ಮಳೆಗಾಲ ಮುಗಿಯುವ ವರೆಗೆ ರೆಸಾರ್ಟ್‌, ಹೋಂ ಸ್ಟೇ ಬಂದ್‌

ಸಕಲೇಶಪುರ: ಕೋವಿಡ್‌–19 ಸೋಂಕು ಹರಡುವ ಭೀತಿ ಇರುವುದರಿಂದ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳನ್ನು ಮಳೆಗಾಲ ಮುಗಿಯುವ ವರೆಗೂ ಸಂಪೂರ್ಣವಾಗಿ ಮುಚ್ಚುವಂತೆ ಆಗ್ರಹಿಸಿ ತಾಲ್ಲೂಕಿನ ಹಾನುಬಾಳು ಸಮೀಪದ ಮಗಜಹಳ್ಳಿ ಗ್ರಾಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಶನಿವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಕೊರೋನಾ ಪಾಸೀಟೀವ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅಲ್ಲಿಂದ ಗ್ರಾಮಗಳಲ್ಲಿರುವ ರೆಸಾರ್ಟ್ ಹಾಗೂ ಹೋಂ ಸ್ಟೇಗಳಿಗೆ ಬಂದು ಹೋಗುವ ಪ್ರವಾಸಿಗರಲ್ಲಿ ಖಂಡಿತಾ ಯಾರಿಗಾದರೂ ಸೋಂಕು ಇದ್ದೇ ಇರುತ್ತದೆ. ಅವರು ಗ್ರಾಮಕ್ಕೆ ಬಂದು ಹೋದರೆ ಹೋಂ ಸ್ಟೇ ಹಾಗೂ ರೆಸಾರ್ಟ್‌ನವರಿಗೆ, ಅಲ್ಲಿ ಕೆಲಸ ಮಾಡುವ ಸ್ಥಳೀಯರಿಗೆ, ವ್ಯಾಪಾರ ವಹಿವಾಟು ಮಾಡುವ ಅಂಗಡಿ ಮುಂಗಟ್ಟುಗಳಲ್ಲಿ ಇದ್ದವರಿಗೂ ಸೋಂಕು ಹರಡುತ್ತದೆ. ದೇಶದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನರಿಗೆ ಸೋಂಕು ತಗುಲಿ ಪರಿಸ್ಥಿತಿ ಗಂಭೀರವಾಗಿರುವಾಗ ಕೊರೊನಾ ಸೋಂಕು ಮುಕ್ತವಾಗಿರುವ ನಮ್ಮ ಭಾಗಕ್ಕೆ ಹೊರ ಜಿಲ್ಲೆಗಳಿಂದ ಬರುವುದು ಸುರಕ್ಷಿತವಲ್ಲ ಎಂದು  ಅಚ್ಚನಹಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಮುಖಂಡ ಬಿ.ಕೆ. ಸುಂದರೇಶ್‌ ಹಾಗೂ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಕಳೆದ ಒಂದೂವರೆ ದಶಕದಿಂದ ಈ ಭಾಗದಲ್ಲಿ ಹತ್ತಾರು ರೆಸಾರ್ಟ್‌, ಹೋಂ ಸ್ಟೇಗಳನ್ನು  ನಡೆಸುವವರಿಗೆ ಗ್ರಾಮಸ್ಥರು ಯಾವುದೇ ರೀತಿಯಿಂದ ತೊಂದರೆ ನೀಡಿಲ್ಲ.  ಬದಲಿಗೆ ಅಲ್ಲಿಗೆ ಬರುವ ಕೆಲವು ಪ್ರವಾಸಿಗರು, ಗ್ರಾಮದ ಬಸ್ಸು ನಿಲ್ದಾಣ, ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸಿಕೊಂಡು ಬಹಿರಂಗವಾಗಿ ಮದ್ಯ ಸೇವನೆ ಮಾಡುವುದು, ಹೆಚ್ಚು ಸೌಂಡ್‌ ಹಾಕಿಕೊಂಡು ಕುಣಿಯುವುದು ಇಂತಹ  ಅಸಭ್ಯ ವರ್ತನೆಯಿಂದ ಗ್ರಾಮಸ್ಥರಿಗೇ ಸಮಸ್ಯೆ ಉಂಟಾಗುತ್ತಿದೆ.
ಆದರೂ ಹೋಂ ಸ್ಟೇ ರೆಸಾರ್ಟ್‌ ಮುಚ್ಚುವಂತೆ ಒತ್ತಾಯಿಸುತ್ತಿಲ್ಲ.  ಮಳೆಗಾಲ ಮುಗಿಯುವ ವರೆಗೆ, ಕೊರೋನಾ ರೋಗಕ್ಕೆ ಔಷಧಿ ಕಂಡು ಹಿಡಿಯುವ ವರೆಗೆ ಮಾತ್ರ ಬಂದ್‌ ಮಾಡಬೇಕು.
ಮಲೆನಾಡಿನ ಈ ಭಾಗದಲ್ಲಿ ಈ ವರೆಗೆ ಒಂದೇ ಒಂದು ಪಾಸಿಟಿವ್‌ ಪ್ರಕರಣಗಳು ಕಂಡು ಬರದೆ ಇರುವುದರಿಂದ ಹೇಗೋ ನೆಮ್ಮದಿಯಿಂದ ಇದ್ದೇವೆ. ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಸಧ್ಯದ ಪರಿಸ್ಥಿತಿಯಲ್ಲಿ ಬಂದ್‌ ಮಾಡಬೇಕು  ಎಂದು ಆಗ್ರಹಿಸಿ ಹಾನುಬಾಳು ದೇವಾಲದಕೆರೆ ಮುಖ್ಯ ರಸ್ತೆಯನ್ನು ಮಗಜಹಳ್ಳಿ ಪಾಲ್ಸ್‌ ಸಮೀಪ  ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30 ರ ವರೆಗೆ ತಡೆದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ, ತಹಶೀಲ್ದಾರ್‌ ಮಂಜುನಾಥ್‌, ಗ್ರಾಮಾಂತರ ಠಾಣೆ ಪಿಎಸ್‌ಐ ಚಂದ್ರಶೇಖರ್‌ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಸರ್ಕಾರದ ಆದೇಶದ ಪ್ರಕಾರ ಹೋಂ ಸ್ಟೇ ಹಾಗೂ ರೆಸಾರ್ಟ್‌ ಗಳನ್ನು ತೆರೆಯುವುದಕ್ಕೆ ಅನುಮತಿ ನೀಡಲಾಗಿದೆ. ನಿಮ್ಮಗಳ ಆತಂಕ ತಮಗೂ ಅರ್ಥವಾಗುತ್ತದೆ. ನಿಮ್ಮಗಳ ಮನವಿಯನ್ನು  ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಎಸ್‌ಪಿ ಶ್ರೀನಿವಾಸ್‌ಗೌಡ ಹಾಗೂ ತಹಶೀಲ್ದಾರ್‌ ಮಂಜುನಾಥ್‌ ಹೇಳಿದರು.
ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಎ. ಭಾಸ್ಕರ್‌, ಹಾನುಬಾಳು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಬಿ. ರಾಜೀವ್‌, ಬಿ.ಡಿ. ವಿನಯ್‌, ಅ.ಸಿ. ಮೋಹನ್‌, ಎಂ.ಸಿ. ಪ್ರಕಾಶ್, ವಿಷ್ಣು, ಎಚ್‌.ಎಚ್‌. ಪೂರ್ಣೇಶ್‌ ಇದ್ದರು.  

ಕರೋನಾ ಸೋಂಕು ಹರಡುವ ಭೀತಿ: ಮಳೆಗಾಲ ಮುಗಿಯುವ ವರೆಗೂ ರೆಸಾರ್ಟ್‌ ಮತ್ತು  ಹೋಂ ಸ್ಟೇಗಳನ್ನು ಬಂದ್‌ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ  

ಸಕಲೇಶಪುರ ತಾಲ್ಲೂಕಿನ ಅಚ್ಚನಹಳ್ಳಿ, ಮಗಜಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಹೋಂ ಸ್ಟೇ ಮತ್ತು ರೆಸಾರ್ಟ್‌ಗಳನ್ನು ಮಳೆಗಾಲ ಮುಗಿಯುವ ವರೆಗೂ ಬಂದ್‌ ಮಾಡಬೇಕು ಎಂದು ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ಮಾತನಾಡಿದರು, ತಹಶೀಲ್ದಾರ್‌ ಮಂಜುನಾಥ್‌ ಇದ್ದದರೂ

Post a Comment

Previous Post Next Post