ಹಾಸನ ಮೇ 07 :- ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಹದಿನೈದು ದಿನಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಶಿವಣ್ಣ. ಎಂ. ಕೋಟೆ ಹೇಳಿದ್ದಾರೆ.
ಇಂದು ಎಲ್ಲಾ ಜಿಲ್ಲೆಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ದೇಶದಾದ್ಯಂತ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಹಾಗೂ ಪರಿಕರಗಳನ್ನು ನೀಡುವ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.
ರಾಜ್ಯದಲ್ಲಿರುವ ಪೌರಕಾರ್ಮಿಕರು ದೂರವಾಣಿಯ ಮೂಲಕ ಅಗತ್ಯ ವಸ್ತುಗಳ ಪೂರೈಕೆಯ ಬಗ್ಗೆ ದೂರನ್ನು ನೀಡುತ್ತಿದ್ದು, ಕಾರ್ಮಿಕರಿಗೆ ಕನಿಷ್ಠ ಸೌಲಭ್ಯವನ್ನು ನೀಡದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರಲ್ಲದೆ, ದೇಶ ಕಾಯುವ ಸೈನಿಕರಂತೆ ಪೌರಕಾರ್ಮಿಕರು ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಪೌರಕಾರ್ಮಿಕರು ಕೆಲಸಕ್ಕೆ ತೆರಳುವ ಮೊದಲೇ ಅವರಿಗೆ ಥರ್ಮಲ್ ಸ್ಕಾ÷್ಯನಿಂಗ್ ಮಾಡಿ ಅವರ ಬಳಿ ಸ್ಯಾನಿಟೈಸರ್ ಇರುವಂತೆ ನೋಡಿಕೊಳ್ಳುವುದು ಹಾಗೂ ಅವರಿಗೆ ಸಾರಿಗೆ ಸೌಲಭ್ಯ ಕಲ್ಪಿಸಿ ಮಾಸ್ಕ್, ಗಮ್ಬೂಟ್, ಯೂನಿಫಾರ್ಮ್ ನೀಡುವಾಗ ಸರಿಇದೆಯೇ ಎಂದು ಪರೀಕ್ಷಿಸುವಂತೆ ಹೇಳಿದರು.
ಪೌರಕಾರ್ಮಿಕರಿಗೆ ಅಗತ್ಯ ಪರಿಕರಗಳನ್ನು ನೀಡಿದ್ದರೂ ಸಹ ಕೆಲಸ ಮಾಡುವಾಗ ಬಳಸದೆ ಇಟ್ಟಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅಂತಹವರನ್ನು ಎಚ್ಚರಿಸಿ ಬಳಸುವಂತೆ ಸೂಚಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಪೌರಕಾರ್ಮಿಕರ ಮನವೊಲಿಸಿ ಮೊದಲನೇ ಹಾಗೂ ಎರಡನೇ ಹಂತದ ಲಸಿಕೆಯನ್ನು ಪಡೆದುಕೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಹೋಮ್ ಐಸೋಲೇಶನ್ನಲ್ಲಿರುವವರ ಮನೆಯ ತ್ಯಾಜ್ಯ ತೆಗೆಯುವಾಗ ಬರಿಗೈ ಬಳಸದಂತೆ ನಿರ್ದೇಶಿಸಿ ಸೂಕ್ತ ಪರಿಕರಗಳನ್ನು ಬಳಸುವಂತೆ ತಿಳಿಸಿ ಹಾಗೂ ಅವರಿಗೆ ತಿಂಡಿ ಮತ್ತು ಕಡ್ಡಾಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಪೌರಕಾರ್ಮಿಕರ ಕುಟುಂಬಕ್ಕೆ ಲಸಿಕೆ ಕೊಡಿಸಿ ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಹಾಗೂ ಗರ್ಭಿಣಿಯರಿಗೆ ವೇತನ ಸಹಿತ ರಜೆ ನೀಡುವಂತೆ ತಿಳಿಸಿದರಲ್ಲದೆ, ಅನಾರೋಗ್ಯಕ್ಕೆ ತುತ್ತಾದವರ ಬಗ್ಗೆ ಹೆಚ್ಚಿನ ಕಾಳಜಿವಹಿಸುವಂತೆ ತಿಳಿಸಿದರು.
ಮ್ಯಾನ್ಯುಯೆಲ್ ಸ್ಕಾ÷್ಯವೆಂಜಿAಗ್ ಶಿಕ್ಷಾರ್ಹ ಅಪರಾಧವಾಗಿದ್ದು, ಈ ರೀತಿ ಎಲ್ಲೂ ಸಹ ನಡೆಯದಂತೆ ಕ್ರಮವಹಿಸಿ ಸರ್ಕಾರಕ್ಕೆ ವರದಿ ನೀಡಬೇಕೆಂದು ತಿಳಿಸಿದರಲ್ಲದೆ, ತಪ್ಪಿತಸ್ಥರು ತಪ್ಪಿಸಿಕೊಳ್ಳದಂತೆ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪವಿಭಾಗ ಅಧಿಕಾರಿ ಬಿ.ಎ ಜಗದೀಶ್, ಜಿಲ್ಲಾ ಪಂಚಾಯಿತಿ ಮುಖ್ಯಯೋಜನಾಧಿಕಾರಿ ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಮತ್ತಿತರರು ಹಾಜರಿದ್ದರು.
