ಹಾಸನ: ಡ್ರಗ್ಸ್ ದಂಧೆ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿ ಆವರಣಕ್ಕೆ ಬಂದ ಅವರು, ಕಳೆದ ಹಲವಾರು ದಿನಗಳಿಂದ ರಾಜ್ಯದ ನೆಮ್ಮದಿ ಮತ್ತು ಹೆಸರನ್ನು ಕೆಡಿಸಿರುವ ಮಾದಕ ವಸ್ತು ಮಾರಾಟಗಳ ಜಾಲ ಹಾಗೂ ಸೇವನೆಯ ವಿರುದ್ಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಸರಕಾರವು ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಜೊತೆಗೆ ಗೃಹ ಸಚಿವಾಲಯ ಹಾಗೂ ಪೊಲೀಸ್ ಇಲಾಖೆಯು ದಿಟ್ಟ ಕ್ರಮಕೈಗೊಂಡಿರುವುದಕ್ಕೆ ಬಿಜೆಪಿ ಯುವ ಮೋರ್ಚಾದಿಂದ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವಲ್ಲಿ ಇಲಾಖೆ ಮತ್ತು ರಾಜ್ಯ ಸರಕಾರಗಳ ಬದ್ಧತೆ ನಿಜಕ್ಕೂ ಪ್ರಶಂಸನೀಯವಾಗಿದೆ. ಇದೆ ರೀತಿ ಕಠಿಣ ಕಾರ್ಯ ಮುಂದುವರೆಸಿ ಈ ಮಾಫಿಯದಲ್ಲಿ ಭಾಗಿಯಾಗಿರುವ ಯಾರೇ ಪ್ರಭಾವಿಯಾಗದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಉನ್ನತ ಮಟ್ಟದ ತನಿಖೆ ನಡೆಸಬೇಕು. ಡ್ರಗ್ಸ್ ನ್ನು ಶಾಂತಿ ಮತ್ತು ನೆಮ್ಮದಿಗೆ ಹೆಸರಾದ ನಮ್ಮ ರಾಜ್ಯದಿಂದ ಮಟ್ಟ ಹಾಕುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ರಾಜ್ಯ ಉಪಾಧ್ಯಕ್ಷ ಹರ್ಷಿತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಹುಲ್ ಕಿಣಿ, ಖಂಡೇಶ್ವರ್, ನಗರಾಧ್ಯಕ್ಷ ರೂಪೇಶ್, ಗ್ರಾಮಾಂತರ ಅಧ್ಯಕ್ಷ ಯಶವಂತ್, ಉಪಾಧ್ಯಕ್ಷ ಚೇತನ್ ಇತರರು ಪಾಲ್ಗೊಂಡಿದ್ದರು.
Tags
ಹಾಸನ