ಕೋವಿಡ್ ಮರಣ ದರ ಕಡಿಮೆ ಮಾಡಲು ಕ್ರಮವಹಿಸಿ: ಟಿ.ಎಂ. ವಿಜಯ್ ಭಾಸ್ಕರ್


ರಾಜ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೋವಿಡ್ ಸೋಂಕಿತರು ಹಾಗೂ ಸಂಪರ್ಕಿತರನ್ನು ತುರ್ತಾಗಿ ಪರೀಕ್ಷೆಗೆ ಒಳಪಡಿಸಿ ಉತ್ತಮ ಚಿಕಿತ್ಸೆ ನೀಡಿ ಮರಣ ದರವನ್ನು ಕಡಿಮೆ ಮಾಡಲು ಕ್ರಮವಹಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ನಿರ್ದೇಶಿಸಿದ್ದಾರೆ.
 ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡಸಿ ಮಾತನಾಡಿದ ಅವರು ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ಹೆಚ್ಚಾಗಿ ಮಾಡುವ ಮೂಲಕ ಸೋಂಕಿತರನ್ನು ಪತ್ತೆಹಚ್ಚಿ ಅವರಿಗೆ ಆಸ್ಪತ್ರೆಯಲ್ಲಿ ಅಥವಾ ಹೋಂ ಐಸೋಲೇಷನ್‍ನಲ್ಲಿ ಉತ್ತಮ ಚಿಕಿತ್ಸೆ ನೀಡುವ ಮೂಲಕ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು ಎಂದರು.
 ಸರ್ಕಾರ ಆರ್.ಟಿ.ಪಿ.ಸಿ.ಆರ್ ಹಾಗೂ ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ಮಾಡಲು ಪ್ರತಿ ಜಿಲ್ಲೆಗಳಿಗೂ ನಿರ್ಧಿಷ್ಟ ಗುರಿ ನೀಡಿದ್ದು, ಶೀಘ್ರವಾಗಿ ಗುರಿ ತಲುಪಲು ಕ್ರಮವಹಿಸಿ. ಸಿಬ್ಬಂದಿಗಳ ಕೊರತೆಯಿದ್ದರೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಪ್ಯಾರ ಮೆಡಿಕಲ್ ವಿದ್ಯಾರ್ಥಿಗಳ ಸೇವೆ ಪಡೆದು ತರಬೇತಿ ನೀಡಿ ಗಂಟಲ ದ್ರವ ಪರೀಕ್ಷೆಗೆ ಬಳಸಿಕೊಳ್ಳಿ ಎಂದು ಅವರು ಸೂಚಿಸಿದರು.
 ಆಸ್ಪತ್ರೆಗಳಲ್ಲಿ ಮತ್ತು ಕೋವಿಡ್ ಕೇರ್ ಕೇಂದ್ರಗಳಲ್ಲಿ ಬೆಡ್‍ಗಳ ಕೊರತೆಯಿದ್ದ ಜಿಲ್ಲೆಗಳು, ಹಾಸ್ಪಿಟಲ್‍ಗಳಲ್ಲಿ ಗಂಟಲ ದ್ರವ ಮಾದರಿ ಪರೀಕ್ಷೆಯಾದ ನಂತರ ಪಾಸಿಟಿವ್ ಬಂದರೆ ಅಂತಹವರನ್ನು ಸೋಂಕಿನ ಗುಣಲಕ್ಷಣಗಳಿದ್ದವರನ್ನು ಆಸ್ಪತ್ರೆಗಳಲ್ಲಿ ಅಥವಾ ಪ್ರತ್ಯೇಕ ಶೌಚಾಲಯ ಹೋಂದಿರುವವರನ್ನು ಮನೆಗಳಲ್ಲಿಯೇ ಹೋಂ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಿ ಎಂದರಲ್ಲದೆ, ವಾರ್ಡ್ ಮಟ್ಟದ, ಬೂತ್ ಮಟ್ಟದ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಸಿಬ್ಬಂದಿಗಳನ್ನು ಸೋಂಕಿತರ ಕ್ವಾರಂಟೈನ್ ಹಾಗೂ ವೀಕ್ಷಣೆಗೆ ಬಳಸುವಂತೆ ಟಿ.ಎಂ. ವಿಜಯ್ ಭಾಸ್ಕರ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
 ಜಿಲ್ಲಾ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಕೊರತೆಯಾಗದಂತೆ ಕೇಂದ್ರ ವೆಂಟಿಲೇಟರ್‍ಗಳನ್ನು ಪೂರೈಸಿದ್ದು ಅವುಗಳನ್ನು ಶೀಘ್ರವಾಗಿ ಅಳವಡಿಸಿ ಬಳಸಿ ಇನ್ನೂ ಹೆಚ್ಚಾಗಿ ಬೇಕಾದಲ್ಲಿ ಯಾವುದಾದರು ಲಭ್ಯವಿರುವ ನಿಧಿಯ ಹಣವನ್ನು ಬಳಸಿ ಖರೀದಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಅವರು ತಿಳಿಸಿದರು.
 ರಾಜ್ಯದಲ್ಲಿ ವೈದ್ಯಕೀಯ ಕಾಲೇಜುಗಳು, ಪ್ಯಾರ ಮೆಡಿಕಲ್ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರ ಆದೇಶದಂತೆ ವೈದ್ಯಕೀಯ ಕಾಲೇಜುಗಳ ಶೇ. 25 ರಷ್ಟು ಸಿಬ್ಬಂದಿಗಳನ್ನು ಹಾಗೂ ಪಿ.ಜಿ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಪಡೆದು ಕೋವಿಡ್ ಆಸ್ಪತ್ರೆಗಳು ಮತ್ತು ಕೋವಿಡ್ ಕೇರ್ ಕೇಂದ್ರಗಳಲ್ಲಿ ಬಳಸಿ ಎಂದು ರಾಜ್ಯ ಮುಖ್ಯ ಕಾರ್ಯರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
 ತುರ್ತು ಕೆಲಸಕ್ಕೆ ಆಂಬ್ಯುಲೆನ್ಸ್‍ಗಳ ಕೊರತೆ ಇದ್ದರೆ ಅವುಗಳನ್ನು ಬಾಡಿಗೆಗೆ ತೆಗೆದುಕೊಳ್ಳಿ ಯಾವ ಜಿಲ್ಲೆಯಲ್ಲಿಯೂ ಸಮಸ್ಯೆಗಳಾಗದಂತೆ ನಿಗಾವಹಿಸಿ ಹಾಗೂ ಔಷಧಗಳ ಕೊರತೆಯಿದ್ದಲ್ಲಿ ಮಾಹಿತಿ ನೀಡಿ ಎಂದು ಟಿ.ಎಂ. ವಿಜಯ್ ಭಾಸ್ಕರ್ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
 ಕೋವಿಡ್ ಪರೀಕ್ಷಾ ಕೇಂದ್ರಗಳಿಗೆ ಮತ್ತು ಫೀವರ್ ಕ್ಲಿನಿಕ್‍ಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದು ಬಗೆಹರಿಸಬೇಕು ಹಾಗೂ ಎಂ.ಎಲ್.ಎ., ಕಾರ್ಪೊರೇಟರ್‍ಗಳು, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಸಹಕಾರ ಪಡೆದು ಸೋಂಕಿತರ ಪರೀಕ್ಷೆಯನ್ನು ಹೆಚ್ಚಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಅವರು ಸೂಚಿಸಿದರು.
 ಸಾವಿನ ಸಂಖ್ಯೆ ಹಾಗೂ ಸೋಂಕಿತರ ಸಂಖ್ಯೆ ಹೆಚ್ಚಿರುವ ಜಿಲೆಗಳಲ್ಲಿ ವಾರ್ಡ್ ಮಟ್ಟದ, ಬೂತ್ ಮಟ್ಟದ ಹಾಗೂ ಟಾಸ್ಕ್ ಫೋರ್ಸ್ ಸಮಿತಿಗಳಿಗೆ ತರಬೇತಿ ನೀಡಿ ಪ್ರಕರಣಗಳು ಹೆಚ್ಚಾದ ತಕ್ಷಣ ಬಳಸಿಕೊಳ್ಳುವಂತೆ ಜಿಲ್ಲಾ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದರು.
 ಇದೇ ವೇಳೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ ಹಾಗೂ ಹೋಂ ಐಸೋಲೇಷನ್ ನಿಯಮ ಉಲ್ಲಂಘಿಸಿದವರ ಮೇಲಿನ ಎಫ್.ಐ.ಆರ್. ದಾಖಲೆಗಳು ಹಾಗೂ ಕೊರೋನಾ ಸಾವು ನಿಯಂತ್ರಣಕ್ಕೆ ವಹಿಸುತ್ತಿರುವ ಮುಂಜಾಗ್ರತೆಗಳ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.
 ಅಲ್ಲದೆ ವೀಡಿಯೋ ಸಂವಾದದ ನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಪ್ರಾಥಮಿಕ ಸಂಪರ್ಕಿತರ ಸರ್ವೆಯನ್ನು ಹೆಚ್ಚಿಸಬೇಕು ಮತ್ತು ಗಂಟಲ ಮಾದರಿ ಪರೀಕ್ಷೆಗಳು ಹೆಚ್ಚಾಗಬೇಕು ಹಾಗಾಗಿ ವಾರ್ಡ್ ಮಟ್ಟದ, ಬೂತ್ ಮಟ್ಟದ ಹಾಗೂ ಟಾಸ್ಕ್ ಫೋರ್ಸ್ ಸಮಿತಿಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.
 ಕಂಟೈನ್ಮೆಂಟ್ ವಲಯಗಳಲ್ಲಿ ಸ್ಥಳೀಯರ ಸರ್ವೆ ಹೆಚ್ಚಿಸಿ ಹಾಗೂ ಮನೆ ಸಮೀಕ್ಷೆಯಲ್ಲಿ ಪಾಸಿಟೀವ್ ಪ್ರಕರಣ ಕಂಡುಬಂದರೆ ತಕ್ಷಣ ಚಿಕಿತ್ಸೆಗೆ ಒಳಪಡಿಸಿ ಎಂದು ಅವರು ಆರೋಗ್ಯಾಧಿಕಾರಿಗಳಿಗೆ ನಿರ್ದೇಶಿಸಿದರು.
 ಹೆಚ್ಚಿನ ಸೋಂಕಿತರು ಪತ್ತೆಯಾಗಿರುವ ತಾಲ್ಲೂಕುಗಳಲ್ಲಿ ಹೋಬಳಿ ಮಟ್ಟದ ಸಮಿತಿಗಳನ್ನು ಹೆಚ್ಚಾಗಿ ಮಾಡಿ ಅವರಿಗೆ ತರಬೇತಿ ನೀಡಿ ಸೋಂಕಿತರ ಸಂಪರ್ಕಿತರನ್ನು ತುರ್ತಾಗಿ ಪತ್ತೆಹಚ್ಚುವಂತೆ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಉಪ ವಿಭಾಗಾಧಿಕಾರಿ ಡಾ|| ನವೀನ್ ಭಟ್, ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Post a Comment

Previous Post Next Post