ಬೇಲೂರು: ಲಯನ್ಸ್ ಕ್ಲಬ್ ಇಂದ ಪಟ್ಟಣದ ನೆಹರುನಗರದ ಭಾರತ್ ಪೆಟ್ರೋಲಿಯಂ ಬಂಕ್ ಬಳಿ ಮಧುಮೇಹ ಮತ್ತು ಬಿಪಿ ತಪಾಸಣೆಯನ್ನು ಉಚಿತವಾಗಿ ನಡೆಸಲಾಯಿತು.
ಬೇಲೂರು ಲಯನ್ಸ್ ಕ್ಲಬ್ ವತಿಯಿಂದ ವಿಶ್ವ ಮಧುಮೇಹದ ದಿನದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿದರು |
ತಪಾಸಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಡಾ.ಚಂದ್ರಮೌಳಿ, ವಿಶ್ವ ಮಧುಮೇಹ ದಿನವಾದ ಇಂದು ಇನ್ಸುಲಿನ್ ಕಂಡು ಹಿಡಿದ ದಿನವಾಗಿದೆ. ಡಾ.ಫ್ರೆಡರಿಕ್ ಬ್ಯಾಂಟಿಂಗ್ ಜನ್ಮದಿನ. ಆತ ಚಾರ್ಲ್ಸ್ ಬೆಸ್ಟ್ ಜೊತೆಗೂಡಿ ೧೯೨೧-೨೨ ರಲ್ಲಿ ಮಧುಮೇಹಕ್ಕೆ ಔಷಧಿ ಕಂಡುಹಿಡಿದ ಸುದೀರ್ಘ ಸಾಹಸಗಾಥೆಗೆ ನೂರು ವರ್ಷ ತುಂಬಿದೆ.
೧೮೮೯ರಲ್ಲಿ ಫಿಸಿಶಿಯನ್ ಆಸ್ಕರ್ ಮಿಂಕೋವಸ್ಕಿ ಎಂಬುವರು ಮಧುಮೇಹ ಬರಬಹುದೆಂದು ಶಂಕೆ ವ್ಯಕ್ತಪಡಿಸಿದ್ದರು. ೧೯೦೦ರಲ್ಲಿ ನಾಯಿಯ ದೇಹದಿಂದ ಮೇದೋಜೀರಕಾಂಗವನ್ನು ಬೇರ್ಪಡಿಸಿ ಅದನ್ನು ಸಾಬೀತುಗೊಳಿಸಿದ್ದರು. ೧೯೦೮ರಲ್ಲಿ ಅವರು ಯುಜೀನ್ ಓಪಿ ಎಂಬುವರೊಂದಿಗೆ ಮೇದೋಜೀರಕಾಂಗದ ಸಾರವನ್ನು ಸಂಸ್ಕರಿಸಿ ಅದರಲ್ಲಿರುವ ಚೋದಕಸ್ರಾವ (ಹಾರ್ಮೋನ್)ದಿಂದ ಮಧುಮೇಹವನ್ನು ನಿಯಂತ್ರಿಸುವುದರ ಕುರಿತ ಸಂಶೋಧನೆಗಳನ್ನು ನಡೆಸಿದರು. ಆಗ ತರಬೇತಿನಿರತ ವೈದ್ಯನಾಗಿದ್ದ ಜಾರ್ಜ್ ಲುಡ್ವಿಗ್ ಚೋದಕಸ್ರಾವಕ್ಕೆ ಅಕೋಮೆಟ್ರಾಲ್ ಎಂದು ಹೆಸರಿಟ್ಟು ಐವರು ಮಧುಮೇಹಿಗಳ ಮೇಲೆ ಪ್ರಯೋಗಿಸಿದ ಬಳಿಕ ಅದರಲ್ಲಿ ಗ್ಲೂಕೋಸನ್ನು ಕಡಿಮೆ ಮಾಡುವ ಅಂಶವಿದೆ ಎಂಬುದು ಗೊತ್ತಾಯಿತು.
ಮಧುಮೇಹ ಎನ್ನುವುದು ವಿಶ್ವದೆಲ್ಲೆಡೆಯಲ್ಲಿ ಅತಿಯಾಗಿ ವ್ಯಾಪಿಸಿದ್ದು, ಪ್ರತಿನಿತ್ಯವೂ ಇದಕ್ಕೆ ಹಲವಾರು ಮಂದಿ ಸಿಲುಕುತ್ತಿರುವರು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳುತ್ತಿದೆ. ಆಹಾರ ಕ್ರಮ ಸರಿಯಾಗಿ ಇಲ್ಲದೆ ಇರುವುದು ಮತ್ತು ಕೆಟ್ಟ ಜೀವನ ಶೈಲಿಯು ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಮಧುಮೇಹ ಅನುವಂಶೀಯವಾಗಿಯೂ ಕೆಲವರಿಗೆ ಇದು ಬರುವುದು ಇದೆ. ಮಧುಮೇಹಿಗಳಲ್ಲಿ ಹೆಚ್ಚಾಗಿ ಹೃದಯದ ಕಾಯಿಲೆ, ಕಿಡ್ನಿ ಕಾಯಿಲೆ ಮತ್ತು ರಕ್ತನಾಳ, ಕಣ್ಣು ಮತ್ತು ನರವ್ಯವಸ್ಥೆ ಮೇಲೆ ಗಂಭೀರ ಸಮಸ್ಯೆಯಾಗುವುದು. ಅದರಲ್ಲೂ ಇಂದು ಟೈಪ್ ೨ ಮಧುಮೇಹವು ಅತಿ ಹೆಚ್ಚು ಜನರಲ್ಲಿ ಕಂಡುಬರುತ್ತಿದ್ದು ಎಂದರು.
Advertisement |
ಲಯನ್ಸ್ ಕ್ಲಬ್ ಕಾರ್ಯದರ್ಶಿ ಅಬ್ದುಲ್ ಲತೀಪ್ ಮಾತನಾಡಿ, ಲಯನ್ಸ್ ಸಂಸ್ಥೆ ಕಳೆದ ಎಂಟು ವರ್ಷದಿಂದ ಆರೋಗ್ಯ, ಶಿಕ್ಷಣ, ಪರಿಸರ ಮತ್ತು ಇನ್ನಿತರ ಕ್ಷೇತ್ರದಲ್ಲಿ ಅದ್ವಿತೀಯ ಸೇವಾ ಕಾರ್ಯವನ್ನು ಯಾವುದೇ ಸ್ವಾರ್ಥವಿಲ್ಲದೆ ಮಾಡುತ್ತಿದೆ.ಎಲ್ಲಿ ಅಗತ್ಯತೆ ಇದೆಯೋ ಅಲ್ಲಿ ನಾವಿರಬೇಕು. ಸೇವೆ ಮಾಡುವುದರಿಂದ ನಮಗೆ ತೃಪ್ತಿ ದೊರೆಯುತ್ತದೆ. ದೀನದಲಿತರ ಮತ್ತು ಬಡವರ ಮುಖದಲ್ಲಿ ನಗು ತರುವುದೇ ನಮ್ಮ ಕ್ಲಭ್ ಉದ್ದೇಶವಾಗಿದೆ. ಇನ್ನೂ ಮುಂದೆ ಕೂಡ ಲಯನ್ಸ್ ಸಮಾಜ ಸೇವೆಯನ್ನು ಅತ್ಯಂತ ಕ್ರಿಯಾಶೀಲವಾಗಿ ನಡೆಸುತ್ತದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ, ಮಾಜಿ ಅಧ್ಯಕ್ಷರಾದ ಎಂ.ಪಿ.ಪೂವಯ್ಯ, ಕೆ.ಎಲ್.ಸುರೇಶ್, ರಮೇಶ್ ಮತ್ತು ಪದಾಧಿಕಾರಿಗಳಾದ ಮುಕ್ತಿಯಾರ್ ಅಹಮದ್, ನೌಷದ್ ಪಾಷ, ಧರ್ಮಪ್ಪ, ಸುರೇಶ್, ಚೇತನ್ ಕುಮಾರ ಇನ್ನೂ ಮುಂತಾದವರು ಹಾಜರಿದ್ದರು.