ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟ ವ್ಯಾಪ್ತಿಯ ಬಿಸಿಲೆ ರಕ್ಷಿತಾರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಅಕ್ಕಪಕ್ಕದ ಗ್ರಾಮಗಳ ಜನರಿಗೆ ಆತಂಕ ತಂದಿಟ್ಟಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಬಿಸಿಲೆ ರಕ್ಷಿತಾ ಅರಣ್ಯದ ಅಕ್ಕಪಕ್ಕದ ಜಿಲ್ಲೆಯಲ್ಲಿ ಉಪಟಳ ನೀಡಿದ ಮೂರು ಚಿರತೆಯನ್ನು ಹಿಡಿದು ಬಿಸಿಲೆ ರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು ಸ್ಥಳೀಯರ ನಿದ್ದೆಗೆಡಿಸಿದೆ.
ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗೆ ಕಾಡಾನೆ, ಕಾಡುಹಂದಿ, ಕಾಡೆಮ್ಮೆಗಳಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. ಜೀವಭಯದಿಂದ ಜೀವನ ನಡೆಸುವ ಪರಿಸ್ಥಿತಿ ಉಂಟಾಗಿದೆ. ಗ್ರಾಮಕ್ಕೆ ನುಗ್ಗುತ್ತಿರುವ ಚಿರತೆ ಭೀತಿಯಿಂದ ಬಹುತೇಕ ಕೃಷಿ ಚಟುವಟಿಕೆ ಜೀವನ ನಡೆಸುವ ಇಲ್ಲಿನ ಆನೆಗುಂಡಿ, ಮಾವನೂರು ಉದ್ದಿನ್ ಊರು ಮ್ಯಾಗ್ಡಹಳ್ಳಿ, ಹಡ್ಲುಗದ್ದೆ, ಬಿಸಿಲೆ ಸುತ್ತಮುತ್ತಲ ರೈತರು ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ಎದುರಾಗಿದೆ.
'ಕಳೆದ ಒಂದು ವಾರದ ಹಿಂದೆ ಅರಣ್ಯ ಇಲಾಖೆ ಹೊರ ಜಿಲ್ಲೆಯಿಂದ ಮೂರು ಚಿರತೆಗಳನ್ನು ರಾತ್ರಿ ಸಮಯದಲ್ಲಿ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಜತೆಗೂಡಿ ಬಿಸಿಲೆ ಜನವಸತಿ ಇರುವ ಪ್ರದೇಶದ ಹತ್ತಿರ ಅರಣ್ಯಕ್ಕೆ ಬಿಟ್ಟಿದೆ' ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಗೆ ನುಗ್ಗಿದ್ದ ಚಿರತೆ: ಬಿಸಿಲೆ ಗ್ರಾಮದ ಸಮೀಪವಿರುವ ಹೋನಟ್ಲು ಗ್ರಾಮದ ರೈತ ಮಹಿಳೆ ಜಯಂತಿ ಮನೆ ಬಳಿ ಸೋಮವಾರ ರಾತ್ರಿ 12 ಗಂಟೆಗೆ ಚಿರತೆ ಕಾಣಿಸಿಕೊಂಡಿದೆ. ಭಯಭೀತರಾದ ರೈತ ಮಹಿಳೆ ಮತ್ತು ಕುಟುಂಬ ಭಯದಿಂದ ನಿದ್ದೆಗೆಟ್ಟು ಕುಳಿತ ಘಟನೆ ನಡೆದಿದೆ. ಅದೇ ಗ್ರಾಮದ ಪುಟ್ಟ ಸ್ವಾಮಿಗೌಡ ತಮ್ಮ ಜಮೀನಿನಲ್ಲಿ ಕೆಲಸ ಮಾಡಿ ಬರುವಾಗ ಚಿರತೆ ಕಾಣಿಸಿಕೊಂಡಿದೆ. ಗ್ರಾಮಸ್ಥರು ಬಂದು ಪಟಾಕಿ ಸಿಡಿಸಿ ಚಿರತೆಯನ್ನು ಓಡಿಸಿದ್ದಾರೆ. ವನಗೂರು ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ತಮ್ಮ ಮನೆಗೆ ಕಾರಿನಲ್ಲಿ ಸಂಜೆ ಹೊತ್ತು ತೆರಳುವಾಗ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
'ಬಿಸ್ಲೆ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಇದೆ ಎಂಬ ದೂರಿನ ಹಿನ್ನೆಲೆಯಲ್ಲಿ ಬೋನ್ ಇರಿಸಿ ಸೆರೆಗೆ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಸಿಬ್ಬಂದಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಅನ್ಯ ಜಿಲ್ಲೆಯಿಂದ ಈ ಜಿಲ್ಲೆಗೆ ಚಿರತೆ ತಂದು ಬಿಡಲು ಡಿಸಿಎಫ್ ಅನುಮತಿ ಬೇಕು. ಅವರು ನಮ್ಮ ಗಮನಕ್ಕೆ ತರುತ್ತಾರೆ. ಆದರೆ ಪ್ರಸ್ತುತ ಅಂತಹ ಮಾಹಿತಿ ಇಲ್ಲ' ಎಂದು ಹಾಸನ ಡಿಎಫ್ಒ ಬಸವರಾಜು ಮಾಹಿತಿ ನೀಡಿದ್ದಾರೆ.