ಮುಂಗಾರು ಮುಗಿದು ಹಿಂಗಾರು ಮುಗಿಯುವ ಹಂತಕ್ಕೆ ಬಂದರೂ ಹವಾಮಾನ ವೈಪರೀತ್ಯದಿಂದ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ತಾಲೂಕಿನ ಕಾಫಿ ಬೆಳೆಗಾರರ ವಲಯದಲ್ಲಿ ಆತಂಕ ಹುಟ್ಟಿದೆ. ಕಳೆದ 2 ವರ್ಷಗಳಿಂದ ಹವಮಾನ ವೈಪರೀತ್ಯದಿಂದ ಮಳೆ ಸುರಿಯುವುದರಲ್ಲಿ ವ್ಯತ್ಯಾಸವಾಗುತ್ತಿರುವುದು ಕಂಡು ಬಂದಿದ್ದರೂ ಸಹ ಈ ವರ್ಷದಷ್ಟು ಗಂಭೀರ ಪರಿಸ್ಥಿತಿ ಕಂಡು ಬಂದಿರಲಿಲ್ಲ.
ಸಾಮಾನ್ಯವಾಗಿ ಅಕ್ಟೋಬರ್ ಹಾಗೂ ನವೆಂಬರ್ ಮಾಹೆಯಲ್ಲಿ ಅರೇಬಿಕಾ ಕಾಫಿ ಕೊಯ್ಲಿಗೆ ಬರುವುದು ಸಾಮಾನ್ಯವಾಗಿದ್ದು, ಈ ಬಾರಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಶೇ.25 ರಷ್ಟು ಅರೇಬಿಕಾ ಕಾಫಿ ಭೂಮಿ ಸೇರಿದೆ. ಬಾಕಿ ಉಳಿದ ಕಾμಯನ್ನು ಕೊಯ್ಲು ಮಾಡಲು ಬೆಳೆಗಾರರು ಆತಂಕ ಎದುರಿಸುತ್ತಿದ್ದಾರೆ.
ಮಳೆಯ ಹಿನ್ನೆಲೆಯಲ್ಲಿ ಕಾಫಿ ಒಣಗಿಸುವುದು ಅಸಾಧ್ಯವಾಗಿರುವುದರಿಂದ ಕಳೆದ 15 ದಿನಗಳಿಂದ ಕಾಫಿ ಕೊಯ್ಲು ಮಾಡುವುದನ್ನು ಮುಂದೂಡುತ್ತಿದ್ದು ಬೆಳೆಗಾರರು ಇದೀಗ ಮಳೆ ನಿಲ್ಲದ ಕಾರಣ ಇತ್ತ ಅರೇಬಿಕಾ ಹಣ್ಣನ್ನು ಗಿಡದಲ್ಲಿ ಬಿಡಲು ಆಗದೆ ಒಣಗಿಸಲು ಆಗದೆ ಆತಂಕಕ್ಕೆ ಸಿಲುಕಿಕೊಂಡಿದ್ದಾರೆ.
ಹಾಗೂ ಹೀಗೂ ಕಾಫಿಯನ್ನು ಕಷ್ಟಪಟ್ಟು ಒಣಗಿಸಿದರೆ ಕಾಫಿಯ ಗುಣಮಟ್ಟ ಸಂಪೂರ್ಣವಾಗಿ ಕುಸಿದು ಮಾರುಕಟ್ಟೆಯಲ್ಲಿ ಇಂತಹ ಕಾಫಿ ಬೇಡಿಕೆ ಕಳೆದುಕೊಳ್ಳುವುದರಿಂದ ಬೆಳೆಗಾರರ ನೋವು ಯಾರಿಗೂ ಹೇಳದಂತಾಗಿದೆ.
ಸುರಿಯುತ್ತಿರುವ ಮಳೆಯಿಂದ ಕಾಫಿಯ ರಕ್ಷಣೆಗಾಗಿ ಅರೇಬಿಕಾ ಕಾಫಿ ಬೆಳೆಗಾರರು ಕಟಾವು ಮಾಡಿದ ಕಾಫಿ ಯನ್ನು ಒಣಗಿಸಲು ವ್ಯಾಪಕ ಸರ್ಕಸ್ ಮಾಡುತ್ತಿದ್ದು ಗೋದಾಮು ಹಾಗೂ ಮನೆಯ ಒಳಗೂ ಸಹ ಕಾಫಿ ಯನ್ನು ಹರಡಿ ಒಣಗಿಸಲಾಗುತ್ತಿದೆ ಇನ್ನೂ ಕೆಲವರು ಇಟ್ಟಿಗೆ ಇಟ್ಟು ಸೌದೆ ಓಲೆಯ ಮೇಲೆ ದೊಡ್ಡ ತಗಡು ಇಟ್ಟು ಕಾಫಿ ಒಣಗಿಸಲಾಗುತ್ತಿದೆ.
"ಹವಾಮಾನ ವೈಪರೀತ್ಯದಿಂದ ಮಳೆ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಮೊನ್ನೆ ಸುರಿದ ಮಳೆಯಿಂದ ಕಾಫಿ, ಮೆಣಸು, ಎಲಕ್ಕಿ ಉದುರಿ ನೆಲಕಚ್ಚುತ್ತಿದ್ದು ಕಾಫಿ ಬೆಳೆಗಾರರು ಅತಂಕ ಪಡುವಂತಾಗಿದೆ ಅದ್ದರಿಂದ ಕೇಂದ್ರ, ರಾಜ್ಯ ಸರ್ಕಾರಗಳು ಪರಿಹಾರ ನೀಡುವುದರ ಬದಲು ಮಳೆಯಿಂದ ಆಗಿರುವ ನಷ್ಟವನ್ನು ಬರಿಸಬೇಕು." ● ಪೂವಯ್ಯ,ಬೆಳೆಗಾರರು, ಕೆ.ಹೊಸಕೋಟೆ
"ಇತ್ತೀಚೆಗೆ ಸುರಿದ ಮಳೆಯಿಂದ ಕಾಪಿ ಹಣ್ಣು ನೆಲಕಚ್ಚುತದತಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ ತಾಲ್ಲೂಕು ಆಡಳಿತ ಈ ಸಮಯದಲ್ಲಿ ನಿದ್ದೆ ಹೊಡೆಯಬಾರದು ವಸ್ತುಸ್ಥಿತಿ ವರದಿ ನೀಡಬೇಕು ತಹಶಿಲ್ದಾರ್ ಕೆಳ ಮಟ್ಟದ ಅಧಿಕಾರಿಗಳ ಸಭೆ ಕರೆದು ಹೆಚ್ಚು ಜವಾಬ್ದಾರಿ ನೀಡಬೇಕು." ● ಶಶಿಧರ ಬಿಜೆಪಿ ಮುಖಂಡರು
- – ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ