ಏನಿದು ಘಟನೆ:
ಜಿಲ್ಲೆಯ ಸಾಲಗಾಮೆ ಗ್ರಾಮ ಪಂಚಾಯಿತಿ ಸಮೀಪದ ಶಂಖ ಗ್ರಾಮದಲ್ಲಿ ದಶಕಗಳ ಹಿಂದೆ ಹೈನುಗಾರಿಕೆಗೆ ಇಂಬು ಕೊಡುವ ನಿಟ್ಟಿನಲ್ಲಿ ಕೆಲವು ಮಹಿಳೆಯರು ಸೇರಿ ಹಾಲು ಉತ್ಪಾದಕರ ಮಹಿಳಾ ಸಂಘವೊಂದನ್ನು ಸ್ಥಾಪನೆ ಮಾಡಿಕೊಂಡಿದ್ದರು. ಅಂದಿನಿಂದ ಸಂಘದ ಕಾರ್ಯದರ್ಶಿ ಉಮ್ಮೇರು ಬಾನುರ ಸ್ವಂತ ಜಾಗದಲ್ಲಿಯೇ ಹಾಲು ಶೇಖರಣೆ ಮಾಡಲಾಗುತ್ತಿತ್ತು. ಆದರೆ, ಕಾರ್ಯದರ್ಶಿಯವರು ಮಾಡಬೇಕಾದ ಕಾರ್ಯವನ್ನು ಅವರ ಪತಿ ಶಾಯಿಲ್ ಮತ್ತು ಡೈರಿ ಒಕ್ಕೂಟದ ಮೇಲ್ವಿಚಾರ ಯಧುರಾಜ್ ಎಂಬುವವರು ಮಾಡುತ್ತಿದ್ದು, ಕಳೆದ 5 ವರ್ಷದಲ್ಲಿ ಸಂಘದಲ್ಲಿ ಸಾಕಷ್ಟು ಅವ್ಯವಹಾರ ಮಾಡಿದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಸೇರಿದಂತೆ ಕಚೇರಿಯನ್ನು ಸರ್ಕಾರಿ ಜಾಗಕ್ಕೆ ಬದಲಾವಣೆ ಮಾಡಬೇಕೆಂದು ಗ್ರಾಮಸ್ಥರೆಲ್ಲಾ ಸೇರಿ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದರು. ಇದರ ಜೊತೆಗೆ ಸಂಘದ ಸುಮಾರು 10 ನಿರ್ದೇಶಕರುಗಳು ರಾಜೀನಾಮೆ ನೀಡಿದ್ದರಿಂದ ಸಂಘ ಸೂಪರ್ ಸೀಡ್ ಮಾಡಿ ಸಂಘಕ್ಕೆ ಇಬ್ಬರು ವಿಶೇಷಾಧಿಕಾರಿಯನ್ನು ನೇಮಕ ಮಾಡಿದ್ದರು.

ಅಧಿಕಾರಿ ಮೇಲೆ ಹಲ್ಲೆ ಮಾಡಿದ ಯುವಕರು:
ಮಹಿಳೆಯರೊಂದಿಗೆ ಅಧಿಕಾರಿ ಸುನೀಲ್ ಚರ್ಚೆ ಮಾಡುತ್ತಿದ್ದ ವೇಳೆ ಚಿತ್ರಿಕರಣ ಮಾಡಲು ಇಬ್ಬರು ಯುವಕರು ಮುಂದಾದರು. ಈ ವೇಳೆ ಚಿತ್ರೀಕರಣ ಮಾಡದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕರು ತಮ್ಮ ಸಹಚರರಾದ ಇಮ್ರಾನ್ ಖಾನ್, ಮುನ್ನಾ, ಸಲೀಂ, ಜಾಫರ್, ಅಮಾನುಲ್ಲಾ ಮತ್ತು ಶಾನು ಎಂಬುವವರು ಸೇರಿಕೊಂಡು ಗಲಾಟೆ ಮಾಡಿದ್ದಾರೆ. ಅಲ್ಲದೇ ಪೂರ್ವನಿಯೋಜಿತವಾಗಿ ತಂದಿದ್ದ ಕೆಲವು ಮಾರಕಾಸ್ತ್ರಗಳಿಂದ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿ ಗ್ರಾಮದಲ್ಲಿ ಗಲಭೆ ಸೃಷ್ಟಿಸಿದ್ದು, ಎರಡು ಗುಂಪಿನ ನಡುವೆ ಮಾರಾಮಾರಿಯಾಗಲು ಕಾರಣಕರ್ತರಾಗಿದ್ದಾರೆ.
ಸ್ಥಳಕ್ಕೆ ಪೊಲೀಸ್ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಪಟ್ಟರೂ ಅವರುಗಳ ಸಮ್ಮುಖದಲ್ಲಿಯೇ ಅಧಿಕಾರಿಗೆ ಮತ್ತು ಅವರ ಕಾರು ಚಾಲಕರಿಗೆ ಸೇರಿದಂತೆ ಗ್ರಾಮದ 8-10 ಮಂದಿಗೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಸಮುದಾಯವೊಂದನ್ನು ಓಲೈಕೆ ಮಾಡುವುದಕ್ಕಾಗಿ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸಮುದಾಯವೊಂದನ್ನು ಕಡೆಗಣಿಸಿ ನಮ್ಮ ಗ್ರಾಮದ ಹಾಲನ್ನು ಡೈರಿಗೆ ಪಡೆಯುತ್ತಿಲ್ಲ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದರು