ಹಾಸನ ಜಿಲ್ಲೆಯ ಈ ಊರಿಗೆ ನೆಂಟರು ಬಂದ್ರೆ ಮಧ್ಯರಾತ್ರಿಗೇ ಜಾಗ ಖಾಲಿ ಮಾಡ್ತಾರೆ

ಈ ಊರಲ್ಲಿ ಮಾತ್ರ ಬಹಳ ವಿಚಿತ್ರ ಪರಿಸ್ಥಿತಿ. ಎಲ್ರೂ ರಸ್ತೆ ಬೇಕು, ನೀರು ಬೇಕು ಅಂತ ಪ್ರತಿಭಟನೆ ಮಾಡಿದ್ರೆ ಈ ಊರಿನ ಜನ ಮಾತ್ರ ನೆಮ್ಮದಿಯಾಗಿ ನಿದ್ದೆ ಮಾಡೋಕೆ ಅವಕಾಶ ಮಾಡ್ಕೊಡಿ ಅಂತ ಪ್ರತಿಭಟನೆ ಮಾಡುವ ಪರಿಸ್ಥಿತಿ ಇದೆ. ಜಾನುವಾರುಗಳಿಗೂ ಫ್ಯಾನ್ ವ್ಯವಸ್ಥೆ ಬೇಕೇ ಬೇಕು..ಇನ್ನು ನೆಂಟರಂತೂ ಊರಿನ ಹೆಸರು ಕೇಳಿದ್ರೆ ಬೆಚ್ಚಿಬೀಳ್ತಾರೆ..ಹಾಗಿದೆ ಇಲ್ಲಿನ ದುರವಸ್ಥೆ.

 


ಹಾಸನ: ಗ್ರಾಮಗಳೆಂದರೆ ಅಲ್ಲಿ‌ ರಸ್ತೆ, ಚರಂಡಿ ಮೂಲಭೂತ ಸೌಕರ್ಯಗಳ ಕೊರತೆಯಿರುವುದು ಸರ್ವೆ ಸಾಮಾನ್ಯ. ಇದಕ್ಕೆ ತದ್ವಿರುದ್ದವಾಗಿದೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ಅಡಗೂರು ಗ್ರಾಮ. ಪಟ್ಟಣ ಪ್ರದೇಶದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಗ್ರಾಮ ಸೇರಿದಂತೆ ಅಕ್ಕಪಕದ  ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ನಾಲೆ ಹಾದು ಹೋಗಿದೆ. ಜಿಲ್ಲೆಯ ಜೀವನದಿ ಹೇಮಾವತಿ ನದಿಯಿಂದ ನಾಲೆ ಮೂಲಕ ನೀರು ತುಂಬಿಸಲಾಗುತ್ತಿದೆ. ಇದರಿಂದಾಗಿ ಗ್ರಾಮದ ಕೆರೆಯಲ್ಲಿ ಸದಾಕಾಲ ನೀರು ಇರುತ್ತದೆ. ಆದರೆ ಈ ನಾಲೆಯೇ ಗಾಮಕ್ಕೆ ಕಂಟಕವಾಗಿದೆ. ಚನ್ನರಾಯಪಟ್ಟಣದಿಂದ ಯುಡಿಜಿ,ಕೊಳಚೆ ನೀರು, ತ್ಯಾಜ್ಯ ನಾಲೆಯ ಮೂಲಕ ಈ ಗ್ರಾಮದ ಕೆರೆ ಸೇರುತ್ತಿದ್ದು ಕೆರೆಯ ನೀರು ಸಂಪೂರ್ಣ ಕಲುಷಿತವಾಗಿದೆ. ಅದು ಎಷ್ಟರಮಟ್ಟಿಗೆ ಎಂದರೆ, ದನಕರುಗಳು ನೀರನ್ನು ಸಹ ಕುಡಿಯದಷ್ಟು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳ ಉತ್ಪಾದನಾ ಕಾರ್ಖಾನೆಯಾಗಿದೆ. ಸುಮಾರು ನೂರು ಎಕರೆ ಪ್ರದೇಶದಲ್ಲಿರುವ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ಗಿಡಗೆಂಟೆಗಳು ಬೆಳಿದಿವೆ. ಕೊಳಚೆ ನೀರಿನಿಂದ ನೀರು ಕಪ್ಪು ಬಣ್ಣವಾಗಿದ್ದು, ಕಲುಷಿತ ನೀರಿನಿಂದ ಸೊಳ್ಳೆಗಳು ವಿಪರೀತವಾಗಿವೆ.

 

ಅದು ಯಾವಮಟ್ಟಿಗೆ ಎಂದರೆ ಸೊಳ್ಳೆ ಪರದೆಗಳಿಲ್ಲದೆ ಮನೆಯಲ್ಲಿ‌ ಇರಲು, ಮಲಗಲು ಸಾಧ್ಯವೇ ಇಲ್ಲದಂತಾಗಿದೆ. ಸೊಳ್ಳೆಗಳು ಜಾನುವಾರುಗಳ ರಕ್ತ ಹೀರುತ್ತಿವೆ. ನೆಂಟರು ಬಂದು ಮನೆಯಲ್ಲಿ ಉಳಿದುಕೊಂಡಿದ್ದು, ಸೊಳ್ಳೆಗಳ ಕಾಟದಿಂದ ಮದ್ಯರಾತ್ರಿಯೇ ಎದ್ದು ಹೋಗಿರುವ ಉಧಾಹರಣೆಗಳಿವೆ. ಸೊಳ್ಳೆಗಳ ಕಾಟದಿಂದ ಇಡೀ ಗ್ರಾಮದ‌ ಜನರು ಹೈರಾಣಾಗಿ ಹೋಗಿದ್ದಾರೆ. ಹಗಲು ರಾತ್ರಿ ಎನ್ನುವಂತಿಲ್ಲ ಮನುಷ್ಯರು, ಜಾನುವಾರುಗಳೆನ್ನದೆ ರಕ್ತ ಹೀರುತ್ತವೆ.


ಪ್ರತಿ ಮನೆಯಲ್ಲೂ ಸೊಳ್ಳೆ ಪರದೆ, ಮಸ್ಕಿಟೋ ಕಾಯಿಲ್ ಇವೆ. ಕೊಟ್ಟೆಗಳಿಗಳಲ್ಲಿ ದನಕರುಗಳಿಗೆ ಸೊಳ್ಳೆ ಕಚ್ಚದಂತೆ ಸೊಳ್ಳೆಪರದೆ ಹಾಗೂ ಮಸ್ಕಿಟೋ ಕಾಯಿಲ್‌ ಹಾಕುತ್ತಿದ್ದಾರೆ. ಸೊಳ್ಳೆಗಳ ಸಮಸ್ಯೆಯಿಂದ‌ ರೋಸಿ ಹೋಗಿರುವ ಗ್ರಾಮಸ್ಥರು ಸಾಕಷ್ಟು ಭಾರಿ ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾರೂ ಕೂಡ ಇತ್ತ ಗಮಹರಿಸಿ ಸಮಸ್ಯೆ ಬಗೆಹರಿಸಿಲ್ಲ.  ದುರಂತವೆಂದರೆ ಶ್ರವಣಬೆಳಗೊಳದ ಕ್ಷೇತ್ರದ ಶಾಸಕ‌ ಸಿ.ಎನ್.ಬಾಲಕೃಷ್ಣ ಅವರ ಹುಟ್ಟೂರು ಕಾಳೇನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತೆ ಅಡಗೂರು ಗ್ರಾಮವಿದ್ದು ಅವರ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ.

ಸೊಳ್ಳೆಗಳ ಕಾಟ ತಪ್ಪಿಸಿ ಎಂದು ಮನವಿ ಪತ್ರದೊಂದಿಗೆ ಇಂದಿಗೂ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ ಕಚೇರಿ ಅಲೆಯುತ್ತಿದ್ದಾರೆ. ಸೊಳ್ಳೆಪರದೆ ಕೊಳ್ಳಲು ಸಾಧ್ಯವಿಲ್ಲದ ಬಡಕುಟುಂಬಗಳು, ಸೊಳ್ಳೆಬತ್ತೆ ಹಚ್ಚಿ ಮಲಗುತ್ತಿದ್ದು ಅದರ ಹೊಗೆ ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅದೆಷ್ಟೋ‌ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಎಂದು ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ. ಆದರೆ ಸೊಳ್ಳೆಗಳ ಕಾಟ ತಾಳಲಾದರೆ ಸೊಳ್ಳೆಗಳಿಂದ ನಮ್ಮನ್ನು ಹಾಗೂ ಜಾನುವಾರುಗಳನ್ನು ರಕ್ಷಿಸಿ ಎಂದು ಅಡಗೂರು ಗ್ರಾಮಸ್ಥರು ಮನವಿ ಮಾಡುತ್ತಿದ್ದು, ಇನ್ನಾದರೂ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ ಸೊಳ್ಳೆಗಳ ಕಾಟಕ್ಕೆ ಮುಕ್ತಿ‌ನೀಡಬೇಕಿದೆ.

Post a Comment

Previous Post Next Post