"ನೀವು ರಾಹುಲ್ ದ್ರಾವಿಡ್ ಅಭಿಮಾನಿಯಾಗಿದ್ದರೆ ಈ ಸುದ್ದಿ ನಿಮಗೆ ಖುಷಿ ತರಲಿದೆ"

ವರದಿ - ಯದೀಶ್

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಜನಪ್ರಿಯ ಆಟಗಾರ ಗ್ರೇಟ್‌ವಾಲ್ ಬಿರುದಾಂಕಿತ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಜುಲೈನಲ್ಲಿ ನಡೆಯುವ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾದ ಕೋಚ್ ಆಗಿ ನೇಮಕವಾಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ
ರಾಹುಲ್ ದ್ರಾವಿಡ್ ಅವರು ಈ ಹಿಂದೆ 2014ರಲ್ಲಿ ಭಾರತ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಅದಾದ ಬಳಿಕ ಇದೀಗ ಮತ್ತೆ ಭಾರತ ತಂಡದ ಸಾರಥ್ಯ ವಹಿಸುವ ಅವಕಾಶ ಸಿಕ್ಕಿದ್ದು ಅದು ಕೂಡ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ.

ಟೀಂ‌ ಇಂಡಿಯಾದಲ್ಲಿ ಸದ್ಯಕ್ಕೆ ಕೋಚ್‌ಗಳಾಗಿರುವ ರವಿಶಾಸ್ತ್ರಿ, ಭರತ್ ಅರುಣ್ ಮತ್ತು ವಿಕ್ರಮ್ ರಾಥೋರ್ ಅವರು ಇಂಗ್ಲೆಂಡ್‍ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಭಾರತ ತಂಡದ ಕೋಚ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
ಈ ಪಂದ್ಯಾವಳಿಯ ನಡುವೆ ಭಾರತದ ಮತ್ತೊಂದು ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸಿಕೊಡಲು ಬಿಸಿಸಿಐ ತೀರ್ಮಾನಿಸಿದೆ. ಈ ತಂಡಕ್ಕೆ ದ್ರಾವಿಡ್ ಅವರನ್ನು ತಂಡದ ಮುಖ್ಯ ತರಬೇತುದಾರರಾಗಿ ಆಯ್ಕೆ ಮಾಡಲಾಗಿದೆ ಎಂಬುದು ಬಿಸಿಸಿಐ ಮೂಲಗಳ ಸುದ್ದಿಯಾಗಿರುತ್ತದೆ.

ವಿಶೇಷ ಎಂದರೆ ಶ್ರೀಲಂಕಾ ಪ್ರವಾಸಕ್ಕೆ ಭಾರತದ ಯುವ ತಂಡವನ್ನು ಕಳುಹಿಸಿಕೊಡಲು ನಿರ್ಧರಿಸಿದ್ದು, ದ್ರಾವಿಡ್ ಅವರು ಈ ಹಿಂದೆ ಅಂಡರ್ -19 ತಂಡದ ಕೋಚ್ ಆಗಿ ಕೆಲಸ ನಿರ್ವಹಿಸಿರುವುದರಿಂದ ಈ ಯುವ ಆಟಗಾರದ ಜೊತೆ ಉತ್ತಮ ಒಡನಾಟ ಬೆಳೆಸಿದ್ದಾರೆ ಹಾಗೂ ಆಟಗಾರರು ಸಹ ದ್ರಾವಿಡ್ ಅವರ ಜೊತೆ ಅತ್ಯುತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ, ಈ ಒಡನಾಟ ಮತ್ತು ಬಾಂಧವ್ಯ ತಂಡದ ಉತ್ತಮ ಪ್ರದರ್ಶನಕ್ಕೆ ಕಾರಣವಾಗಲಿದೆ ಎಂಬುದು ಬಿಸಿಸಿಐನ ಲೆಕ್ಕಚಾರವಾಗಿದೆ.

ಶ್ರೀಲಂಕಾ ಸರಣಿಗಾಗಿ ಭಾರತ ತಂಡವನ್ನು ಈ ತಿಂಗಳ ಅಂತ್ಯಕ್ಕೆ ಆಯ್ಕೆ ಮಾಡವ ನಿರೀಕ್ಷೆ ಇದ್ದು, ಜುಲೈ 13ರಿಂದ ಸರಣಿ ಆರಂಭಗೊಳ್ಳಲಿದೆ,  ಈ ಸರಣಿಯಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಯುವ ಭಾರತ ತಂಡ ಆಡಲಿದೆ.

ರಾಹುಲ್ ದ್ರಾವಿಡ್ ಅವರು ಅಂಡರ್-19 ಭಾರತ ಎ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಭಾರತ ಯುವ ಆಟಗಾರರಿಗೆ ಉತ್ತಮವಾದ ಮಾರ್ಗದರ್ಶನ ನೀಡಿ ಭಾರತ ತಂಡವನ್ನು ಬಲಿಷ್ಠವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ಮತ್ತೊಮ್ಮೆ ಭಾರತ ಯುವತಂಡದ ಸಾರಥ್ಯ ವಹಿಸಿರುವ ಅವರು ಶ್ರೀಲಂಕಾ ಸರಣಿಯಲ್ಲಿ ಇನ್ನೊಮ್ಮೆ ಯಶಸ್ವಿಯಾಗಲಿದ್ದಾರ ಎಂಬುದು ಕಾದು ನೋಡಬೇಕಿದೆ.

Post a Comment

Previous Post Next Post