ಸಮಾಜ ಸೇವೆಯ ಜೊತೆಗೆ ಸಮುದಾಯದ ಸೇವೆ: ಸುರಭಿರಘು

ಬೇಲೂರು:ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದಿಂದ ಒಕ್ಕಲಿಗ ಸಮುದಾಯದ ಬಡವರಿಗೆ, ಮಧ್ಯಮವರ್ಗದವರಿಗೆ ಅನುಕೂಲ ಆಗುವಂತ ಯೋಜನೆಗಳ ಕೈಗೆತ್ತಿಕೊಳ್ಳಲಾಗುವುದು ಎಂದು ಒಕ್ಕಲಿಗ ಅಭಿವೃದ್ಧಿ ನಿಗಮದ ನಿರ್ದೇಶಕಿ ಸುರಭಿರಘು ಹೇಳಿದರು.





ಇಲ್ಲಿನ ಒಕ್ಕಲಿಗ ಸಮುದಾಯದಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಲ್ಲಿಯವರಗೆ ಸುರಭಿಪೌಂಡೇಶನ್ ವತಿಯಿಂದ ಸಮಾಜದ ನೊಂದವರ ಕೈಲಾದಷ್ಟು ನೆರವು ಒದಗಿಸುತ್ತಿದ್ದೆ ಇದೀಗ ಒಂದು ಸಮುದಾಯದ ಅಭಿವೃದ್ಧಿ ನಿಗಮದ ನಿರ್ದೇಶಕಿಯಾಗಿ ಸಮುದಾಯದ ನೊಂದವರ ಪರವಾಗಿ ಕೆಲಸ ಮಾಡಲು ಅವಕಾಶ ದೊರೆತಿದೆ. 


ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿ ಮನವಿ ಮಾಡಿದ್ದರು. ನಾವೂ ಸಹ ನಿಯೋಗದ ಮೂಲಕ ಕೋರಿಕೆ ಇಟ್ಟಿದ್ದೆವು. ಪರಿಣಾಮ ಜಾತಿ, ಮತ, ಪಂಥ ನೋಡದೆ ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿತವಾಗಿದೆ ಎಂದು ಹೆರ್ಷ ವ್ಯಕ್ತಪಡಿಸಿದರು.

Advertisement


ಒಕ್ಕಲಿಗ ಸಮುದಾಯದಲ್ಲಿ ಸ್ವಯಂ ಉದ್ಯೋಗ ಆರಂಭಿಸಲು ನಿಗಮದ ಮೂಲಕ ತರಬೇತಿಗಳ ಏರ್ಪಡಿಸಲಾಗುವುದು, ನಿಗಮದಲ್ಲಿ ಸಾಕಷ್ಟು ಯೋಜನೆಗಳಿದ್ದು ಅದನ್ನು ಸಾಕಾರಗೊಳಿಸಲಾಗುವುದು. ಸುರಭಿ ಪೌಂಡೇಷನ್ ಆರಂಭಿಸಿ ಮಹಿಳೆಯರ ಪರವಾಗಿ ಕೆಲಸ ಮಾಡಿ ಅನುಭವ ಇರುವ ನಾನು ಇದೀಗ ಒಂದು ಸಮುದಾಯದ ಬಡವರ ಪರವಾಗಿಯೂ ಕರ್ತವ್ಯ ನಿರ್ವಹಿಸುವ ಹೊಣೆಗಾರಿಕೆ ಬಂದಿದೆ. ಇಂದು ನನ್ನನ್ನು ಸನ್ಮಾನಿಸಿ ಜವಾಬ್ದಾರಿ ಹೆಚ್ಚಿಸಿದ್ದೀರಿ ಎಂದು ಹೇಳಿದರು.

ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ನಿರ್ದೇಶಕಿಯಾಗಿದ್ದರೂ ರಾಜಕೀಯವಾಗಿಯೂ ನಾನು ಬಿಜೆಪಿ ಪಕ್ಷದಲ್ಲಿ ಜವಾಬ್ದಾರಿಯುತ ಹುದ್ದೆ ಹೊಂದಿರುವುದರಿAದ ಎಲ್ಲಾ ವರ್ಗದ ಮಹಿಳೆಯರ ಪರವಾಗಿಯೂ ಕೆಲಸ ಮಾಡಬೇಕಿದೆ. ಒಕ್ಕಲಿಗ ಎಂದರೆ ಕೃಷಿ ಕುಟುಂಬವಾಗಿದ್ದು ನೆಲ, ಜಲ, ಬಿತ್ತನೆ ಇವುಗಳೆ ನಮ್ಮ ಮೂಲ ಕಸುಬಾಗಿದೆ. ಹಿಂದೆ ಕೃಷಿಕ ಒಕ್ಕಲಿಗ ದೊಡ್ಡ ಕುಟುಂಬ ಇಂದು ಹಂಚಿಹೋಗಿದೆ. ಇತ್ತೀಚಗೆ ಕೃಷಿಯನ್ನು ಕೈಬಿಟ್ಟು ಇತರೆ ಉದ್ಯೋಗ ಹರಿಸಿ ಹೋಗುತ್ತಿದ್ದಾರೆ ಎಂದರು.


ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ಪಿ.ಶೈಲೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಕ್ಕಲಿಗರಲ್ಲಿಯೂ ಸಾಕಷ್ಟು ಜನ ಬಡವರಿದ್ದಾರೆ. ಒಕ್ಕಲಿಗರ ಅಭಿವೃದ್ಧಿ ನಿಗಮದಿಂದ ಹೆಚ್ಚಿನ ಕೆಲಸ ಮಾಡಿಸಿಕೊಡಬೇಕು. ಬೇಲೂರಿನ ಹೊಳೆ ಬೀದಿಯಲ್ಲಿರುವ ಒಕ್ಕಲಿಗರ ನಿವೇಶನದಲ್ಲಿ ಕಲ್ಯಾಣ ಮಂಟಪವೊAದನ್ನು ನಿರ್ಮಿಸಲು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದರು. ಬೇಲೂರಿನ ಮೊಮ್ಮಗಳು ಸುರಭಿರಘು ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ ನಿರ್ದೇಶಕಿ ಆಗಿರುವುದು ತಾಲ್ಲೂಕಿನ ಒಕ್ಕಲಿಗ ಸಮುದಾಯಕ್ಕೆ ಸಂತಸ ಉಂಟು ಮಾಡಿದೆ. ರಾಜಕೀಯವಾಗಿ ಇಂದು ಮುಂಚೂಣಿಯಲ್ಲಿರುವ ಸುರಭಿರಘು ಅವರು, ಹೊರಗಿನವರು ಎನ್ನುವ ಭಾವನೆ ಇಲ್ಲ. ಇಲ್ಲಿಯವರಗೆ ಶಾಸಕರಾದವರಲ್ಲಿ ವೈಎನ್.ರುದ್ರೇಶಗೌಡರು, ಡಿ.ಮಲ್ಲೇಶ್ ಹೊರತುಪಡಿಸಿ ಉಳಿದವರೆಲ್ಲರೂ ಹೊರಗಿನವರೇ ಆಗಿದ್ದಾರೆ. ಸುರಭಿರಘು ತೌವರುಮನೆಯ ಮಗಳು ಎಂದು ಹೇಳಿದರು.


ಒಕ್ಕಲಿಗ ಸಂಘದ ಸಂಘಟನ ಕಾರ್ಯದರ್ಶಿ ಬೋಜೇಗೌಡ ಮಾತನಾಡಿ, ಹತ್ತಾರು ಸಾವಿರ ಸಂಖ್ಯೆಯಲ್ಲಿ ಒಕ್ಕಲಿಗರು ಇದ್ದರೂ ಬೆರಳೆಣಿಕೆಯಷ್ಟು ಜನ ಕಾರ್ಯಕ್ರಮಕ್ಕೆ ಬಂದಿರುವುದು ಬೇಸರವಾಗಿದೆ. ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮೊದಲಿಗೆ ಆಗ್ರಹಿಸಿದ್ದು ನಾನು ಎಂದು ನೆನಪು ಮಾಡಿಕೊಂಡರು. ಅಭಿವೃದ್ಧಿ ನಿಗಮಕ್ಕೆ ೫೦೦ ಕೋಟಿ ರೂ. ಅನುದಾನ ನೀಡಿದ್ದು ಇದನ್ನು ೨ ಸಾವಿರ ಕೋಟಿ ರೂ.ಗಳಿಗೆ ಏರಿಕೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದರು. 

ತಾಲ್ಲೂಕು ಒಕ್ಕಲಿಗ ಮಹಿಳಾ ಘಟಕದ ಅಧ್ಯಕ್ಷೆ ಭಾರತಿಗೌಡ ಮಾತನಾಡಿ, ಒಕ್ಕಲಿಗ ಸಮುದಾಯದಲ್ಲಿ ಸಂಕಷ್ಟದಲ್ಲಿ ಇರುವವರಿಗೆ ಅಭಿವೃದ್ಧಿ ನಿಗಮದಿಂದ ನೆರವು ಒದಗಿಸುವಂತೆ ಮನವಿ ಮಾಡಿದರು. ಯುವ ಘಟಕದ ಗೌರವಾಧ್ಯಕ್ಷ ಬಾರ್‌ಗಿರೀಶ್, ಜಾವಗಲ್ ದಯಾನಂದ್ ಮಾತನಾಡಿದರು. ಒಕ್ಕಲಿಗ ಯುವವೇದಿಕೆ, ಒಕ್ಕಲಿಗರ ಮಹಿಳಾ ಸಂಘದಿAದ ಸುರಭಿರಘು ಅವರನ್ನು ಗೌರವಿಸಲಾಯಿತು. ಒಕ್ಕಲಿಗ ಸಂಘದ ಉಪಾಧ್ಯಕ್ಷ ಲಕ್ಷö್ಮಣಗೌಡ, ಫೈನಾನ್ಸ್ಚಂದ್ರು, ಬಸವರಾಜು, ಶ್ರೀದೇವಿ, ಮುದ್ದಮ್ಮ, ಲಕ್ಷ್ಮೀ, ಉಷಾ ಇತರರು ಇದ್ದರು. 


Post a Comment

Previous Post Next Post