ಹಾಸನ: ನಗರದ ಎಂಜಿ ರಸ್ತೆಯಲ್ಲಿ ದಿಢೀರ್ ತೆಲೆ ಎತ್ತುವ ಮೂಲಕ ದೊಡ್ಡ ಸುದ್ದಿಯಾಗಿದ್ದ ಗೋಪುರ ಆಕಾರದ ಅಕ್ರಮ ಕಟ್ಟಡವೊಂದು ಅಚ್ಚರಿ ಎಂಬAತೆ ರಾತ್ರೋರಾತ್ರಿ ಮಾಯವಾಗಿದೆ. ಮಂಗಳವಾರ ರಾತ್ರಿವರೆಗೂ ಇದ್ದ ಕಟ್ಟಡ ಬೆಳಗಾಗುವುದರೊಳಗೆ ನೆಲಸಮವಾಗಿದೆ.
ಆದಿಚುಂಚನಗಿರಿ ಕಲ್ಯಾಣ ಮಂಟಪದ ಎದುರಿದ್ದ ಬೃಹತ್ ಮರವನ್ನು ಕಳೆದ ನವೆಂಬರ್-ಡಿಸೆAಬರ್ ನಲ್ಲಿ ಕಡಿದು ಬಳಿಕ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಈ ವೇಳೆ ಅನೇಕರು ಇದೇನಿದು ಎಂದು ತಮಗೆ ತಾವೇ ಪ್ರಶ್ನೆ ಮಾಡಿಕೊಂಡಿದ್ದರು.ಇದೇ ರೀತಿ ಆದಿಚುಂಚನಗಿರಿ ಶಾಲೆ ಎದುರಿದ್ದ ಮರಗಳಿಗೂ ಕೊಡಲಿ ಇಡಲಾಗಿತ್ತು.
ದೊಡ್ಡ ದೊಡ್ಡ ಮರಗಳನ್ನು ಏಕಾಏಕಿ ತುಂಡರಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ವೈದ್ಯರು, ಪರಿಸರವಾದಿಗಳು ಹಾಗೂ ಸಾಮಾಜಿಕ ಹೋರಾಟಗಾರರು, ಇದಕ್ಕೆ ಸಕಾರಣ ನೀಡಬೇಕು. ಜೊತೆಗೆ ಬದಲಿ ಗಿಡಬೇಕು ಎಂದು ಮನವಿ ಮಾಡಿದ್ದರು.
ಅಷ್ಟೇ ಅಲ್ಲ ಮರ ಕಡಿದಿದ್ದು ಯಾರು, ಯಾವ ಕಾರಣಕ್ಕೆ ಎಂದು ವೈದ್ಯರಾದ ಡಾ.ದೇವದಾಸು ಹೆಚ್.ಆರ್., ಡಾ.ನಾಗೇಶ್ ಎಂ.ಕೆ. ಹಾಗೂ ವಕೀಲರಾದ ಹರೀಶ್ ಬಾಬು ಎ. ಮೊದಲಾದವರು, ಅರಣ್ಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಜೊತೆಗೆ ಆರ್ಟಿಐ ಮೂಲಕವೂ ದೂರು ಸಲ್ಲಿಸಿದ್ದರು. ಆದರೆ ಯಾರಿಂದಲೂ ನಿಖರ ಮಾಹಿತಿ ಬಂದಿರಲಿಲ್ಲ. ಎಲ್ಲರೂ ನಾವು ಮರ ಕಡಿಯಲು ಹಾಗೂ ಯಾವುದೇ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿಲ್ಲ ಎಂದೇ ಹೇಳಿದ್ದರು.
ಹೈಕೋರ್ಟ್ಗೆ ಪಿಐಎಲ್:
ಇದಾದ ಬಳಿಕ ವಿವಿಧ ಅಧಿಕಾರಿಗಳು ನೀಡಿದ್ದ ಲಿಖಿತ ಉತ್ತರ ಮತ್ತು ಕಟ್ಟಡ ನಿರ್ಮಾಣದ ಬಗ್ಗೆ ಸಚಿತ್ರ ಮಾಹಿತಿ ಒಳಗೊಂಡ ಸುಮಾರು 120 ಪುಟಗಳ ಅರ್ಜಿ ಸಿದ್ಧಮಾಡಿ ರಾಜ್ಯ ಕೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲು ಮಾಡಿದ್ದರು.
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ ಆಯುಕ್ತರು, ಜಿಲ್ಲಾಧಿಕಾರಿ, ಹಾಸನ ವಲಯ ಅರಣ್ಯಾಧಿಕಾರಿ ಹಾಗೂ ಡಿಎಫ್ಒ ಹಾಸನ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.
ಅಲ್ಲದೆ ಕಳೆದ 5 ವರ್ಷದ ಅವಧಿಯಲ್ಲಿ ಹಾಸನ ನಗರದ ವಿವಿಧೆಡೆ 2700ಕ್ಕೂ ಹೆಚ್ಚು ಮರಗಳ ಹನನ ಮಾಡಿರುವುದನ್ನೂ ಪಿಐಎಲ್ನಲ್ಲಿ ಪ್ರಸ್ತಾಪಿಸಿದ್ದರು.
ಹೈಕೋರ್ಟ್ ಚಾಟಿ:
ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿದ್ದ ನ್ಯಾಯಪೀಠ, ಎಲ್ಲವನ್ನೂ ಅವಲೋಕಿಸಿ ನಾಲ್ಕು ವಾರಗಳ ಒಳಗೆ ಅಕ್ರಮ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಆದೇಶ ನೀಡಿ, ಈ ಕುರಿತು ಆಗಸ್ಟ್ 18 ರೊಳಗೆ ಅಫಿಡವಿಟ್ ಸಲ್ಲಿಸಬೇಕು ಎಂದು ನಗರಸಭೆ ಆಯುಕ್ತರಿಗೆ ಸೂಚಿಸಿತ್ತು.
ಸಾರ್ವಜನಿಕರ ಸ್ಥಳ (ಫುಟ್ಪಾತ್) ಜನರ ಉಪಯೋಗಕ್ಕೆ ಮಾತ್ರವೇ ಬಳಕೆಯಾಗಬೇಕೇ ಹೊರತು, ಅಲ್ಲಿ ಏನನ್ನೂ ನಿರ್ಮಾಣ ಮಾಡಕೂಡದು ಎಂದು ಸುಪ್ರಿಂಕೋರ್ಟ್ ಆದೇಶವೇ ಇದೆ. ಹೀಗಾಗಿ ಫುಟ್ಪಾತ್ನಲ್ಲಿ ಯಾವುದೇ ನಿರ್ಮಾಣ ನಡೆಯುವುದು ಸೂಕ್ತವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.
ರಾತ್ರೋರಾತ್ರಿ ನೆಲಸಮ:
ಹೈಕೋರ್ಟ್ ಚಾಟಿ ಬೀಸುತ್ತಿದ್ದಂತೆಯೇ ದಿಢೀರ್ ಎಚ್ಚೆತ್ತ ನಗರಸಭೆ ಆಯುಕ್ತರು, ಕೋವಿಡ್ ಹಿನ್ನೆಲೆಯಲ್ಲಿ ಕಟ್ಟಡವನ್ನು ತೆರವು ಮಾಡಲು ಕಾಲಾವಕಾಶ ಬೇಕು ಎಂದು ಕೇಳಿದ್ದರು.
ಆದರೆ ಆ.18 ರೊಳಗೆ ತೆರವು ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿದ್ದರು. ಅದರಂತೆ ಮಂಗಳವಾರ ರಾತ್ರಿ ಪೊಲೀಸ್ ಭದ್ರತೆಯೊಂದಿಗೆ ಅಕ್ರಮ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ತೆರವು ಮಾಡಿರುವ ಬಗ್ಗೆ ಬುಧವಾರ ಹೈಕೋರ್ಟ್ಗೆ ಅಫಿಡವಿಟ್ ಸಹ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ದಿಢೀರ್ ತಲೆ ಎತ್ತಿದ್ದ ಕಟ್ಟಡವೀಗ, ಹಾಗೆಯೇ ಮಾಯವಾಗಿದೆ.
ಮರ ಉಳಿಯಬೇಕು ಎಂಬುದಷ್ಟೇ ನಮ್ಮ ಉದ್ದೇಶವಾಗಿತ್ತು. ದೊಡ್ಡ ಮರ ಕಡಿದ ಜಾಗದಲ್ಲಿ ಸಸಿ ನೆಡುವುದಾಗಿ ಅರಣ್ಯ ಇಲಾಖೆ ಹೈಕೋರ್ಟ್ಗೆ ಲಿಖಿತವಾಗಿ ಹೇಳಿಕೆ ನೀಡಿದೆ. ಆ ಕೆಲಸ ಶೀಘ್ರವಾಗಿ ಆಗಬೇಕು. ಬೇರೆ ಬೇರೆ ಕಡೆಗಳಲ್ಲಿ ವೃಕ್ಷ ಹನನ ಮಾಡಿರುವ ಜಾಗದಲ್ಲೂ ಸಸಿ ನೆಡಬೇಕು. ಇದು ಒಳ್ಳೇ ಸಂದೇಶ. ಇದರಿಂದ ಪ್ರೇರಿತರಾಗಿ ಯುವಕರು, ಪರಿಸರವಾದಿಗಳು, ಜನತೆ ಹೋರಾಟ ಮಾಡಿದರೆ ಖಂಡಿತಾ ನ್ಯಾಯ ಸಿಗಲಿದೆ. ಜೊತೆಗೆ ಪರಿಸರವೂ ಉಳಿಯಲಿದೆ.
-ಡಾ.ದೇವದಾಸು, ದೂರುದಾರ
Tags
ಹಾಸನ