ಲದ ನೆಗೆಟೀವ್ ಥಾಟ್ಸ್ ನಮ್ಮ ಮುಂದೆ ರಪ್ ಎಂದು ಬಂದುಹೋಗುತ್ತವೆ. ನೆಗೆಟೀವ್ ಥಾಟ್ಸ್ ಹೇಗೋ ಬಂದು ಹೋಗ್ಲಿ ಆದರೆ ಕೊರೋನಾ ಪಾಸಿಟಿವ್ ಬರೋದ್ ಬೇಡ.
ದಿನಬೆಳಗಾದರೆ ನಮ್ಮ ನಮ್ಮ ಕೆಲಸದಲ್ಲಿ ಸುಖನೋ ದುಃಖನೋ ಭಾಗಿಯಾಗ್ತಿದ್ವಿ ಆದ್ರೆ ಇಂದು ನಮ್ಮೆಲ್ಲರಿಗೂ ಹೊರಗಡೆ ಹೋಗಲು ,ಸ್ವತಂತ್ರ ವಾಗಿ ಜೀವಿಸಲು ಕೋರೋನಾ ಅಡ್ಡಿಯಾಗಿದೆ.
ಶಾಲಾಕಾಲೇಜುಗಳಿಲ್ಲದೆ..,
ವಿದ್ಯಾಭ್ಯಾಸ ಕೊಡಿಸಿ ನನ್ನ ಮಗ ಮಗಳಿಗೆ ಉನ್ನತ ಸ್ಥಾನ ಕೊಡಿಸಬೇಕು ಎಂದು ಕಂಡಿದ್ದ ತಂದೆಯ ಕನಸುಗಳು ಇಂದು ನುಚ್ಚುನೂರಾಗಿವೆ. ಮಕ್ಕಳ ಸ್ಥಿತಿ ಅತಂತ್ರವಾಗಿದೆ. ಪ್ರೈಮರಿ ಶಾಲೆ ಮಕ್ಕಳಿಗೆ ಅಬ್ಬಾ ಎಕ್ಸಾಂ ಇಲ್ಲ ರಜಾ ಮಜಾ ಅನ್ಸಿದ್ರೆ, sslc ಅವರಿಗೆ ಹೇಗೋ ಕೊರೋನಾ ಮಧ್ಯೆ ಎಕ್ಸಾಂ ಮುಗಿದಿದೆ ರಿಸಲ್ಟ್ ಏನಾಗುತ್ತೋ ಎಂಬ ಭಯ.ಇನ್ನು puc ಅವರಿಗೆ ರಿಸಲ್ಟ್ ಏನಾಗುತ್ತೋ, ಯಾವ ಕಾಲೇಜಲ್ಲಿ ಸೀಟ್ ಸಿಗತ್ತೋ ಅಂತ ಚಿಂತೆ.ಡಿಗ್ರಿ ಅವರಿಗೆ ಎಕ್ಸಾಂ ನಡೆಯುತ್ತೋ ಇಲ್ವೋ ಪ್ರೊಮೋಟ್ ಮಾಡ್ತಾರೋ ಏನೋ ಅಂತ ಯೋಚ್ನೆ. ಇದು ವಿದ್ಯಾರ್ಥಿಗಳದ್ದಾದರೆ , ದಿನಗೂಲಿ ಸಂಬಳ ನಂಬಿರುವವರ ಜೀವನದ ಸ್ಥಿತಿ ಹೇಳಲಾಗದು. ಹಾಗೇಯೇ ಬೆಂಗಳೂರಲ್ಲಿ ಕೆಲಸ ಬಯಸಿ ಹೋಗಿ ದುಡಿದು ಮನೆಗೆ ತಿಂಗಳಿಗಿಷ್ಟು ಅಂತ ಹಣ ಕಳುಹಿಸುತ್ತಿದ್ದ ಮಗ ಈಗ ಮನೆಯಲ್ಲಿಯೇ ಕೆಲಸವಿಲ್ಲದೆ ಕುಳಿತಿರುವಾಗ ಆತನನ್ನೇ ನಂಬಿ ಜೀವನ ನಡೆಸುತ್ತಿದ್ದ ಮಧ್ಯಮ ವರ್ಗದ ಕುಟುಂಬಕ್ಕೆ ಈಗ ಬಾಯಿಯಲ್ಲಿ ಬಿಸಿ ತುಪ್ಪ ಸುರಿದಂತಾಗಿದೆ.ಇನ್ನು ದೇಶದ ಬೆನ್ನೆಲುಬಾಗಿರುವ ರೈತನಿಗೆ ಎಲ್ಲಾ ಸರಿ ಇದ್ದು ಬೆಳೆದಾಗಲೇ ಬೆಲೆ ಸಿಗುವುದು ಕಷ್ಟ, ಇನ್ನೂ ಇವಾಗ ಕೇಳ್ಬೇಕಾ?.. ಇಷ್ಟೇ ಅಲ್ಲ ಶ್ರೀಮಂತರಿಗೂ ಕೂಡ ಕೊರೋನಾದ ಭಯ ಬೆಂಬಿಡದೆ ಕಾಡುತ್ತಿದೆ.ಸ್ನೇಹಿತರೊಂದಿಗೆ ಹರಟೆ ಹೊಡೆದು ಸಮಯ ಕಳೆಯುತ್ತಿದ್ದವರಿಗಿಂದು ಸಮಯ ಕಳೆಯುವುದೇ ಒಂದು ದೊಡ್ಡ ಯೋಚನೆಯಾಗಿದೆ.
ಇಂತಹ ಸಮಸ್ಯೆಗಳನ್ನೊಡ್ಡಿ ನಮ್ಮ ಜೀವನದ ಜೊತೆ ಆಟವಾಡುತ್ತಿರುವ ಕೊರೋನಾ ವಿರುದ್ದ ಹೋರಾಡುತ್ತಿರುವ ವೈದ್ಯರು , ನರ್ಸ್ಗಳು,ಪೋಲಿಸರು, ಸರ್ಕಾರ ,ಆಶಾಕಾರ್ಯಕರ್ತೆಯರಿಗೆ ಮೊದಲಿಗಿಂತ ಇಂದುಕೆಲಸದೊತ್ತಡ ಹೆಚ್ಚಾಗಿಯೇ ಇದೆ.ಇವರೆಲ್ಲರು ಇಂದು ನಮಗೆ ಪ್ರತ್ಯಕ್ಷ ದೇವರುಗಳಾಗಿದ್ದಾರೆ. ಇವರಿಗೆ ಎಷ್ಟೇ ನಮನ ಸಲ್ಲಿಸಿದರು ಸಾಲದು. ಕೆಲವು ತಿಂಗಳಿಂದ ನಮ್ಮೆಲ್ಲರ ಕೆಲಸ ಕಾರ್ಯಗಳು ಬದಲಾದವು ಆದರೆ ಅಮ್ಮನ ಕೆಲಸ ಇನ್ನೂ ಹೆಚ್ಚಾದವು. ಎದ್ದಾಗಿನಿಂದ ಮಲಗುವ ತನಕ ನಾನ್ ಸ್ಟಾಪ್ ಡ್ಯೂಟಿ.
ಏನೇ ಆಗ್ಲಿ ಬಿಡ್ಲಿ, ನಾಳೆ ಕೊರೋನಾ ಇರುತ್ತೋ ಇಲ್ವೋ ಆದರೆ ನಮ್ಮ ಆಶಾಭಾವನೆ ಕುಗ್ಗಬಾರದು. ಇವಗಿದ್ದೋರು ಇನ್ನೊಂದು ಕ್ಷಣಕ್ಕಿರಲ್ಲ, ಈ ಜೀವನದಲ್ಲಿ ಜೀವಕ್ಕೆ ಗ್ಯಾರಂಟೀನೇ ಇಲ್ಲ ಅಂದ್ಮೇಲೆ ಕೊರೋನಾಗೆ ಹೆದರುವ ಅವಶ್ಯಕತೆನೇ ಇಲ್ಲ.ಹೊರಗಡೆ ಹೋಗದೆ ಮನೆಯಲ್ಲೇ ಸುರಕ್ಷಿತವಾಗಿರೋಣ. ದಿನನಿತ್ಯ ಸ್ಯಾನಿಟೈಸರ್ ಬಳಸೋಣ , ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ. ನಮ್ಮನ್ನು ನಾವು ಕೊರೋನಾದಿಂದ ರಕ್ಷಿಸುವುದರ ಜೊತೆಗೆ ನಮ್ಮ ಕನಸುಗಳ ನನಸಾಗಿಸುವತ್ತ ಮುನ್ನಡೆಯೋಣ.
-ಸಹನ, ಚನ್ನರಾಯಪಟ್ಟಣ
Tags
ಲೇಖನ