ಭಾರತ್ ಬಂದ್‌ಗೆ ರಾಜ್ಯದ ನಾಯಕರ ರಿಯಾಕ್ಷನ್ ಇಲ್ಲಿದೆ..!

ಅನ್ನದಾತನ ಆಕ್ರೋಶದ ಸಾಗರಕ್ಕೆ ನದಿಯಂತೆ ಹರಿದ ಪ್ರತಿಭಟನೆಗಳು; ಭಾರತ್ ಬಂದ್‌ಗೆ ರಾಜ್ಯದ ನಾಯಕರ ರಿಯಾಕ್ಷನ್ ಇಲ್ಲಿದೆ..!
ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ಕಳೆದ ಕೆಲವಾರಗಳಿಂದ ಅನ್ನದಾತರು ಇಂದು ಭಾರತ ಬಂದ್‌ಗೆ ಕರೆ ನೀಡಿದ್ದಾರೆ. ಪಂಜಾಬ್,ಹರ್ಯಾಣ, ಉತ್ತರಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಂದ್‌ ಬಿಸಿ ಬಹಳವಾಗಿ ತಟ್ಟಿದ್ದರೆ, ಕರ್ನಾಟಕದಲ್ಲೂ ಕೂಡ ಬೆಂಗಳೂರು, ಮೈಸೂರು ಮತ್ತು ಉತ್ತರಕರ್ನಾಟಕದ ಬಹುಭಾಗಗಳಲ್ಲಿ ರೈತರ ಪ್ರತಿಭಟನೆ ಜೋರಾಗಿಯೇ ನಡೆಯುತ್ತಿದೆ. ಇನ್ನೊಂದೆಡೆ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಎಡಪಕ್ಷಗಳು ಬೆಂಬಲ ಸೂಚಿಸಿವೆ. ರಾಜ್ಯ ಕಾಂಗ್ರೆಸ್‌ ಕೂಡ ರೈತರು ಕರೆ ನೀಡಿರುವ ಭಾರತ್‌ ಬಂದ್‌ಗೆ ಬೆಂಬಲ ಘೊಷಿಸಿದ್ದು ವಿಪಕ್ಷ ನಾಯಕ ಸಿದ್ದರಾಮಯ್ಯ ಅನ್ನದಾತರು ಕರೆ ನೀಡಿರುವ ಭಾರತ್‌ ಬಂದ್‌ಗೆ ನಮ್ಮ ಬೆಂಬಲ ಇದೆ, ಭಾರತ್‌ ಬಂದ್‌ನಲ್ಲಿ ಭಾಗವಹಿಸೋಣ ಎಂದು ನಿನ್ನೆಯೇ ಘೊಷಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನೇರವಾಗಿ ರೈತರ ಹೋರಾಟದಲ್ಲಿ ಧುಮುಕಿ, ಟೌನ್‌ಹಾಲ್‌ನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇದೆಲ್ಲದರ ಮಧ್ಯೆ ಆಡಳಿತ ಪಕ್ಷ ಬಿಜೆಪಿ ಮಾತ್ರ ಭಾರತ್‌ ಬಂದ್‌ ಅನ್ನೋದು ವಿಪಕ್ಷಗಳ ಕುತಂತ್ರ, ರೈತರ ದಾರಿ ತಪ್ಪಿಸಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ ಎಂದು ಕಿಡಿಕಾರಿವೆ. ಇಂದು ನಡೆಯುತ್ತಿರುವ ಭಾರತ್ ಬಂದ್‌ ಬಗ್ಗೆ ರಾಜ್ಯದ ರಾಜಕೀಯ ನಾಯಕರ ಅಭಿಪ್ರಾಯಗಳೇನು? ಸಿಎಂ ಬಿಎಸ್‌ವೈಯಿಂದ ಹಿಡಿದು ಅವರ ಸಂಪುಟ ಸದಸ್ಯರು ಮತ್ತು ವಿರೋಧ ಪಕ್ಷಗಳ ಪ್ರಮುಖರು ಏನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅನ್ನೋದು ಇಲ್ಲಿದೆ.

ಭಾರತ್ ಬಂದ್‌ ಯಶಸ್ವಿಯಾಗಿಲ್ಲ ; ಸಿಎಂ ಬಿಎಸ್‌ವೈ

ಭಾರತ್‌ ಬಂದ್‌ಗೆ ಕರ್ನಾಟಕ ರಾಜ್ಯದಲ್ಲಿ ಯಾರೂ ಕೂಡ ಬೆಂಬಲ ಕೊಡುತ್ತಿಲ್ಲ. ಹಾಗಾಗಿ ನಮ್ಮ ರಾಜ್ಯದಲ್ಲಿ ಬಂದ್‌ ಯಶಸ್ವಿಯಾಗಿಲ್ಲ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಬಂದ್‌ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ಮೋದಿ ರೈತಪರ ಕಾಯ್ದೆಗಳನ್ನು ಜಾರಿತಂದಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಅದನ್ನು ದುರುಪಯೋಗ ಪಡಿಸುವುದು ಸರಿಯಲ್ಲ. ಅನಗತ್ಯವಾಗಿ ಬಂದ್‌ ಮಾಡುವ ಬದಲು ವಾಸ್ತವ ಸ್ಥಿತಿ ಅರಿಯುವುದು ಒಳ್ಳೆಯದು ಎಂದು ಹೇಳಿದ್ದಾರೆ. ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರವಾಗಿರುವ ಸರ್ಕಾರ. ರೈತರಿಗೆ ಧಕ್ಕೆಯಾಗುವ ಕೆಲಸಗಳನ್ನು ಮಾಡುವುದಿಲ್ಲ. ಬಂದ್‌ ಹೆಸರಿನಲ್ಲಿ ಯಾರೂ ಜನರ ಕೆಲಸಗಳಿಗೆ ಅಡ್ಡಿ ಮಾಡಬಾರದು ಹಾಗೇನಾದರೂ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ರೈತರ ಒಳಿತಿಗಾಗಿಯೇ ಈ ಕಾಯ್ದೆ ತಂದಿರೋದು; ಆರ್‌ ಅಶೋಕ್

ಈ ಹಿಂದೆ ಮಧ್ಯವರ್ತಿಗಳ ಕಾಟದಿಂದ ರೈತರಿಗೆ ತೊಂದರೆಯಾಗುತ್ತಿತ್ತು. ಈಗ ಕೇಂದ್ರ ಸರ್ಕಾರ ತಂದಿರುವ ಕಾಯ್ದೆಗಳು ರೈತಪರವಾಗಿದೆ. ರೈತರ ಒಳಿತಿಗಾಗಿಯೇ ಈ ಕಾಯ್ದೆ ತಂದಿರೋದು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಂದ್‌ನ ವಾತಾವರಣ ಇಲ್ಲ ಎಂದಿರುವ ಅವರು, ವಾಟಾಳ್‌ ನಾಗರಾಜ್‌ರ ದಿನನಿತ್ಯದ ಬಂದ್‌ಗಳಿಗೆ ಬೆಲೆ ಇಲ್ಲ. ಪದೇ ಪದೇ ಬಂದ್‌ ಮಾಡೋದೂ ಸರಿಯಲ್ಲ. ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿಗೆ ರೈತರ ಬಗ್ಗೆ ನೈಜ ಕಾಳಜಿಯಿದೆಯೇ? :ಸಿದ್ದರಾಮಯ್ಯ

ಒಂದೆಡೆ ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದು ಎಪಿಎಂಸಿ ಗಳನ್ನು ಮುಚ್ಚಲು ಸಕಾಲ ಎನ್ನುತ್ತಾರೆ, ಇನ್ನೊಂದೆಡೆ ನರೇಂದ್ರ ಮೋದಿಯವರು ಎಪಿಎಂಸಿ ಗಳನ್ನು ಮುಚ್ಚಲ್ಲ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮುಂದೆಯೂ ಸಿಗುತ್ತೆ ಅಂತಾರೆ. ಇವರಿಬ್ಬರಲ್ಲಿ ಯಾರು ಸತ್ಯ ಹೇಳ್ತಿದ್ದಾರೆ? ಯಾರು ಸುಳ್ಳು ಹೇಳ್ತಿದ್ದಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಸರ್ಕಾರ ಜಾರಿಗೊಳಿಸುವ ಕಾನೂನುಗಳು, ನೀತಿ ನಿಯಮಗಳು ಸಕಾರಾತ್ಮಕ ಬದಲಾವಣೆ ತರುವಂತಿರಬೇಕೇ ಹೊರತು ಸರ್ವನಾಶಕ್ಕೆ ದಾರಿಮಾಡಿಕೊಂಡುವಂತೆ ಇರಬಾರದು. ರೈತರೇ ತಮಗೆ ಈ ಮಸೂದೆ ಬೇಡವೆಂದರೂ, ಏನಾದರೂ ಆಗಲಿ ಮಸೂದೆ ಜಾರಿ ಮಾಡಿಯೇ ತೀರುತ್ತೇವೆ ಎಂದು ಹೊರಟಿರಲು ಕಾರಣವೇನು? ಬಿಜೆಪಿ ನಾಯಕರಿಗೆ ರೈತರ ಬಗ್ಗೆ ನೈಜ ಕಾಳಜಿಯಿದೆಯೇ? ಎಂದು ಕಿಡಿಕಾರಿದ್ದಾರೆ.

ಕೃಷಿ ಕಾಯ್ದೆ ರೈತರ ಪಾಲಿಗೆ ಮರಣ ಶಾಸನ; ಡಿಕೆ ಶಿವಕುಮಾರ್

ಕೇಂದ್ರ ಸರ್ಕಾರ ಕರಾಳ ಕಾಯ್ದೆಗಳನ್ನು ಜಾರಿ ಮಾಡಲು ಹೊರಡಿದೆ. ಇದು ರೈತರ ಪಾಲಿಗೆ ಮರಣ ಶಾಸನ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಕಿಡಿಕಾರಿದ್ದಾರೆ. ಟೌನ್‌ಹಾಲ್‌ನಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು, ರೈತರ ಹೋರಾಟಕ್ಕೆ ನಾವೆಲ್ಲ ಬೆಂಬಲ ಕೊಡುತ್ತಿದ್ದೇವೆ. ರೈತರಿಗೆ ಈ ಹಿಂದೆಇದ್ದ ಕಾನೂನೇ ಸಾಕಿತ್ತು. ಈಗ ಹೊಸ ಕಾನೂನುಗಳನ್ನು ತಂದು ದೇಶದ ಕಾನೂನುಗಳನ್ನೇ ಬದಲಾಯಿಸಲು ಹೊರಟಿದ್ದಾರೆ. ಸಿಎಂ ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದರು. ಆದರೆ ರೈತರಿಗೆ ರಕ್ಷಣೆಯೇ ಇಲ್ಲ ಎಂದು ಕಿಡಿಕಾರಿದರು.

Post a Comment

Previous Post Next Post