ಹಾಸನ ಏ.೨೩ :- ಜಿಲ್ಲೆಯ ಕೃಷಿಕರಿಗೆ ತಾಂತ್ರಿಕ ಅರಿವು ಮೂಡಿಸುವ ಸಲುವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ತೋಟಗಾರಿಕಾ ವಾಣಿ ವಿಶೇಷ ಮಾಸಿಕ ಸಂಚಿಕೆಯನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಹಾಸನ ಜಿಲ್ಲೆಯಲ್ಲಿ ಹೊರತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿAದು ತೋಟಗಾರಿಕೆ ವಾಣಿ ಎಂಬ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮುಂಗಾರು -ಹಿಂಗಾರು ವೇಳೆ ಜಿಲ್ಲೆಯಲ್ಲಿ ರೈತರಿಂದ ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ, ಕಾಳುಮೆಣಸು, ಶುಂಠಿ , ಬಾಳೆ, ಆಲೂಗೆಡ್ಡೆ ಇತರೆ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ ಇವರಿಗೆ ತಾಂತ್ರಿಕ ನಿರ್ವಹಣೆಯ ಕೊರತೆ ಹಾಗೂ ಸರ್ಕಾರದ ಯೋಜನೆಗಳ ಮಾಹಿತಿ ಕೊರತೆ ಇದೆ ಜಿಲ್ಲೆಯ ಪ್ರಗತಿ ಪರ ರೈತರ ಮಾಹಿತಿ ಹಾಗೂ ಅವರು ಅನುಸರಿಸುತ್ತಿರುವ ತೋಟಗಳ ನಿರ್ವಹಣೆ ಬಗ್ಗೆ ತೋಟಗಾರಿಕ ವಾಣಿಯಲ್ಲಿ ಮಾಹಿತಿ ಇರಲಿದೆ ಆದ್ದರಿಂದ ಇದು ರೈತರಿಗೆ ಅತಿ ಹೆಚ್ಚು ಉಪಯುಕ್ತವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು
ಈ ವಿಶೇಷ ಸಂಚಿಕೆಯು ತಿಂಗಳಿಗೊಮ್ಮೆ ಹೊರ ಬರುವುದರಿಂದ ಉಚಿತವಾಗಿ ಜಿಲ್ಲಾ ಪಂಚಾಯತಿ, ತಾಲ್ಲೂಕು, ಗ್ರಾಮ ಪಂಚಾಯತಿ, ರೈತ ಸಂಘ , ಒಕ್ಕೂಟದ ಮೂಲಕ ವಿತರಣೆ ಮಾಡಲಾಗುವುದು ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಯೋಗೇಶ್ ಅವರು ಮಾತನಾಡಿ ಮುಂಬರುವ ಋತುವಿನಲ್ಲಿ ತೋಟಗಾರಿಕಾ ಬೆಳೆಗಳ ತಾಂತ್ರಿಕ ನಿರ್ವಹಣೆ ಅದರಲ್ಲಿಯೂ ಮುಖ್ಯವಾಗಿ ಆಲೂಗೆಡ್ಡೆ, ತೆಂಗು, ಅಡಿಕೆ ಇನ್ನಿತರ ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿಯನ್ನು ನೀಡಲು ಇಲಾಖೆಯು ತೋಟಗಾರಿಕೆ ವಾಣಿ ವಿಶೇಷ ಸಂಚಿಕೆಯ ಹೊರತರಲಾಗಿದೆ ಎಂದರು.
ರೈತರ ಆದಾಯವನ್ನು ದ್ವಿಗುಣ ಮಾಡುವುದು ಹಾಗೂ ಬೆಳೆಗಳಿಗೆ ಅನುಗುಣವಾಗಿ ಮಾಹಿತಿಯನ್ನು ನೀಡುವುದು ತೋಟಗಾರಿಕಾ ವಾಣಿಯ ವಿಶೇಷ ಸಂಚಿಕೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎ.ಪರಮೇಶ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಕುಮಾರ್ ,ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.