ಪ್ರಾಚೀನ 840 ದೇಗುಲಗಳಿಗೆ ಸಿಗಲಿದೆ ಕಾಯಕಲ್ಪ..! ಸರಕಾರಕ್ಕೆ ರಾಜ್ಯ ಪುರಾತತ್ವ ಇಲಾಖೆಯಿಂದ ಪ್ರಸ್ತಾವ

ಇತಿಹಾಸ ಪ್ರಸಿದ್ದ ದೊಡ್ಡಗದ್ದವಳ್ಳಿ ದೇಗುಲದ ಮಹಾಕಾಳಿ ವಿಗ್ರಹ ಭಗ್ನ ಹಿನ್ನೆಲೆಯಲ್ಲಿ ರಾಜ್ಯದ 840 ದೇಗುಲಕ್ಕೆ ತಲಾ ಇಬ್ಬರ ಭದ್ರತೆ ಒದಗಿಸುವ ಹಾಗೂ ಅಭಿವೃದ್ಧಿ ಪಡಿಸುವ ಸಂಬಂಧ ರಾಜ್ಯ ಪುರಾತತ್ವ ಸಂಗ್ರಹಾಲಯ ಹಾಗೂ ಪರಂಪರಾ ಇಲಾಖೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಪ್ರಾಚೀನ ದೇಗುಲಗಳಿಗೆ ರಕ್ಷಣೆ ಒದಗಿಸುವ ಸಂಬಂಧ ಪುರಾತತ್ವ ಸಂಗ್ರಹಾಲಯ ಹಾಗೂ ಪರಂಪರಾ ಇಲಾಖೆ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಶುಕ್ರವಾರ ವಿಡಿಯೋ ಸಂವಾದ ನಡೆದಿದ್ದು, ಕ್ರಿಯಾಯೋಜನೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಇಲಾಖಾ ಆಯುಕ್ತ ಪೂರ್ಣಿಮಾ ತಿಳಿಸಿದ್ದಾರೆ.

ಇತಿಹಾಸವನ್ನು ಬಿಂಬಿಸುವ ಹಾಗೂ ಧಾರ್ಮಿಕ ತಳಹದಿಯ ಪ್ರಾಚೀನ ದೇಗುಲಗಳ ಶಿಲ್ಪಕಲೆಗಳು, ವಿಗ್ರಹಗಳು ಭಕ್ತರನ್ನು, ಪ್ರವಾಸಿಗರನ್ನು ಸೆಳೆಯುವ ಜತೆಗೆ ಗತಕಾಲದ ವೈಭವವನ್ನು ಸಾರುತ್ತಿವೆ. ಇಂತಹ ದೇಗುಲಗಳ ರಕ್ಷಣೆ ಹಾಗೂ ಸಂರಕ್ಷಣೆ ಅತ್ಯಗತ್ಯವಾಗಿರುವ ಹಿನ್ನೆಲೆಯಲ್ಲಿ ರಕ್ಷಣೆ, ಅಭಿವೃದ್ಧಿ ಮೂಲಕ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ನಡೆದಿದೆ.

ಪುರಾತತ್ವ ಇಲಾಖೆ ವ್ಯಾಪ್ತಿಯ ದೇಗುಲಗಳನ್ನು ಮುಜರಾಯಿ, ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಅನುದಾನವನ್ನಾದರೂ ಬಳಸಿ ಅಭಿವೃದ್ಧಿ ಪಡಿಸಬೇಕು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂಬ ಕುರಿತು ಗಂಭೀರ ಚರ್ಚೆ ನಡೆದಿದೆ. ಒಟ್ಟಾರೆ ದೊಡ್ಡಗದ್ದವಳ್ಳಿ ಘಟನೆಯಿಂದ ರಾಜ್ಯದ ಇನ್ನಿತರ ದೇಗುಲಕ್ಕೂ ಕಾಯಕಲ್ಪ ಕಲ್ಪಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೂರು ಇಲಾಖೆ ಜಂಟಿಯಾಗಿ ಕಾರ್ಯಪ್ರವೃತ್ತವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ರಾಜ್ಯ ಸರಕಾರ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಎ ದರ್ಜೆ ದೇಗುಲಗಳಿಗೆ ಸಿಸಿ ಕ್ಯಾಮೆರಾ, ಭದ್ರತೆ ಕಲ್ಪಿಸಲು ಮುಂದಾಗಿದೆ. ಇದಕ್ಕೆ ಕೇಂದ್ರ ಪುರಾತತ್ವ ಇಲಾಖೆ ಭದ್ರತಾ ವೆಚ್ಚ ಭರಿಸಲಾಗಿದೆ. ಆದರೆ ಬೇಲೂರು, ಹಳೇಬೀಡು ದೇಗುಲಕ್ಕೆ ಪೊಲೀಸ್ ರಕ್ಷಣೆಯೇ ಬೇಡ ಎಂದು ಪತ್ರ ಬರೆದಿರುವುದು ಅಚ್ಚರಿ ಮೂಡಿಸಿದೆ.

1 ಕೋಟಿ ವೆಚ್ಚದ ಮ್ಯೂಸಿಯಂ

ಹಾಸನದ ಮಹಾರಾಜ ಪಾರ್ಕ್ನ ನಗರಸಭೆ ಕಟ್ಟಡದಲ್ಲಿದ್ದ ಪುರಾತತ್ವ ಸಂಗ್ರಹಾಲಯ ಶೀಘ್ರವೇ ನಗರ ಕೇಂದ್ರ ಗ್ರಂಥಾಲಯ ಕಚೇರಿ ಆವರಣದ ಶಾಶ್ವತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಒಂದು ಕೋಟಿ ರೂ. ವೆಚ್ಚದಲ್ಲಿ ಮ್ಯೂಸಿಯಂಗೆ ಸೂಕ್ತ ವಾತಾವರಣದ ಮೂರು ಅಂತಸ್ತಿನ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ.

ಅರಕೆರೆ ಚನ್ನಕೇಶವ, ದೊಡ್ಡಗದ್ದವಳ್ಳಿ ಲಕ್ಷ್ಮೀದೇವಿ ದೇಗುಲ, ಗೊರೂರು ತ್ರಿಕೂಟೇಶ್ವರ ದೇವಾಲಯ, ಹೆರಗು ಕೀರ್ತಿನಾರಾಯಣ ದೇವಾಲಯ, ಕೊಂಡಜ್ಜಿ ವಿಷ್ಣು ದೇವಾಲಯ, ಕೋರವಂಗಲ ಗೋವಿಂದೇಶ್ವರ ಮತ್ತು ನಾಕೇಶ್ವರ ದೇವಾಲಯ, ಮರ್ಕುಲಿ ಚನ್ನಕೇಶವಸ್ವಾಮಿ, ಶಾಂತಿಗ್ರಾಮ ಯೋಗಾನರಸಿಂಹ ದೇವಾಲಯ, ಮೊಸಳೆ ನಾಗೇಶ್ವರ ಮತ್ತು ಚನ್ನಕೇಶವ, ಮುದಿಗೆರೆ ಯೋಗಾನರಸಿಂಹ ದೇವಾಲಯ, ಹೊಳೆನರಸೀಪುರ ನರಸಿಂಹ ದೇವಾಲಯ, ಹೊನ್ನಾವರ ಕೇಶವ ದೇವಾಲಯ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಅರಕಲಗೂಡು ತಾಲೂಕು ಮಲ್ಲಿಪಟ್ಟಣ ಲಕ್ಷ್ಮಣೇಶ್ವರ ದೇವಾಲಯ, ರಾಮನಾಥಪುರ ರಾಮೇಶ್ವರ ದೇಗುಲ, ಅರಸೀಕೆರೆ ಹಾರ್ನಹಳ್ಳಿ ಕೇಶವ ದೇಗುಲ, ಸೋಮೇಶ್ವರ ದೇಗುಲ, ಹುಲ್ಲೇಕೆರೆ ಚನ್ನಕೇಶವ ದೇಗುಲ, ಜಾವಗಲ್ ನರಸಿಂಹ ದೇಗುಲ, ಮಾವತನಹಳ್ಳಿ ಮಹಾಲಿಂಗೇಶ್ವರ ದೇವಾಲಯ, ಬೇಲೂರು ಚನ್ನಕೇಶವ ದೇವಾಲಯ, ಚಟ್‌ಚಟಹಳ್ಳಿ ಚನ್ನೇಶ್ವರ ದೇವಾಲಯ, ಹಳೇಬೀಡು ಹೊಯ್ಸಳೇಶ್ವರ ದೇವಾಲಯ, ಶಾಸನಗಳು, ಆದಿನಾಥ ಬಸದಿ, ಪಾಶ್ಚನಾಥ ಬಸದಿ ಕೂಡ ಪುರಾತತ್ವ ಇಲಾಖೆ ಸಿದ್ಧಪಡಿಸಿರುವ ಪಟ್ಟಿಯಲ್ಲಿವೆ.

ಯಾವ ದೇಗುಲಕ್ಕೆ ತನ್ನದೇ ಆದ ಆದಾಯ ಇಲ್ಲವೋ ಅಂತಹ ದೇಗುಲಗಳನ್ನು ನಿರ್ಲಕ್ಷಿಸದೆ ಪುರಾತತ್ವ ಇಲಾಖೆ, ಮುಜರಾಯಿ, ಪ್ರವಾಸೋದ್ಯಮ ಇಲಾಖೆ ಅನುದಾನ ಬಳಸಿಯಾದರೂ ಅಭಿವೃದ್ಧಿಪಡಿಸಲು ಚಿಂತನೆ ನಡೆದಿದೆ ಎಂದು ರಾಜ್ಯ ಪುರಾತತ್ವ ಸಂಗ್ರಹಾಲಯ ಹಾಗೂ ಪರಂಪರಾ ಇಲಾಖೆ ಆಯುಕ್ತ ಪೂರ್ಣಿಮಾ ಹೇಳಿದ್ದಾರೆ.

ಹೊಯ್ಸಳರ ಕಾಲದಲ್ಲಿ ಕ್ರಿ.ಶ.1114ರಲ್ಲಿ ನಿರ್ಮಿಸಿದ ಹಾಸನ ತಾಲೂಕು ದೊಡ್ಡಗದ್ದವಳ್ಳಿ ಚತುನ್ನೋಟ ದೇವಾಲಯ 1958ರಿಂದ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿದೆ. ಇಂತಹ ದೇಗುಲ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವಂತಾಗಬೇಕು ಎಂದು ವಿಶ್ವಕರ್ಮ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷ ಎಚ್.ವಿ.ಹರೀಶ್ ಅಭಿಪ್ರಾಯ ಪಟ್ಟಿದ್ದಾರೆ.

Post a Comment

Previous Post Next Post