ಹಾಸನ: ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ನಗರದ ಹೇಮಾವತಿ ಪ್ರತಿಮೆ ಬಳಿ ಸಿಪಿಐಎಂ ನೇತೃದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.
ಕಳೆದ ಒಂದೂವರೆ ವರ್ಷದಿಂದ ದೇಶದ ಜನತೆ ತೀವ್ರ ರೀತಿಯ ಕೋವಿಡ್ ಸಂಕಷ್ಠ ಎದುರಿಸು ತ್ತಿರುವಾಗಲೇ ಅವರ ಸಂಕಟ ನಿವಾರಣೆಗೆ ಕ್ರಮ ವಹಿಸುವ ಬದಲು ಅವರ ಮೇಲೆ ಭಾರೀ ಬೆಲೆ ಏರಿಕೆಯ ಹೊರೆ ಹೇರುವ ಕ್ರೌರ್ಯವನ್ನು ಕೇಂದ್ರ ಸರ್ಕಾರ ಮೆರೆಯುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಪೆಟ್ರೋಲ್ ಬೆಲೆಯು ೨೫ ರೂ. ಗಳಷ್ಟು ಹೆಚ್ಚಳಗೊಂಡಿದೆ. ಕಳೆದ ಒಂದು ತಿಂಗಳಲ್ಲಿ ೧೬ ಬಾರಿ ಬೆಲೆ ಏರಿಸಲಾಗಿ ಈಗ ೧೦೦ ರೂ.ಗಳನ್ನು ದಾಟಿದೆ. ಡೀಸೆಲ್ ಬೆಲೆಯು ೧೦೦ ರೂ.ಗಳಿಗೆ ಹತ್ತಿರವಾಗಿದೆ. ಅಡುಗೆ ಅನಿಲವೂ ಭಾರಿ ಏರಿಕೆ ಕಂಡಿದ್ದು ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೊಳಗಾಗಿದ್ದಾರೆ ಆರೋಪಿಸಿದರು.
ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಅತ್ಯಂತ ಅಸಹನೀಯವಾಗಿದೆ ಎಂದು ಸಿಪಿಐಎಂ ಕೇಂದ್ರ ಸರಕಾರದ ಈ ಜನವಿರೋಧಿ ಹಾಗೂ ಲೂಟಿಕೋರ ನೀತಿಯನ್ನು ಬಲವಾಗಿ ಖಂಡಿಸುತ್ತದೆ. ಇದು ಸಹಜವಾಗಿಯೇ ಎಲ್ಲ ಅಗತ್ಯ ವಸ್ತುಗಳ ಬೆಲೆಗಳ ಏರಿಕೆಗೆ ಕಾರಣವಾಗಿದೆ. ಜಾಗತಿಕವಾಗಿ ಕಚ್ಛಾ ತೈಲದಲ್ಲಿ ಯಾವುದೇ ಬೆಲೆ ಏರಿಕೆ ಆಗದಿದ್ದರೂ ದೇಶದಲ್ಲಿ ಈ ಪ್ರಮಾಣದಲ್ಲಿ ಇವುಗಳ ಬೆಲೆಗಳು ಏರಿಕೆಯಾಗಲೂ ಕೇಂದ್ರ ಸರಕಾರವೇ ನೇರ ಹೊಣೆಗಾರನಾಗಿದೆ. ಇದು ಜನತೆಯನ್ನು ದೊಡ್ಡ ಪ್ರಮಾಣದಲ್ಲಿ ಲೂಟಿಗೊಳಪಡಿಸುವ ವಿಚಾರವಾಗಿದ್ದು ಇದನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್ ಪಡೆಯಬೇಕೆಂದು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಹಾಸನ ಸ್ಥಳೀಯ ಸಮಿತಿ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್, ಮುಖಂಡರುಗಳಾದ ವಸಂತ್ ಕುಮಾರ್, ಎಂ.ಜಿ. ಪೃಥ್ವಿ, ಪುಷ್ಪ ಇತರರು ಉಪಸ್ಥಿತರಿದ್ದರು.