ಕಾರ್ಮಿಕರ ದುಡಿಮೆಯ ಅವದಿ ಹೆಚ್ಚಳಕ್ಕೆ DYFI ತೀವ್ರ ಖಂಡನೆ

ಕಾರ್ಮಿಕ ಸಂಘಟನೆಗಳು ಮತ್ತು ಜನಪರ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ, ರಾಜ್ಯ ಸರ್ಕಾರವು ಬಂಡವಾಳಗಾರರ ಲಾಭಿಗೆ ಮಣಿದು ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರ ದಿನದ ಕೆಲಸದ ಅವಧಿಯನ್ನು 8 ಗಂಟೆಯಿಂದ 10 ಗಂಟೆಗಳಿಗೆ ಮತ್ತು ವಾರದ ಕೆಲಸದ ಅವಧಿಯನ್ನು 48 ಗಂಟೆಗಳಿಂದ 60 ಗಂಟೆಗಳಿಗೆ ಹೆಚ್ಚಿಸಿರುವುದನ್ನು ವಿರೋಧಿಸಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ನೇತೃತ್ವದಲ್ಲಿ ದಿನಾಂಕ; 29-05-2020 ರ ಶುಕ್ರವಾರ ಹಾಸನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಸರ್ಕಾರದ ಆದೇಶ ಪ್ರತಿಯನ್ನು ದಹಿನ ಮಾಡಿ ಪ್ರತಿಭಟನೆ ನಡೆಸಿ ಸರ್ಕಾರದ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಲಾಯಿತು.
ರಾಜ್ಯ ಸರ್ಕಾರದ ಈ ಆದೇಶ ರಾಜ್ಯವನ್ನು ಆರ್ಥಿಕ ಸಂಕಷ್ಠದಿಂದ ಪಾರು ಮಾಡುವ ಬದಲು ಮತ್ತಷ್ಟು ಸಂಕಷ್ಟಕ್ಕೆ ಈಡುಮಾಡಲಿದೆ. ಇದು ದುಡಿಯುವ ಜನತೆಯನ್ನು ಮತ್ತಷ್ಟು ಸಂಕಷ್ಠಕ್ಕೀಡು ಮಾಡುವ ಮತ್ತು ಬಂಡವಾಳದಾರರನ್ನು ಮಾತ್ರವೇ ಸಂಕಷ್ಠದಿಮಂದ ಮೇಲೆತ್ತುವ ಮತ್ತು ಅವರಿಗೆ ಕಾರ್ಮಿಕರ ದುಡಿಮೆಯನ್ನು ಲೂಟಿ ಮಾಡಲು ಅವಕಾಶ ನೀಡುವ, ಹೀನ ಅಧಿಕಾರ ದುರುಪಯೋಗವಾಗಿದೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಮತ್ತು ಕೆಲಸದ ಅವಧಿಯನ್ನು 6 ಗಂಟೆಗೆ ಇಳಿಸಿ,ಯುವಜನರಿಗೆ ಉದ್ಯೋಗ ನೀಡಿ ನಿರುದ್ಯೋಗ ನಿವಾರಣೆಗೆ ಮತ್ತು ಆ ಮೂಲಕ ರಾಜ್ಯದ ಅಭಿವೃದ್ಧಿಗೆ ಕ್ರಮವಹಿಸಬೇಕೆಂದು ಸರ್ಕಾರವನ್ನು ಡಿ.ವೈ.ಎಫ್.ಐ ಆಗ್ರಹಿಸಿದೆ.

ರಾಜ್ಯ ಸರ್ಕಾರವು ಮೇ 22ರಂದು ಜಾರಿ ಮಾಡಿರುವ ಅಧಿಸೂಚನೆಯಲ್ಲಿ 2020ರ ಮೇ 22ರಿಂದ ಆಗಸ್ಟ್ 21ರವರೆಗೆ 3 ತಿಂಗಳ ಕಾಲ ರಾಜ್ಯದಲ್ಲಿನ ನೋಂದಾಯಿತ ಕಾರ್ಖಾನೆಗಳಿಗೆ 1948ರ ಕಾರ್ಖಾನೆ ಕಾಯ್ದೆಯ ಕಲಂ 51 ಮತ್ತು 54 ಗಳಿಂದ ವಿನಾಯಿತಿ ನೀಡಿದೆ. ಕಲಂ 54 ರಲ್ಲಿನ ವಾರದ ಕೆಲಸದ ಅವಧಿಯನ್ನು ಹಾಲಿ 48 ಗಂಟೆಗಳಿಂದ 60 ಗಂಟೆಗೆ ಹೆಚ್ಚಳ ಮಾಡಿದೆ ಹಾಗು ಕಲಂ 51 ರಲ್ಲಿನ ದಿನದ ಕೆಲಸದ ಅವಧಿಯನ್ನು ಹಾಲಿ 8 ಗಂಟೆಗಳಿಂದ 10 ಗಂಟೆಗೆ ಹೆಚ್ಚಳ ಮಾಡಿದೆ. ಇದು, ಈ ದುಡಿಮೆಯ ಸಮಯದ ಹೆಚ್ಚಳವು, ಒಂದೆಡೆ ಕಾರ್ಮಿಕರನ್ನು ಮತ್ತಷ್ಟು ಸುಲಿಗೆಗೆ ಒಳಪಡಿಸಿ ಅವರ ವಿಶ್ರಾಂತಿಯ ಸಮಯವನ್ನು ಕಡಿತಗೊಳಿಸಿದರೆ ಇನ್ನೊಂದೆಡೆ, ಈಗಾಗಲೇ ಪೆಡಂಭೂತವಾಗಿ ಬೆಳೆದು ರಾಜ್ಯಕ್ಕೆ ಮಾರಕವಾಗಿರುವ ನಿರುದ್ಯೋಗಿಗಳ ದೊಡ್ಡ ಪಡೆಗೆ ಉದ್ಯೋಗದಲ್ಲಿರುವ ಲಕ್ಷಾಂತರ ಜನರನ್ನು ಮತ್ತೆ ಹೊಸದಾಗಿ ಸೇರ್ಪಡೆಗೊಳಿಸಲಿದೆ ನಿರುದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಿದೆ.

ಜನಸಾಮಾನ್ಯರು ಹಾಗೂ ದುಡಿಯುವ  ವರ್ಗ ದೇಶದಾದ್ಯಂತ ಕೋವಿಡ್ - 19ರ ವಿರುದ್ದದ ಹೋರಾಟದ ಸಂಕಷ್ಠದಲ್ಲಿರುವ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು, ಅದರ ಮರೆಯಲ್ಲಿ, ದುಡಿಯುವ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿ, ಕಾರ್ಪೋರೇಟ್ ಬಂಡವಾಳದಾರರ ಹಿತ ರಕ್ಷಣೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೊಡಗಿರುವುದು ಇದು ಹೊಸದೇನಲ್ಲ. ಆದರೆ ಇದು ಸಂಕಷ್ಠದಲ್ಲಿರುವವರನ್ನು ಮತ್ತಷ್ಠು ಸಂಕಷ್ಠಕ್ಕೆ ದೂಡಿ, ಕ್ರೌರ್ಯವೆಸಗುತ್ತಿವೆ. ಇದು ಬಿಜೆಪಿ ಸರಕಾರಗಳ ಜನವಿರೋಧಿ ನಿಲುವನ್ನು ತೋರಿಸುತ್ತದೆ.

ನೂರಾರು ವರ್ಷಗಳ ಸುಧೀರ್ಘ ಹೋರಾಟದ ಫಲವಾಗಿ, ಜಾಗತಿಕ ಕಾರ್ಮಿಕ ವರ್ಗ ಗಳಿಸಿರುವ 8 ಗಂಟೆಯ ಕೆಲಸದ ಹಕ್ಕನ್ನು ಗೌರವಿಸುವ ಬದಲು, ರಾಜ್ಯದ ಕಾರ್ಮಿಕರಿಂದ ಅದನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ, ರಾಜ್ಯದ ಕಾರ್ಮಿಕರು ಮತ್ತು ಇನ್ನಿತರೆ ದುಡಿಯುವ ವಿಭಾಗದ ಜನರು ಇಂತಹ ಕಾರ್ಮಿಕ ಹಾಗೂ ಜನ ವಿರೋಧಿ ಬಿಜೆಪಿ ಸರಕಾರಗಳ ವಿರುದ್ಧ ತೀವ್ರ ಸಂಘರ್ಷ ನಡೆಸುವ ದಿನಗಳು ಬರಲಿವೆ ಎಂದು ಸರ್ಕಾರಕ್ಕೆ #ಡಿವೈಎಫ್ಐ ಎಚ್ಚರಿಕೆ ನೀಡುತ್ತದೆ.

ರಾಜ್ಯದ ಜನರು,ಕಾರ್ಮಿಕ ಸಂಘಟನೆಗಳು, ಜಪರ ಸಂಘಟನೆಗಳು  ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ, ಇಂತಹ ಕ್ರಮಕ್ಕೆ ತಮ್ಮ ಸರ್ಕಾರ ನಿರಂತರವಾಗಿ ಮುಂದಾಗುತ್ತಿರುವುದು ರಾಜ್ಯದ ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಕೊಡುತ್ತಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಕೆಲಸದ ಅವಧಿಯನ್ನು ಕಾರ್ಮಿಕರ ಆರೋಗ್ಯ ಮತ್ತು ಉದ್ಯೋಗಗಳ ರಕ್ಷಣೆಯ ಹಿತ ದೃಷ್ಟಿಯಿಂದ 6 ಗಂಟೆಗೆ ಇಳಿಸಿ, ಯುವಜನರಿಗೆ ಉದ್ಯೋಗ ಸೃಷ್ಟಿಸಬೇಕೆಂದು ಮತ್ತು ಹಾಲಿ ಆದೇಶವನ್ನು ವಾಪಾಸು ಪಡೆಯಬೇಕೆಂದು ಈ ಮೂಲಕ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಒತ್ತಾಯಿಸುತ್ತದೆ.

ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂ.ಜಿ.,ರೈತ ಮುಖಂಡರಾದ ವಸಂತ್ ಕುಮಾರ್., ಟಿಪ್ಪು ಸಂಘರ್ಷ ಸಮಿತಿಯ ಮುಬಷಿರ್ ಅಹಮದ್, ಸಯ್ಯದ್ ಅನ್ಸರ್.,ಎಸ್ ಎಫ್ ಐ ಜಿಲ್ಲಾ ಕಾರ್ಯದರ್ಶಿ ರಮೇಶ್.,ಮುಖಂಡರಾದ ರಕ್ಷಿತ., ಬಿ.ಜಿ.ವಿ.ಎಸ್ ಬಿ.ಜಿ ಗೋಪಾಲಕೃಷ್ಣ, ಡಿವೈಎಫ್ಐ ಮುಂಖಂಡಾದ ಶಶಿ ತಟ್ಟೆಕೆರೆ,
ನವೀನ್, ಕಾರ್ತಿಕ್, ಅನಂತ್ ಭರತವಳ್ಳಿ ಮತ್ತಿತರರು ಭಾಗವಹಿಸಿದ್ದರು.

Post a Comment

Previous Post Next Post