ಹಾಸನ : ಉಚಿತ ಬಸ್ ಪಾಸ್ ನೀಡುವ ನೆಪದಲ್ಲಿ ಸರಕಾರವು ಕಾನರ್ಮಿಕ ಮಂಡಳಿಯಲ್ಲಿರುವ ಕಾರ್ಮಿಕರ ಹಣವನ್ನು ಲೂಟಿ ಹೊಡೆಯುವ ಹುನ್ನಾರ ನಡೆಸಿದೆ ಎಂದು ಆರೋಪಿಸಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆಗಳು, ಕಾರ್ಮಿಕ ಇಲಾಖೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರವು ಬಸ್ ಪಾಸ್ಗಳನ್ನು ಕಟ್ಟಡ ಕಾರ್ಮಿಕರಿಗೆ ನೀಡುವ ನೆಪದಲ್ಲಿ ವರ್ಷಕ್ಕೆ 5 ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ಸರಕಾರವು ಪಡೆಯುವ ಉದ್ದೇಶಹೊಂದಿದೆ. ಬಸ್ಪಾಸ್ ನೆಪದಲ್ಲಿ ಕಟ್ಟಡ ಕಾರ್ಮಿಕ ನಿಧಿ ಹಣವನ್ನು ಯಾವ ಕಾರಣಕ್ಕೂ ತೆಗೆಯಬಾರದು. ತೆಗೆದರೆ ನಮ್ಮ ಬೊಕ್ಕಸ ಖಾಲಿಯಾಗುತ್ತದೆ. ಮುಂದೆ ಕಲ್ಯಾಣ ಕೆಲಸಗಳಿಗೆ ಹಣ ಇಲ್ಲದಂತಾಗುತ್ತದೆ. ಸರ್ಕಾರದ ಕ್ರಮವನ್ನು ಖಂಡಿಸಿ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರು ಹೋರಾಟಕ್ಕೆ ಇಳಿದಿದ್ದಾರೆ. ಈಗ ಕೆಎಸ್ಆರ್ಟಿಸಿಯಿಂದ 45 ಕಿಮೀ ಬಸ್ ಪಾಸ್ ಸೌಲಭ್ಯವನ್ನು ಕಟ್ಟಡ ಕಾರ್ಮಿಕರಿಗೆ ಒದಗಿಸಲಾಗುತ್ತಿದೆ. ಈ ಬಸ್ ಪಾಸ್ಗೆ ಮಾಸಿಕ 1400 ರೂಗಳನ್ನು ಒಬ್ಬ ಕಾರ್ಮಿಕನಿಗೆ ಮಂಡಳಿಯು ಕೆಎಸ್ಆರ್ಟಿಸಿಗೆ ಪಾವತಿಸುತ್ತಿದೆ. ಒಟ್ಟು 37 ಲಕ್ಷ ಜನ ಕಟ್ಟಡ ಕಾರ್ಮಿಕರು ನಮ್ಮ ರಾಜ್ಯದಲ್ಲಿ ನೊಂದಣಿಯಾಗಿದ್ದು, ಅವರಲ್ಲಿ 20 ಲಕ್ಷ ಜನಕ್ಕೆ ಪಾಸ್ ವಿತರಿಸಿದರೂ ಒಂದು ವರ್ಷಕ್ಕೆ ಅಂದಾಜು 3000 ಕೋಟಿ ಹಣ ಮಂಡಳಿಯ ಹಣ ಖಾಲಿಯಾಗುತ್ತದೆ. ಮುಂದೆ ಯಾವುದೇ ಸೌಲಭ್ಯಗಳನ್ನು ನೀಡಲು ಮಂಡಳಿಯಲ್ಲಿ ಹಣ ಇರುವುದಿಲ್ಲ. ಯಾವ ಮುಂದಾಲೋಚನೆಯಿಲ್ಲದೇ ಬೇಜವಾಬ್ದಾರಿಯಾಗಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳಾಗಲೀ ಮಂತ್ರಿಗಳಾಗಲೀ ನಮಗೆ ಅವಶ್ಯಕತೆ ಇಲ್ಲ. ನಮ್ಮ ಹೋರಾಟಕ್ಕೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಹಕರಿಸುವಂತೆ ಮನವಿ ಮಾಡುತ್ತೇವೆ ಎಂದರು.
ಕೋವಿಡ್ ಹಂತದಲ್ಲಿ ಹಾಗೂ ನಂತರದಲ್ಲಿ ಫಲಾನುಭವಿಗಳಿಗೆ ಆಹಾರ ಕಿಟ್ ಹಾಗೂ ಆರೋಗ್ಯ ಕಿಟ್ಗಳನ್ನು ವಿತರಿಸಲಾಗಿದೆ. ನಂತರ ಅವರ ಕೆಲಸಗಳಿಗೆ ಅನುಕೂಲವಾಗುವಂತಹ ಉಪಕರಣಗಳ ಕಿಟ್ಗಳನ್ನು ನೀಡಲಾಗಿದೆ. ಈ ಕಿಟ್ಗಳು ಕಳಪೆಯಿಂದ ಕೂಡಿದ್ದು, ಕೆಲಸಕ್ಕೆ ಅನುಪಯುಕ್ತವಾಗಿವೆ. ತದನಂತರ ಮೆಡಿಕಲ್ ಕ್ಯಾಂಪ್ಗಳನ್ನು ನಡೆಸಿ ಕಟ್ಟಡ ಕಾರ್ಮಿಕರ ಆರೋಗ್ಯ ಪರೀಕ್ಷೆ ಮಾಡಿ ವರದಿ ನೀಡಲಾಗಿದೆ. ಈ ವರದಿಗಳು ತಪ್ಪಿನಿಂದ ಕೂಡಿವೆ ಹಾಗೂ ಅನುಪಯುಕ್ತವಾಗಿವೆ. ಈ ಎಲ್ಲಾ ಅನವಶ್ಯಕ ಯೋಜನೆಗಳಿಂದ ಮಂಡಳಿಯ ಹಣ ಪೋಲಾಗಿದೆ. ಇದರ ಹಿಂದೆ ಭ್ರಷ್ಟಾಚಾರ ಇರುವುದು ಕಂಡು ಬಂದಿರುತ್ತದೆ ಎಂದು ಗಂಭೀರವಾಗಿ ಆರೋಪಿಸಿದರು.
ಕಟ್ಟಡ ಕಾರ್ಮಿಕರ ಸಂಘದವರ ಗಣನೆಗೆ ತೆಗೆದುಕೊಳ್ಳದೇ ತಮ್ಮದೇ ಸರ್ವಾಧಿಕಾರಿ ಧೋರಣೆಯಿಂದ ಮಂಡಳಿಯ ಹಣವನ್ನು ದುರುಪಯೋಗವಾಗುತ್ತಿರುವುದನ್ನು ಈಗಲೇ ನಿಲ್ಲಿಸದಿದ್ದರೆ ಇಡೀ ರಾಜಾದ್ಯಂತ ಕಟ್ಟಡ ಮತ್ತು ಇತರೆ ನಿರ್ಮಾಣ ಸಂಘಟನೆಗಳು ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ಅಧ್ಯಕ್ಷ ಹೆಚ್.ಟಿ. ರಾಮೇಗೌಡ, ಸಂಘದ ಅಧ್ಯಕ್ಷ ಹೆಚ್.ವಿ. ಸ್ವಾಮಿ, ಕಟ್ಟಡ ಕಾರ್ಮಿಕ ವಿವಿಧ ಸಂಘದ ಅಧ್ಯಕ್ಷರಾದ ಮಂಜೇಗೌಡ, ಮೋಹನ್ ಕುಮಾರ್, ನಾಗೇಶ್, ರಾಜೀವ್ ಇತರರು ಉಪಸ್ಥಿತರಿದ್ದರು.
Tags
ಹಾಸನ