ಹಾಸನದ ಹಿಮ್ಸ್ ಗೆ ರಾಜ್ಯಮಟ್ಟದಲ್ಲಿ ಎನ್‌ಎಬಿಎಚ್ ಪ್ರವೇಶ ಮಾನ್ಯತೆ

ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್‌)ಗೆ ಪ್ರತಿಷ್ಠಿತ ನ್ಯಾಷನಲ್‌ ಅಕ್ರೆಡಿಟೇಷನ್ ಬೋರ್ಡ್‌ ಆಫ್ ಹಾಸ್ಪಿಟಲ್‌ ಆಯಂಡ್‌ ಹೆಲ್ತ್‌ ಕೇರ್ (ಎನ್‌ಎಬಿಎಚ್‌) ಮಾನ್ಯತೆ ಲಭಿಸಿದೆ.

ರಾಜ್ಯಮಟ್ಟದಲ್ಲಿ ಎನ್‌ಎಬಿಎಚ್ ಪ್ರವೇಶ ಮಾನ್ಯತೆ ಪಡೆದ ಏಕೈಕ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಇದಾಗಿದೆ.

ಎನ್‌ಎಬಿಎಚ್‌ ಎಂಬುದು ದೇಶದ ಆರೋಗ್ಯ ಸಂಸ್ಥೆಗಳನ್ನು ಪರಿಶೀಲಿಸಿ ಮೌಲ್ಯ ಮಾಪನ ಮಾಡಿ ಮಾನ್ಯತೆ ನೀಡುವ ಪ್ರಮುಖ ಸಂಸ್ಥೆಯಾಗಿದೆ ಎಂದು ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೋಗಿಗಳಿಗೆ ನೀಡುವ ಚಿಕಿತ್ಸೆಯ ಗುಣಮಟ್ಟ, ಸುರಕ್ಷತಾ ಕ್ರಮ, ಆಸ್ಪತ್ರೆ ಕಾರ್ಯವೈಖರಿ, ಸೇವೆ, ಸೌಲಭ್ಯ, ದರಗಳ ಸಂಫೂರ್ಣ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಸಿಬ್ಬಂದಿ ವರ್ಗದವರಿಗೆ ಭದ್ರತೆ ಹಾಗೂ ಸೂಕ್ತ ವಾತಾವರಣ ಕಲ್ಪಿಸುವುದು. ಆಸ್ಪತ್ರೆ ಸೇವೆಗಳಲ್ಲಿ ಜನ ಸಾಮಾನ್ಯರಲ್ಲಿ ರುವ ಭರವಸೆ ಮತ್ತು ನಂಬಿಕೆಗಳನ್ನು ಮತ್ತಷ್ಟು ಹೆಚ್ಚಿಸುವುದು ಎನ್‌ಎ ಬಿಎಚ್‌ ಮಾನ್ಯತೆಯ ಮೂಲ ಧ್ಯೇಯ ವಾಗಿದೆ ಎಂದು ಮಾಹಿತಿ ನೀಡಿದರು.

ಒಟ್ಟು ಎರಡು ಹಂತದಲ್ಲಿ ನಡೆದ ಮೌಲ್ಯ ಮಾಪನದಲ್ಲಿ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯ, ಪರೀಕ್ಷೆ, ಚಿಕಿತ್ಸೆ ನೀಡುವಾಗ ಅನುಸರಿಸುವ ಸುರಕ್ಷತಾ ಕ್ರಮ, ತುರ್ತು ಚಿಕಿತ್ಸೆ, ಐಸಿಯು ಕೇರ್‌ಗಳಲ್ಲಿ ಸೂಕ್ತ ಮಾರ್ಗಸೂಚಿ ಅಳವಡಿಕೆ, ಔಷಧ ವಿತರಣೆ, ಶೇಖರಣೆ ಹಾಗೂ ಅಡ್ಡಪರಿಣಾಮಗಳಿಗೆ ಸೂಕ್ತ ವ್ಯವಸ್ಥೆ ಮಾಡಿರುವುದು, ಆಂಬುಲೆನ್ಸ್‌ ವ್ಯವಸ್ಥೆ, ರೋಗಿಗಳ ಹಕ್ಕು ಹಾಗೂ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವ ಕ್ರಮಗಳು, ಸೋಂಕು ತಡೆಗಟ್ಟಲು ಸೂಕ್ತ ಕ್ರಮ ಅನುಸರಿಸುತ್ತಿರುವ ಕ್ರಮ ಹೀಗೆ ಒಟ್ಟು ಹತ್ತು ಅಧ್ಯಾಯಗಳು, 45 ಮಾನದಂಡಗಳು ಮತ್ತು 165 ಗುರಿಗಳನ್ನು ಪರಿಶೀಲಿಸಲಾಯಿತು ಎಂದು ವಿವರಿಸಿದರು.

ಐದು ಅಧ್ಯಾಯಗಳ ಮೂಲಕ ರೋಗಿಗಳ ಚಿಕಿತ್ಸೆ ಹಾಗೂ ಸುರಕ್ಷತೆ ಬಗ್ಗೆ ಇನ್ನುಳಿದ ಐದು ಅಧ್ಯಾಯಗಳ ಮೂಲಕ ಆಸ್ಪತ್ರೆ ಸೌಲಭ್ಯ, ಮೂಲ ಸೌಕರ್ಯ, ಸಿಬ್ಬಂದಿ ಜ್ಞಾನ, ತರಬೇತಿ ಮಟ್ಟದ ಬಗ್ಗೆ ಮೌಲ್ಯಮಾಪನ ನಡೆಸಲಾಯಿತು. ಆಸ್ಪತ್ರೆ ಈ ಎಲ್ಲಾ ವಿಚಾರಗಳಲ್ಲೂ ಶೇಕಡಾ 95ಕ್ಕಿಂತ ಹೆಚ್ಚು ಅಂಕ ಪಡೆದು ತೇರ್ಗಡೆ ಆಗಿರುವುದರಿಂದ ಮಾನ್ಯತೆ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಆಸ್ಪತ್ರೆಗಳಲ್ಲಿ 20 ವಿಭಾಗಗಳ ಪೈಕಿ 18 ವಿಭಾಗಗಳಲ್ಲಿ ಪಿ.ಜಿ ಕೋರ್ಸ್‌ ಆರಂಭಿಸಲಾಗಿದೆ. ಎಂಆರ್‌ಐ ಪರೀಕ್ಷೆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗು ವುದು. ನಾಲ್ವರು ರೇಡಿಯಾಲಜಿಸ್ಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಶೀಘ್ರ ದಲ್ಲೇ ಮತ್ತಿಬ್ಬರ ನೇಮಕ ಮಾಡಿಕೊಳ್ಳ ಲಾಗುವುದು. ಸಣ್ಣಪುಟ್ಟ ಸಮಸ್ಯೆ ನಡುವೆಯೂ ಆಸ್ಪತ್ರೆ ಉತ್ತಮ ಸೇವೆ ನೀಡುತ್ತಿದ್ದು, ಸಾರ್ವಜನಿಕರು ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಹಿಮ್ಸ್‌ ಆಡಳಿತಾಧಿಕಾರಿ ಗಿರೀಶ್ ನಂದನ್ ಮಾತನಾಡಿ, ಮುಂದೆಯೂ ಹಿಮ್ಸ್‌ನಲ್ಲಿ ಗುಣಮಟ್ಟದ ಸೇವೆ ಮುಂದುವರಿಸಲು ಪ್ರಯತ್ನಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ನರ್ಸಿಂಗ್ ಅಧಿಕಾರಿ ವೆಲೊರಿಯನ್ ಪಿಂಟೋ, ಮೆಡಿಸಿನ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ವೇಣುಗೋಪಾಲ್, ಸಮುದಾಯ ವೈದ್ಯಕೀಯ ಶಾಸ್ತ್ರ ವಿಭಾಗ ಸಹ ಪ್ರಾಧ್ಯಾಪಾಕರಾದ ಡಾ.ಸುಮನಾ ಪ್ರಸಾದ್‌, ಡಾ.ಪವಿತ್ರಾ ಇದ್ದರು.

Post a Comment

Previous Post Next Post