ಶಾಸಕ ಕೆ ಎಂ ಶಿವಲಿಂಗೇಗೌಡರ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ..

ಅರಸೀಕೆರೆ:- ಕ್ಷೇತ್ರದ ಶಾಸಕ ಕೆ.ಎಂ ಶಿವಲಿಂಗೇಗೌಡರ ವಿರುದ್ಧ ಬಿಜೆಪಿ ಇಂದು ನಗರದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಿತು .
   ನಿಕಟಪೂರ್ವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್, ಹಾಸನ ಶಾಸಕ ಪ್ರೀತಮ್ ಗೌಡ, ರಾಜ್ಯ ಬಿಜೆಪಿ ಕಾರ್ಯದರ್ಶಿ ರವಿಕುಮಾರ್ ಹಾಗೂ ನಗರಸಭೆ ಅಧ್ಯಕ್ಷ ಗಿರೀಶ್ ನೇತೃತ್ವದಲ್ಲಿ ಸೇರಿದ ಸಾವಿರಾರು ಪ್ರತಿಭಟನಾಕಾರರು ಶಾಸಕ ಶಿವಲಿಂಗೇಗೌಡರ ವಿರುದ್ಧ ಘೋಷಣೆ ಕೂಗುತ್ತಾ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ನಗರದ ಅಯ್ಯಪ್ಪ ಸ್ವಾಮಿ ದೇವಾಲಯದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಳ್ಳುತ್ತಿದಂತೆ ಇತ್ತ ಮಳೆಯು ಸುರಿಯಲು ಆರಂಭಿಸಿತು ಸುರಿಯುವ ಮಳೆಯನ್ನು ಲೆಕ್ಕಿಸದೆ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರತಿಭಟನಾಕಾರರು ಹೆಜ್ಜೆ ಹಾಕುವ ಮೂಲಕ ಶಾಸಕರ ನಡೆನುಡಿಯನ್ನು ಖಂಡಿಸಿದರು.

 ಪಿಪಿ ವೃತ್ತದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರೀತಂಗೌಡ ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಜನಪರ ಆಡಳಿತ ನೀಡುತ್ತಿರುವ ಬಿಜೆಪಿ ಸರ್ಕಾರ ದಿನದಿಂದ ದಿನಕ್ಕೆ ಬಲಿಷ್ಠವಾಗಿ ಬೆಳೆಯುತ್ತಿದೆ ಆ ಬದಲಾವಣೆಯು ಅರಸೀಕೆರೆಯಲ್ಲೂ ಆಗಲಿ ಯುವಕರಾಗಿರುವ ಎನ್ ಆರ್ ಸಂತೋಷ್ ಅವರಿಗೆ ಒಂದು ಅವಕಾಶ ಕಲ್ಪಿಸಿ ಕೊಡುವ ಮೂಲಕ ಅರಸೀಕೆರೆ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯುವಂತೆ ಕಾರ್ಯಕರ್ತರು ಹಾಗೂ ಪ್ರತಿಭಟನಾಕಾರರಿಗೆ ಕರೆನೀಡಿದರು.

    ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಅರಸೀಕೆರೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ. ತಾವು ಒಬ್ಬ ಚುನಾಯಿತ ಜನಪ್ರತಿನಿಧಿ ಎಂಬುದನ್ನ ಮರೆತಿರುವ ಶಾಸಕ ಶಿವಲಿಂಗೇಗೌಡರು ಜಾತಿ ಜಾತಿಗಳ ನಡುವೆ ಸಂಘರ್ಷ ನಿರ್ಮಿಸಿ ತಮ್ಮ ಸ್ವಾರ್ಥ ರಾಜಕಾರಣಕ್ಕೆ ಗ್ರಾಮ ಹಾಗೂ ಕುಟುಂಬಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಗುಡಿ ಗೋಪುರಗಳನ್ನು ಕೆಡವಿ ದೇವರ ದೇವರ ಪೂಜೆಗೂ ಶಿವಲಿಂಗೇಗೌಡರ ಕಾಲದಲ್ಲಿ ಸಂಕಷ್ಟ ಎದುರಾಗಿದೆ ಅರಸೀಕೆರೆ ಜನತೆ ಈ ರೀತಿ ಮನಸ್ಥಿತಿ ಇರುವ ಶಾಸಕರನ್ನ ವಿಧಾನಸಭೆಗೆ ಕಳಿಸುವುದು ಬೇಡ ಯುವ ಮುಖಂಡರಾಗಿರುವ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಮನಸ್ಥಿತಿ ಹೊಂದಿರುವ ಸಂತೋಷ್ ಅವರಿಗೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಪ್ರತಿಭಟ ಕಾರರು ಭಾಷಣ ಕೇಳಿ ಮನೆಗೆ ಹೋದರೆ ಸಾಲದು, ಇಂದಿನಿಂದಲೇ ಬೂತ್ ಮಟ್ಟದಲ್ಲಿ ಮನೆಮನೆಗೆ ತೆರಳಿ ಪಕ್ಷ ಸಂಘಟನೆಗೆ ಹೊತ್ತು ನೀಡುವ ಮೂಲಕ ಸಂತೋಷ್ ಅವರ ಗೆಲುವಿಗೆ ಈಗಿನಿಂದಲೇ ಶ್ರಮಿಸಿದ್ದರೆ ಅರಸೀಕೆರೆ ವಿಧಾನಸಭಾ ಕ್ಷೇತ್ರ ಬಿಜೆಪಿಯ ವಶವಾಗಲಿದೆ ಎಂದು ಭವಿಷ್ಯ ನುಡಿದರು.

   ಎನ್ ಆರ್ ಸಂತೋಷ್ ಮಾತನಾಡಿ,  ಕಳೆದ 14 ವರ್ಷಗಳಿಂದ ಸ್ಥಳೀಯ ಶಾಸಕರ ದುರಾಡಳಿತ ಸರ್ವಾಧಿಕಾರಿ ಧೋರಣೆ ಇಂದ ಕ್ಷೇತ್ರದ ಜನತೆ ಸಾಕಷ್ಟು ನೊಂದಿದ್ದು ಇನ್ನು ಮುಂದೆ ಕ್ಷೇತ್ರದ ಮತದಾರರು ಇವರ ಸ್ವಾರ್ಥ ರಾಜಕಾರಣದ ಮರುಳು ಮಾತಿಗೆ ಮರಳಾಗುವುದಿಲ್ಲ. ಈಗಾಗಲೇ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದೆ. 2023ರ ಚುನಾವಣೆಯಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

      ಪ್ರತಿಭಟನೆಯಲ್ಲಿ ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಾಟಿಕೆರೆ ಪ್ರಸನ್ನ ಕುಮಾರ್. ನಿಕಟ ಪೂರ್ವ ಅಧ್ಯಕ್ಷ ಎನ್.ಡಿ ಪ್ರಸಾದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ.ಎನ್ ಮನೋಜ್ ಕುಮಾರ್, ತಾಲೂಕು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಮೇಶ್, ನಗರ ಮಂಡಲದ ಅಧ್ಯಕ್ಷ ಪುರುಷೋತ್ತಮ್, ನಗರ ಸಭೆ ಸದಸ್ಯರಾದ ಶ್ವೇತಾ ರಮೇಶ್, ಶುಭ ಮನೋಜ್, ಮೇಲಗಿರಿ ಗೌಡ, ಬಿಜೆಪಿ ಮುಖಂಡರಾದ ಲಾಳನಕೆರೆ ಯೋಗೀಶ್, ಜಯದೇವ್,  ಸುಧಾಕಲ್ಯಾಣ್ ಕುಮಾರ್ ಮತ್ತು ಇತರರು ಪಾಲ್ಗೊಂಡಿದ್ದರು.

Post a Comment

Previous Post Next Post