ನವದೆಹಲಿ : ಬಹುನಿರೀಕ್ಷಿತ ವಾಹನ ಗುಜರಿ ನೀತಿ ಜಾರಿಯಾಗಿದೆ. ಭಾರತದ ಅಭಿವೃದ್ಧಿ ಪಯಣದಲ್ಲಿ ಈ ನೀತಿಯು ಬಹುದೊಡ್ಡ ಮೈಲುಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದಾರೆ.
ಕಳೆದ ಬಜೆಟ್ ಮಂಡನೆ ವೇಳೆ ವಾಹನ ಗುಜರಿ ನೀತಿ ಪ್ರಕಟಿಸಲಾಗಿತ್ತು, 20 ವರ್ಷದಷ್ಟು ಹಳೆಯದಾದ ಖಾಸಗಿ ವಾಹನಗಳು ಹಾಗೂ 15 ವರ್ಷಗಳಷ್ಟು ಹಳೆಯದಾದ ವಾಣಿಜ್ಯ ವಾಹನಗಳನ್ನು ಸ್ಕ್ರಾಪ್ಗೆ ಹಾಕುವ ಸಂಬಂಧ ಹೊಸ ಸ್ಕ್ರಾಪೇಜ್ ನೀತಿಯನ್ನು ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್ ಸಂದರ್ಭದಲ್ಲಿ ಘೋಷಿಸಿದರು.

ಅಯೋಗ್ಯ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಪರಿಸರಸ್ನೇಹಿ ಮಾದರಿಯಲ್ಲಿ ನಿರ್ಮೂಲನೆ ಮಾಡುವುದಕ್ಕೆ ‘ವಾಹನ ಗುಜರಿ ನೀತಿ’ ನೆರವಾಗಲಿದೆ. ದೇಶದಲ್ಲಿ ಸದ್ಯ 51 ಲಕ್ಷಕ್ಕಿಂತ ಹೆಚ್ಚು 20 ವರ್ಷದ ಹಳೆಯ ಲಘು ವಾಹನ, 34 ಲಕ್ಷ 15 ವರ್ಷಕ್ಕಿಂದ ಹೆಚ್ಚು ಹಳೆಯ ಲಘು ವಾಹನ ಮತ್ತು 17 ಲಕ್ಷಕ್ಕಿಂತ ಹೆಚ್ಚು 15 ವರ್ಷದ ಭಾರಿ ವಾಣಿಜ್ಯ ವಾಹನಗಳಿದೆ.
ಗುಜರಿ ನೀತಿಯು ಸುಮಾರು ಶೇ 40ರಷ್ಟು ಕಚ್ಚಾ ವಸ್ತುಗಳ ವೆಚ್ಚವನ್ನು ತಗ್ಗಿಸಲಿದೆ, ಸುಮಾರು 22,000 ಕೋಟಿ ರೂ ಮೌಲ್ಯದ ಉಕ್ಕನ್ನು ದೇಶಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ, ಹಳೆಯ ವಾಹನಗಳನ್ನು ಗುಜರಿಗೆ ಹಾಕುವುದು ಈ ಅವಲಂಬನೆಯನ್ನು ತಗ್ಗಿಸಲಿದೆ, ಇದು ದೇಶದ ಇಂಧನದ ಅವಲಂಬನೆ ಕಡಿಮೆ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಹೊಸ ನೀತಿಯಿಂದ ದೇಶವು ಆಟೋಮೋಟಿವ್ ಉತ್ಪಾದನೆಯಲ್ಲಿ ಕೈಗಾರಿಕಾ ಹಬ್ ಆಗಿ ಬೆಳೆಯಲಿದೆ. ಇದರ ಜೊತೆಗೆ ವಾಹನ ಗುಜರಿ ನೀತಿಯಿಂದ ಜನರಿಗೆ ಹಲವು ಲಾಭಗಳಿದೆ, ಮೊದಲನೆಯದಾಗಿ, ಹಳೆಯ ಕಾರನ್ನು ಗುಜರಿಗೆ ಹಾಕುವಾಗ ಒಂದು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ, ಕಾರನ್ನು ಗುಜರಿಗೆ ಹಾಕಿದ ವ್ಯಕ್ತಿಯು ಹೊಸ ಕಾರು ಖರೀದಿಸುವಾಗ ನೋಂದಣಿ ಶುಲ್ಕ ಪಾವತಿಸುವ ಅಗತ್ಯವಿಲ್ಲ, ಅಲ್ಲದೆ, ರಸ್ತೆ ತೆರಿಗೆಯಲ್ಲಿ ರಿಯಾಯಿತಿ ಸಿಗಲಿದೆ. ಎರಡನೆಯದಾಗಿ, ವಾಹನ ಮಾಲೀಕರು ಹಳೆಯ ಕಾರಿನ ನಿರ್ವಹಣೆ ವೆಚ್ಚ, ರಿಪೇರಿ ವೆಚ್ಚ ಮತ್ತು ಇಂಧನ ದಕ್ಷತೆಯ ಮೇಲಿನ ಹಣವನ್ನು ಉಳಿತಾಯ ಮಾಡಲಿದ್ದಾರೆ.
