ಬೆಂಗಳೂರು: ಅರಣ್ಯ ಭೂಮಿಯಲ್ಲೇ ಗಣಿಗಾರಿಕೆ ನಡೆಸಲು ನಿರಾಕ್ಷೇಪಣಾ ಪತ್ರಗಳನ್ನು ನೀಡಿದಂತ ಹಾಸನ ಉಪ ವಲಯ ಅರಣ್ಯಾಧಿಕಾರಿ ಕೆ.ಹರೀಶ್ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಹಾಸನ ಜಿಲ್ಲೆಯ ಪರಿಭಾವಿತ ಅರಣ್ಯ ಪ್ರದೇಶವೆಂದು ಘೋಷಿಸಿರುವ ಮಿತಿಯಲ್ಲಿ, ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿ, ಚನ್ನರಾಯಪಟ್ಟಣ ತಾಲೂಕು, ಶ್ರವಮಬೆಳಗೋಳ ಹೋಬಳಿ, ದಡಿಘಟ್ಟ ಗ್ರಾಮದ ಸರ್ವೆ ನಂಬರ್ 224ರ ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಯ 21 ಎಕರೆ ಭೂಮಿಯನ್ನು ಕಲ್ಲು ಗಣಿಗಾರಿಕೆಗೆ ಅನುಧಿಕೃತವಾಗಿ ನಿರಾಕ್ಷಏಪಣಾ ಪತ್ರವನ್ನು ಹಾಸನ ಉಪ ವಲಯ ಸಂರಕ್ಷಣಾಧಿಕಾರಿ ಕೆ.ಹರೀಶ್ ನೀಡಿದ್ದರು.
ಪರಿಭಾವಿತ ಅರಣ್ಯವನ್ನು ಕರ್ತವ್ಯ ಲೋಪದೊಂದಿಗೆ ಕಲ್ಲುಗಣಿಗಾರಿಕೆ ನೀಡಿ ಅಕ್ರಮವೆಸಗಿದ್ದು ಮೇಲ್ನೋಟಕ್ಕೆ ಕಂಡುಬಂದಿತ್ತು. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಂತ ಪ್ರಸ್ತಾವನೆಯ ಹಿನ್ನಲೆಯಲ್ಲಿ, ಇಂದು ಈ ಸಂಬಂಧ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಗೀತಾ ಎಂ ಪಾಟೀಲ್ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಹಾಸನ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಮಾಧಿಕಾರಿ ಕೆ.ಹರೀಶ್ ಅವರನ್ನು ಕರ್ತವ್ಯ ಲೋಪದ ಆಧಾರಮೇಲೆ ಶಿಸ್ತು ಕ್ರಮ ವಹಿಸುವುದನ್ನು ಬಾಕಿ ಇರಿಸಿ, ಸೇವೆಯಿಂದ ಅಮಾನತುಪಡಿಸಿ ಆದೇಶಿಸಿದೆ.
