ಹೋಟೆಲ್ ಓಪನ್ ಮಾಡಿದ್ರೆ, ಊಟ ತಿಂದು ಬಿಲ್ ಕೊಡ್ಬೇಡಿ: ವಾಟಾಳ್ ನಾಗರಾಜ್

ಹಾಸನ: ಹೋಟೆಲ್ ಓಪನ್ ಮಾಡಿದರೆ, ಊಟ ತಿಂದು ಬಿಲ್ ಕೊಡಬೇಡಿ ಎಂದು ಹೋರಾಟಗಾರರಿಗೆ ವಾಟಾಳ್ ನಾಗರಾಜ್ ಹೇಳಿದ್ದಾರೆ.


ಹಾಸನದಲ್ಲಿ ಮಾತನಾಡಿದ ಅವರು, ಸುಮಾರು 3 ಸಾವಿರ ಕನ್ನಡಪರ ಸಂಘಟನೆಗಳು ಮತ್ತು ರೈತರು ಒಂದಾಗಿ ಬಂದ್‍ಗೆ ಬೆಂಬಲವನ್ನು ಕೊಟ್ಟಿದೆ. ಕನ್ನಡ ಒಕ್ಕೂಟದ ಮುಖಂಡರುಗಳಾದ ಸಾ.ರಾ. ಗೋವಿಂದ್, ಶಿವರಾಮೇಗೌಡ, ನಾರಾಯಣಗೌಡ, ಪ್ರವೀಣ್ ಶೆಟ್ಟಿ, ಕೆ.ಆರ್ ಕುಮಾರ್, ಮಂಜುನಾಥ್ ದೇವ್, ಗಿರೀಶ್ ಗೌಡ ಸೇರಿದಂತೆ ಅನೇಕ ಸಂಘಟನೆಗಳು ಬಂದ್‍ಗೆ ಕೈಜೋಡಿಸಿದೆ ಎಂದು ತಿಳಿಸಿದರು.
 
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಿದ್ದು ರೈತರ ಹೆಸರಿನಲ್ಲಿ ಹೊರತು ಬಿಜೆಪಿ ಹೆಸರಿನಲ್ಲಿಯಲ್ಲ. ಹಸಿರು ಶಾಲು ಹಾಕಿಕೊಂಡು ಕೈಬೀಸುತ್ತಿದ್ದವರು ಈಗ ರೈತರನ್ನು ತುಳಿಯಲು ಹೊರಟಿದ್ದಾರೆ. ರೈತರುಗಳೆಲ್ಲಾ ಇವರ ಗುಲಾಮರಲ್ಲ ಎಂದು ಕಿಡಿಕಾರಿದರು. ರೈತರನ್ನು ಕೊಲ್ಲುವ ಎರಡು ಮಸೂದೆಗಳನ್ನು ಯಡಿಯೂರಪ್ಪನವರ ಸರ್ಕಾರವು ಹಿಂಪಡೆಯಲೇಬೇಕು. ರೈತರ ಜಮೀನನ್ನು ದೊಡ್ಡ ದೊಡ್ಡ ಕಾರ್ಖಾನೆ ಮಾಲೀಕರು, ಶ್ರೀಮಂತರು ಸೇರಿದಂತೆ ಯಾರು ಬೇಕಾದರೂ ಕೊಂಡುಕೊಳ್ಳಬಹುದಾದ ಮಸೂದೆ ರೈತರ ಮರಣ ಶಾಸನವಾಗಿದೆ. ಭೂ ಶಾಸನ ಜಾರಿಗೆ ತರಬಾರದಿತ್ತು ಎಂದು ಕಿಡಿಕಾರಿದರು.

ವಿನೂತನವಾದ ಚಳುವಳಿ ನಡೆಯಲಿದೆ. ಪೊಲೀಸರು ಈ ಬಂದ್‍ನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಮಿಷನರ್ ಮತ್ತು ಡಿಜಿಗೆ ಪೂರ್ಣ ಅಧಿಕಾರ ನೀಡಿದ್ದಾರೆ. ಕಮಿಷನರ್ ಮತ್ತು ಡಿಜಿ ಇಬ್ಬರೂ ಕನ್ನಡಿಗರಲ್ಲ. ಬೆಂಗಳೂರು ಮಹಾನಾಗರಿಕಾ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಮಾರವಾಡಿಯಾಗಿದ್ದು, ಸಿಎಂ ಯಡಿಯೂರಪ್ಪನವರು ಎಲ್ಲಾ ಕಡೆ ಪರಭಾಷೆಯವರನ್ನು ಹಾಕುತ್ತಿದ್ದಾರೆ ಎಂದು ದೂರಿದರು. ಬಂದ್ ಹೋರಾಟದ ವೇಳೆ ಏನಾದರೂ ದಬ್ಬಾಳಿಕೆ ಮಾಡಿದರೆ ಭಾರಿ ಹೋರಾಟ ಮಾಡಬೇಕಾದ ಅನಿವಾರ್ಯ ಬರುತ್ತದೆ ಎಂದು ಕಿಡಿಕಾರಿದರು

Post a Comment

Previous Post Next Post