ಕೊಳ್ಳೇಗಾಲ: ಬಾಡಿಗೆ ಹೆಚ್ಚಳ ಮಾಡಿದ ಅಂಗಡಿ ಮಾಲೀಕನಿಗೆ ಬಾಡಿಗೆದಾರ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ಸೋಮವಾರ ರಾತ್ರಿ ಜರುಗಿದೆ.
ಪಟ್ಟಣದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಕೆ.ಎನ್.ಕೆ ಮ್ಯಾನಿಶನ್ ಕಟ್ಟಡ ಮಾಲೀಕ ನಾಗೇಂದ್ರ ಗುಪ್ತ(63) ಹಲ್ಲೆಗೊಳಗಾದ ವ್ಯಕ್ತಿ. ಅದೇ ಕಟ್ಟಡದಲ್ಲಿ ಎಸ್.ಎಲ್.ಆರ್ ಟೆಲಿ ಕಾಮ್ ಮೊಬೈಲ್ ಅಂಗಡಿಯ, ದೇವಾಂಗ ಪೇಟೆಯ ನಿವಾಸಿಯಾದ ವ್ಯಾಪಾರಿ ಮಂಜುನಾಥ್ ಚಾಕು ಹಿರಿದು ಪರಾರಿಯಾದ ಆರೋಪಿ.
ಆರು ತಿಂಗಳ ಹಿಂದೆ ನಾಗೇಂದ್ರ ಗುಪ್ತ ಅಂಗಡಿ ಬಾಡಿಗೆಯನ್ನು ಹೆಚ್ಚಾಗಿ ಕೊಡುವಂತೆ ಬಾಡಿಗೆದಾರ ಮಂಜುನಾಥ್ ಗೆ ತಿಳಿಸಿದ್ದರು. ಇದಕ್ಕೆ ಆರೋಪಿಯು ಒಪ್ಪಿಕೊಂಡಿದ್ದನು.
ಆದರೆ ನಿನ್ನೆ ರಾತ್ರಿ ಬಾಡಿಗೆ ನೀಡುವ ನೆಪದಲ್ಲಿ ಮಾಲೀಕನ ಮನೆಯೊಳಗೆ ನುಗ್ಗಿ ನಾಗೇಂದ್ರ ಗುಪ್ತನ ಹೊಟ್ಟೆಯ ಮೇಲೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ನಾಗೇಂದ್ರ ಕೂಗಿಕೊಂಡಾಗ ಅಕ್ಕಪಕ್ಕದ ಜನರು ಬರುವಷ್ಟರಲ್ಲಿ ಚಾಕುವನ್ನು ಹೊಟ್ಟೆಯಲ್ಲೆ ಬಿಟ್ಟು ಪರಾರಿಯಾಗಿದ್ದಾನೆ.
ಬಳಿಕ ಸ್ಥಳೀಯರು ಗಾಯಾಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.