ಹಾಸನ: ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬಾಗನಹಳ್ಳಿ ಕ್ರಾಸ್ ಬಳಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ತಲೆ ತಪ್ಪಿಸಿಕೊಂಡಿದ್ದ ಈರ್ವ ಆರೋಪಿಯನ್ನು ಬಂಧಿಸುವಲ್ಲಿ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಯಶಸ್ವಿ ಕಾರ್ಯಚರಣೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2020 ಸೆಪ್ಟಂಬರ್ 2 ರಂದು ಹಾಸನ ಅರಕಲಗೂಡು ರಸ್ತೆಯ ದೊಡ್ಡಬಾಗನಹಳ್ಳಿ ಕ್ರಾಸ್ ಸಮೀಪ ಕಟ್ಟಾಯ ಹೋಬಳಿ ಜವೇನಹಳ್ಳಿ ಕೊಪ್ಪಲು ಗ್ರಾಮದ ಸ್ವಾಮೀಗೌಡ ಎಂಬುವರ ಪುತ್ರ ದಿನೇಶ್ ಎಂಬಾತನ ಮೇಲೆ ತಲೆಯ ಮೇಲೆ ಯಾರೋ ದುಷ್ಕರ್ಮಿಗಳು ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿದ್ದ ಬಗ್ಗೆ ಶಕುನಿಗೌಡ ಎಂಬುವರ ಜಮೀನಿನ ರಸ್ತೆ ಬದಿ ಕಾಲುವೆಯಲ್ಲಿ ದೇಹ ಪತ್ತೆಯಾಗಿದೆ. ಮೃತನ ತಂದೆ ಸ್ವಾಮಿಗೌಡರವರು ಗೊರೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣವನ್ನು ದಾಖಲಿಸಿಕೊಂಡು ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ ರವರ ಮೇಲುಸ್ತುವಾರಿಯಲ್ಲಿ ಮತ್ತು ಹಾಸನ ಉಪವಿಭಾಗದ ಪೊಲೀಸ್ ಅಧೀಕ್ಷಕರಾದ ಪುಟ್ಟಸಾಮಿಗೌಡ, ಟಿ.ಆರ್ ರವರ ಉಸ್ತುವಾರಿಯಲ್ಲಿ ಹಾಸನ ಗ್ರಾಮಾಂತರ ವೃತ್ತಿ ನಿರೀಕ್ಷಕರಾದ ಸುರೇಶ್ .ಪಿ ರವರ ನೇತೃತ್ವದಲ್ಲಿ ಗೊರೂರು ಪೊಲೀಸ್ ರಾಣಾ ನಿರೀಕ್ಷಕರಾದ ಜಗದೀಶ್ ಜಿ ಮತ್ತು ಸಿಬ್ಬಂದಿಗಳ ವಿಶೇಷ ತಂಡ ರಚನೆ ಮಾಡಿ ತನಿಖೆಯನ್ನು ಕೈಗೊಳ್ಳಲಾಗಿತ್ತು.
ಆರೋಪಿಯ ಪತ್ತೆಗಾಗಿ ನಿಕರವಾದ ಮಾಹಿತಿ ಸಂಗ್ರಹಿಸಿದಾಗ ಮೈಸೂರು ಜಿಲ್ಲೆಯ ಕೆ.ಆರ್. ನಗರದ ನಿವಾಸಿ ಹಾಗೂ ಸ್ವಂತ ಸ್ಥಳ ಸೋಮವಾರ ಪೇಟೆ ತಾಲೂಕು ಶನಿವಾರ ಸಂತೆ ಹೋಬಳಿಯ ಅರೆಸೂರು ಗಾಮದ ಹೆಚ್.ಜಿ. ಮೋಹನ್ ಎಂಬುವನು ಕೊಲೆ ಮಾಡಿರುವ ಬಗ್ಗೆ ಅನುಮಾನ ಬಂದ ಹಿನ್ನಲೆಯಲ್ಲಿ ಅಕ್ಟೋಬರ್ 13 ರಂದು ಬೆಳಿಗ್ಗಿನ ಜಾವ ಮೊಸಳೆ ಹೊಸಹಳ್ಳಿ ಬಸ್ ನಿಲ್ದಾಣದ ಬಳಿ ಬಂಧಿಸಿ ವಶಕ್ಕೆ ಪಡೆಸಿಕೊಂಡು ವಿಚಾರಣೆ ಮಾಡಿದಾಗ ಒಂದು ತಿಂಗಳ ಹಿಂದೆ ನಡೆದ ಕೊಲೆಯ ಬಗ್ಗೆ ತನಿಖಾ ಸಮಯದಲ್ಲಿ ಒಪ್ಪಿಕೊಂಡಿದ್ದಾನೆ.
ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳಾದ ಹಾಸನ ಗ್ರಾಮಾಂತರ ವೃತ್ತಿ ನಿರೀಕ್ಷಕರಾದ ಸುರೇಶ್ .ಪಿ ರವರ ನೇತೃತ್ವದಲ್ಲಿ ಗೊರೂರು ಪೊಲೀಸ್ ರಾಣಾ ನಿರೀಕ್ಷಕರಾದ ಜಗದೀಶ್ ಜಿ ಮತ್ತು ಸಿಬ್ಬಂದಿಗಳಾದ ರವಿಕುಮಾರ್, ಸುಬ್ರಮಣ್ಯ, ಅರುಣ್ ಕುಮಾರ್, ಅನೀಲ್ ಕುಮಾರ್, ಪೀರ್ ಖಾನ್ ಇವರಿಗೆ ಪ್ರಶಂಸೆಯ ಪತ್ರ ನೀಡಿ ಗೌರವಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಹಾಸನ ಉಪವಿಭಾಗದ ಪೊಲೀಸ್ ಅಧೀಕ್ಷಕರಾದ ಪುಟ್ಟಸಾಮಿಗೌಡ, ಟಿ.ಆರ್, ಎಎಸ್ಪಿ ನಂದಿನಿ, ಹಾಸನ ಗ್ರಾಮಾಂತರ ವೃತ್ತಿ ನಿರೀಕ್ಷಕರಾದ ಸುರೇಶ್ .ಪಿ ಉಪಸ್ಥಿತರಿದ್ದರು.
