ಹಾಸನ ಮಾ.24 ( ಹಾಸನ_ಸೀಮೆ.ಇನ್): ರಾಜ್ಯ ಸರ್ಕಾರವು ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಅಮಾನಿಕೆರೆ ಏತ ನೀರಾವರಿಗೆ ರೂ.1,02,59,000, ನುಗ್ಗೆಹಳ್ಳಿ ಏತ ನೀರಾವರಿಗೆ ರೂ.3,50,00,000 ಮತ್ತು ಹಿರಿಸಾವೆ ಶ್ರವಣಬೆಳಗೊಳ ಏತ ನೀರಾವರಿಗೆ ರೂ 1 ಕೋಟಿ ಸೇರಿದಂತೆ ಒಟ್ಟು 5,52,59,000 ರೂಗಳನ್ನು ಮಾ. 22 ರಂದು ಬಿಡುಗಡೆ ಮಾಡಿದೆ.
ವಿಧಾನ ಪರಿಷತ್ ಸದಸ್ಯರಾದ ಎಂ.ಎ ಗೋಪಾಲಸ್ವಾಮಿ ಅವರು ಮಾ.18 ರಂದು ವಿಧಾನ ಪರಿಷತ್ ಕಲಾಪದಲ್ಲಿ ಹೇಮಾವತಿ ನೀರಾವರಿ ಯೋಜನೆಯಡಿ ಕೈಗೊಂಡಿರುವ ಏತ ನೀರಾವರಿ ಕಾಮಗಾರಿಗಳನ್ನು ನಿರ್ವಹಿಸಿರುವ ಗುತ್ತಿಗೆದಾರರಿಗೆ ಶೇಕಡ 80 ರಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ಯೋಜನೆಗಳಿಗೆ ಭೂಮಿ ನೀಡಿರುವ ರೈತರಿಗೆ 30 ಕೋಟಿ ರೂಗಳ ಭೂ ಪರಿಹಾರವನ್ನು ನೀಡಬೇಕಾಗಿದ್ದು, ಹಲವಾರು ವರ್ಷಗಳಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಈ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತ್ಯುತ್ತರವಾಗಿ ಕಂದಾಯ ಸಚಿವರು ಹಂತ ಹಂತವಾಗಿ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ರೈತರಿಗೆ ಭೂ ಪರಿಹಾರ ಹಣವನ್ನು ಬಿಡುಗಡೆ ಮಾಡಿರುವುದಕ್ಕೆ ಮುಖ್ಯಮಂತ್ರಿಗಳು, ವಿಧಾನಸಭೆಯ ವಿರೋಧ ಪಕ್ಷದ ನಾಯಕರು, ಕಂದಾಯ ಸಚಿವರು, ಹಾಸನ ಜಿಲ್ಲಾ ಉಸ್ತುವಾರಿ ಸಚಿವರು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜೈಪ್ರಕಾಶ್ ಅವರಿಗೆ ವಿಧಾನ ಪರಿಷತ್ ಸದಸ್ಯರಾದ ಎಂ.ಎ ಗೋಪಾಲಸ್ವಾಮಿ ಅವರು ಕೃತಜ್ಞತೆ ಸಲ್ಲಿಸಿದ್ದು, ಬಾಕಿ ಉಳಿದಿರುವ ಪರಿಹಾರ ಹಣವನ್ನು ಅತಿ ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ.
