- ವೆಂಟಿಲೇಟರ್ ಗಳು ಹಾಸನ ತಲುಪುವವರೆಗೂ ಫಾಲೋಅಪ್ ಮಾಡಿದ ಡಾ.ಅಶ್ವತ್ಥನಾರಾಯಣ
ಬೆಂಗಳೂರು: ಹಾಸನ ಜಿಲ್ಲೆಯ ಪ್ರವಾಸದ ವೇಳೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ಹೇಳಿದ್ದಂತೆ ಕೋವಿಡ್ ಸೋಂಕಿತರಿಗೆ ಬಳಕೆ ಮಾಡಲು 30 ವೆಂಟಿಲೇಟರ್ ಗಳನ್ನು ಕಳಿಸಿಕೊಡಲಾಯಿತು. ಇದರ ಜತೆಗೆ 25 ಆಮ್ಲಜನಕ ಸಾಂದ್ರಕಗಳನ್ನೂ ಕಳುಹಿಸಿಕೊಟ್ಟರು.
ಇವೆಲ್ಲವೂ ಭಾನುವಾರ ಮಧ್ಯಾಹ್ನದ ಹೊತ್ತಿಗೆ ಹಾಸನ ಜಿಲ್ಲಾಡಳಿತವನ್ನು ತಲುಪಿವೆ. ಶನಿವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಜಿಲ್ಲಾಧಿಕಾರಿಗಳೂ ಸೇರಿದಂತೆ ಜನ ಪ್ರತಿನಿಧಿಗಳು ಕೂಡ ವೆಂಟಿಲೇಟರ್ ಹಾಗೂ ಆಮ್ಲಜನಕ ಸಾಂದರಕಗಳ ಕೊರತೆಯಾಗಿರುವ ಅಂಶವನ್ನು ಡಿಸಿಎಂ ಗಮನಕ್ಕೆ ತಂದಿದ್ದರು. ಕಾರಣಾಂತರಗಳಿಂದ ಜಿಲ್ಲೆಗೆ ವೆಂಟಿಲೇಟರ್ʼಗಳನ್ನು ಒದಗಿಸುವುದು ವಿಳಂಬವಾಗಿತ್ತು.
ಈ ವಿಷಯ ಹಾಸನದ ಕೋವಿಡ್ ಪರಿಶೀಲನೆ ಸಭೆಯಲ್ಲಿ ಪ್ರಸ್ತಾಪ ಆದ ಕ್ಷಣವೇ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ಕರೆ ಮಾಡಿದ ಡಿಸಿಎಂ ತಕ್ಷಣವೇ ಜಿಲ್ಲೆಗೆ ಅಗತ್ಯ ಇರುವಷ್ಟು ವೆಂಟಿಲೇಟರ್ʼಗಳನ್ನು ಒದಗಿಸುವಂತೆ ಸೂಚಿಸಿದ್ದರು.
ಅಲ್ಲದೆ, ಸಭೆ ಮುಗಿಸಿಕೊಂಡು ಬೆಂಗಳೂರಿಗೆ ಹೊರಟ ಡಿಸಿಎಂ, ಮಾರ್ಗ ಮಧ್ಯೆಯೇ ಮತ್ತೊಮ್ಮೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ಕೊಟ್ಟರು. ವೆಂಟಿಲೇಟರ್ʼಗಳು ಅವು ಬೆಂಗಳೂರಿನಿಂದ ಹಾಸನ ತಲುಪುವ ತನಕ ನಿರಂತರ ಫಾಲೋಅಪ್ ಮಾಡಿದರು.
ವೆಂಟಿಲೇಟರ್ʼಗಳು ಬಹಳ ಮುಖ್ಯ:
ಈ ಬಗ್ಗೆ ಪ್ರತಿಕ್ರಿಯಿಸಿದ ಡಾ.ಅಶ್ವತ್ಥನಾರಾಯಣ ಅವರು, “ಕೋವಿಡ್ ನಂಥ ಸೋಂಕಿಗೆ ತುತ್ತಾದವರಿಗೆ ವೆಂಟಿಲೇಟರ್ʼಗಳ ಅಗತ್ಯ ಹೆಚ್ಚಾಗಿರುತ್ತದೆ. ಸ್ಥಳೀಯ ಮಟ್ಟದಲ್ಲೇ ಜೀವ ಉಳಿಸಬಹುದು. ಶನಿವಾರ ಹಾಸನ ಜಿಲ್ಲೆಯ ಪರಿಸ್ಥಿತಿ ಪರಿಶೀಲನೆ ಮಾಡಿದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ಪರಿಸ್ಥಿತಿಯ ತೀವ್ರತೆ ಗೊತ್ತಾಯಿತು. ಇಪ್ಪತ್ತನಾಲ್ಕು ಗಂಟೆಗಳಲ್ಲಿಯೇ 30 ವೆಂಟಿಲೇಟರ್ʼಗಳನ್ನು ಹಾಸನಕ್ಕೆ ಕಳಿಸಿಕೊಟ್ಟಿದ್ದೇವೆ. ಇಂಥ ಸಂಕಷ್ಟ ಸಮಯದಲ್ಲಿ ಕ್ಷಿಪ್ರವಾಗಿ ಕೆಲಸ ಮಾಡಬೇಕಾದುದು ನಮ್ಮೆಲ್ಲರ ಜವಾಬ್ದಾರಿ” ಎಂದರು.
ಶಾಸಕ ಪ್ರೀತಂ ಜೆ. ಗೌಡ ಅವರು ಕೂಡ ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಕಡಿಮೆ ಮಾಡಲು 50 ವೆಂಟಿಲೇಟರ್ ಹಾಗೂ 500 ಆಕ್ಸಿಜನ್ ಕಾನ್ಸನ್ಟ್ರೇಟರ್ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿ ಆರೋಗ್ಯ ಸಚಿವ ಡಾ. ಸುಧಾಕರ್ ಅವರೊಂದಿಗೆ ನಿರಂತರ ಸಂಪರ್ಕ ಸಾಧಿಸಿದ್ದರು.
ಇನ್ನು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಸುದ್ದಿಗೋಷ್ಠಿ ನಡೆಸಿ ವಾರ ಕಳೆದರೂ ಜಿಲ್ಲೆಗೆ ವೆಂಟಿಲೇಟರ್ ಕಳುಹಿಸಿದ ಹಿನ್ನೆಲೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಶನಿವಾರ ಜಿಲ್ಲಾ ಪಂಚಾಯತ್ನಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ನಿಯಂತ್ರಣ ಸಂಬAಧ ಸಭೆಯಲ್ಲೂ ಕೇವಲ ಆಶ್ವಾಸನೆ ನೀಡಬೇಡಿ ಶೀಘ್ರ ವೆಂಟಿಲೇಟರ್ ಕಳುಹಿಸುವಂತೆ ಒತ್ತಾಯ ಮಾಡಿದ್ದರು. ಈ ವೇಳೆ ಡಿಸಿಎಂ ಆಶ್ವತ್ಥ್ ನಾರಾಯಣ್ ಅವರು ಸೋಮವಾರವೇ ವೆಂಟಿಲೇಟರ್ ಕಳಹಿಸಿಕೊಡುವುದಾಗಿ ಭವರವಸೆ ನೀಡಿದ್ದರು.
ಇದೀಗ ಜಿಲ್ಲೆಗೆ 30 ವೆಂಟಿಲೇಟ್ರ್ಗಳು ಬಂದಿದ್ದು ಅವುಗಳನ್ನು ಹಿಮ್ಸ್ಗೆ ನೀಡಲಾಗಿದೆ. ಇನ್ನೂ 20 ವೆಂಟಿಲೇಟರ್ಗಳು ಜಿಲ್ಲೆಗೆ ಬರಬೇಕಿದೆ.