ಎಸ್‌ಐ ಕಿರಣ್‌ಕುಮಾರ್ ಆತ್ಮಹತ್ಯೆಗೆ ಒತ್ತಡವೇ ಕಾರಣ: ತನಿಖೆಯಿಂದ ಸಾಬೀತು!

ಚನ್ನರಾಯಪಟ್ಟಣ ಠಾಣೆ ಎಸ್‌ಐ ಕಿರಣ್‌ಕುಮಾರ್ ಒತ್ತಡಗಳಿಂದಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ತನಿಖೆಯ ಸಮಗ್ರ ವರದಿಯನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಎಸ್‌ಪಿ ಶ್ರೀನಿವಾಸಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಸನ: ಚನ್ನರಾಯಪಟ್ಟಣ ಠಾಣೆ ಎಸ್‌ಐ ಕಿರಣ್‌ಕುಮಾರ್ ಒತ್ತಡಗಳಿಂದಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ತನಿಖೆಯ ಸಮಗ್ರ ವರದಿಯನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಎಸ್‌ಪಿ ಶ್ರೀನಿವಾಸಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2020ರ ಜುಲೈನಲ್ಲಿ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದ ಸರಣಿ ಕೊಲೆ ಪ್ರಕರಣ ರಾಜ್ಯಾದ್ಯಂತ ಸದ್ದುಮಾಡಿ ಆತಂಕ ಸೃಷ್ಟಿಸಿತ್ತು. ಆಲಗೋಡನಹಳ್ಳಿ ತೋಟದ ಮನೆಯಲ್ಲಿದ್ದ ವೃದ್ಧ ಮರಳೀಧರ್ ದಂಪತಿ ಹತ್ಯೆ ಹಾಗೂ ಚನ್ನರಾಯಪಟ್ಟಣದಲ್ಲಿ ಕ್ಷುಲ್ಲಕ ಪಾರಿವಾಳದ ವಿಷಯಕ್ಕೆ ಬಾಗೂರು ರಸ್ತೆಯಲ್ಲಿ ಸಮೀವುಲ್ಲಾ (25) ಎಂಬಾತನ ಕೊಲೆಯಾಗಿತ್ತು.

ಹತ್ಯೆ ಸರಣಿ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲೊಡ್ಡಿತ್ತು. ಸರಣಿ ಪ್ರಕರಣದ ಹಿನ್ನೆಲೆಯಲ್ಲಿ ಮೈಸೂರು ದಕ್ಷಿಣ ವಲಯ ಐಜಿ ಚನ್ನರಾಯಪಟ್ಟಣಕ್ಕೆ ಜು.31 ರಂದು ಭೇಟಿ ನೀಡಿದ್ದರು.

ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ಲಾಳನಕೆರೆ ಮೂಲದ ಕಿರಣ್‌ಕುಮಾರ್‌ ಸೇವೆಗೆ ಸೇರಿ ಕೇವಲ ಹತ್ತುವರ್ಷ ಪೂರೈಸಿತ್ತು. ತುಮಕೂರಿನಲ್ಲಿ ಸೇವೆಸಲ್ಲಿಸಿ, ಅಲ್ಲಿಂದ ಚನ್ನರಾಯಪಟ್ಟಣಕ್ಕೆ ವರ್ಗಾವಣೆಗೊಂಡು ಬಂದಿದ್ದ ಕಿರಣ್‌ಕುಮಾರ್‌ ಜು.31 ರಂದು ಬೆಳಗ್ಗೆ ಸಮವಸ್ತ್ರದಲ್ಲಿ ತನ್ನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ರಾಜಕೀಯ ಪ್ರಭಾವದಿಂದಲೇ ಒತ್ತಡಕ್ಕೆ ಮಣಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೀಡು ಮಾಡಿತ್ತು.

ತನಿಖೆ : ಎಸ್‌ಐ ಕಿರಣ್‌ಕುಮಾರ್ ಆತ್ಮಹತ್ಯೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಅರಸೀಕೆರೆ ಡಿವೈಎಸ್‌ಪಿ ನಾಗೇಶ್ ಅವರಿಗೆ ವಹಿಸಲಾಗಿತ್ತು. ಇದೀಗ ರಾಜಕಾರಣಿಗಳು, ಮುಖಂಡರು, ಪತ್ರಕರ್ತರು ಸೇರಿದಂತೆ 50ಕ್ಕೂ ಹೆಚ್ಚು ಜನರ ತನಿಖೆ ಬಳಿಕ ಎಸ್‌ಪಿ ಅವರ ಕೈಗೆ ತನಿಖಾ ವರದಿ ತಲುಪಿಸಿದ್ದು, ಯಾರು ಒತ್ತಡ ತಂದರು ಅವರ ಉದ್ದೇಶವೇನು ? ಪ್ರಕರಣದಲ್ಲಿ ಸಿಲುಕುವವರು ಯಾರು? ಇತ್ಯಾದಿ ಸಂಗತಿಗಳು ಕುತೂಹಲ ಕೆರಳಿಸಿದೆ.

ಕಿರಣ್‌ಕುಮಾರ್‌ ಆತ್ಮಹತ್ಯೆಗೆ ಒತ್ತಡವೇ ಕಾರಣ ಎಂದು ತನಿಖೆಯಿಂದ ತಿಳಿದು ಬಂದಿದೆ. ಚನ್ನರಾಯಪಟ್ಟಣದಲ್ಲಿ ನಡೆದ ಸರಣಿ ಕೊಲೆ ಬಳಿಕ ಯಾರಾರು ಕರೆಮಾಡಿದ್ದರೋ ಅವರೆನ್ನೆಲ್ಲ ತನಿಖೆ ನಡೆಸಿ ವರದಿ ನೀಡಿದ್ದಾರೆ. ಅದನ್ನು ನೋಡಿ ಒಂದೆರಡು ದಿನದಲ್ಲಿ ಸಮಗ್ರ ಮಾಹಿತಿ ನೀಡುತ್ತೇನೆ ಎಂದು ಎಸ್‌ಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.

Post a Comment

Previous Post Next Post