ಸೋಂಕು ಹೆಚ್ಚುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದ್ದು, ಮಹಾರಾಷ್ಟ್ರ, ಕೇರಳ, ಪಂಜಾಬ್ ನಂತರ ಕರ್ನಾಟಕವಿದೆ. ಈಗಾಗಲೇ ಬೆಂಗಳೂರಿನಲ್ಲಿ ಶೇಕಡಾ 61ರಷ್ಟು ಲಸಿಕೆ ಹಂಚಿಕೆಯಾಗಿದೆ. ಲಸಿಕೆ ಹಂಚುವ ಪ್ರಕ್ರಿಯೆ ಜಾರಿಯಲ್ಲಿದ್ದರೂ ಸಾರ್ವಜನಿಕ ಗುಂಪು ಸೇರುವ ಚಟುವಟಿಗಳನ್ನು ಏರ್ಪಡಿಸಬಾರದು. ಗುಂಪು ಇರುವ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬೆಂಗಳೂರಿನಲ್ಲಿ ಹೇಳಿದರು.
ಈಗಾಗಲೇ 34 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಿದ್ದೇವೆ. ಕರ್ನಾಟಕದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿದೆ. ಪಾಸಿಟಿವಿಟಿ ಹೆಚ್ಚಾದಂತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಂತರ ಕಾಪಾಡಿಕೊಳ್ಳದಿದ್ದರೆ ಕೊರೊನಾ ಸೋಂಕು ನಿಯಂತ್ರಣ ಮಾಡಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರು ಗುಂಪು ಸೇರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೇ ಅಂತರ ಕಾಪಾಡಲು ಹೆಚ್ಚು ಒಲವು ತೋರಬೇಕು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಮುಂದುವರೆದು ಮಾತನಾಡಿದ ಡಾ.ಕೆ.ಸುಧಾಕರ್, ನಾಡಿದ್ದು (ಮಾರ್ಚ್ 29) ಕರ್ನಾಟಕಕ್ಕೆ ಹನ್ನೆರಡೂವರೆ ಲಕ್ಷ ಡೋಸ್ ಕೊರೊನಾ ಲಸಿಕೆ ಬರಲಿದೆ. ಈ ಲಸಿಕೆಯನ್ನು ಸಹ ತ್ವರಿತಗತವಾಗಿ ವಿತರಣೆ ಮಾಡುತ್ತೇವೆ. ಆದರೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೂನಾ ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪೋಲಿಯೋ ಲಸಿಕೆ ನೆನೆಸಿಕೊಂಡ ಸಚಿವ : ಕೊರೊನಾ ಸೋಂಕು ತಡೆಗಟ್ಟಲು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಇಂದು ಪೊಲಿಯೋ ಲಸಿಕೆ ಕಂಡುಹಿಡಿದ ದಿನ ಎಂದು ಸ್ಮರಿಸಿಕೊಂಡಿದ್ದಾರೆ. 1953ರ ಮಾರ್ಚ್ 27ರಂದು ಮಾನವ ಕುಲಕ್ಕೆ ಕಂಟಕವಾಗಿದ್ದ ಪೊಲಿಯೋಗ ಲಸಿಕೆ ಅಭಿವೃದ್ಧಿಪಡಿಸಲಾಯಿತು. ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬಂತೆ ಇತರರ ಸೇವೆಗಾಗಿ ಸಂಶೋಧಕರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಅವರು ಸ್ಮರಿಸಿಕೊಂಡಿದ್ದಾರೆ.
