ಬೇಲೂರು:ಇಲ್ಲಿನ ಲಕ್ಷ್ಮೀ ಪುರ ಬಡಾವಣೆಯಲ್ಲಿರುವ ಶ್ರೀವೀರಾಂಜನೇಯಸ್ವಾಮಿ ಸೇವಾ ಸಮಿತಿಯಿಂದ ಶ್ರಾವಣ ಶನಿವಾರ ದೇವರಿಗೆ ವಿಶೇಷ ಪೂಜೆ ಪ್ರಯುಕ್ತ ಕೊರೊನಾ ವಾರಿರ್ಸ್ ಹಾಗೂ ಪುರ ಪ್ರಮುಖರನ್ನು ಸನ್ಮಾನಿಸಲಾಯಿತು.
ದೇಗುಲದ ಸಮೀಪವಿರುವ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೊರೊನಾ ವಾರಿರ್ಸ್ ಆದ ಡಾ.ಚಂದ್ರಮೌಳಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತನುಜ, ಆಂಬ್ಯುಲೆನ್ಸ್ ಚಾಲಕ ಕಿರಣ್, ಉಪನ್ಯಾಸಕ ಎಸ್.ಗಣೇಶ್ ಮತ್ತು ಪುರಸಭಾ ಸದಸ್ಯರಾದ ಜಿ.ಶಾಂತಕುಮಾರ್, ಶ್ರೀನಿವಾಸ್, ಪ್ರಭಾಕರ್, ಮಣಿ, ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ, ಮಂಜುನಾಥ್, ಕೌಶಿಕ್, ಸಂಭ್ರಮ್ ಚಿಕ್ಕು ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪನ್ಯಾಸಕ ಗಣೇಶ್ ಮಾತನಾಡಿ, ೪೦ ವರ್ಷದ ಹಿಂದೆ ಈ ವಾರ್ಡು ಇದ್ದಂತ ರೀತಿಗೂ ಇಂದಿಗೂ ಸಾಕಷ್ಟು ಬದಲಾವಣೆಯಾಗಿದೆ. ಜನರ ಒತ್ತಡದ ನಡುವಿನ ಬದುಕಿನ ನಡುವೆ ಬಂದೆರಗಿದ ಕೊರೊನಾದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಆಶಾಕಿರಣವಾಗಿ ಕೊರೊನಾ ವಾರಿರ್ಸ್ ನಮ್ಮ ಕಣ್ಣೆದುರಿಗಿದ್ದಾರೆ. ತಮ್ಮ ಜೀವದ ಹಂಗು ತೊರೆದು ಸೇವಾಕಾರ್ಯದಲ್ಲಿ ತೊಡಗಿದ್ದಾರೆ ಎಂದು ಸ್ಮರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಚಂದ್ರಮೌಳಿ, ಕೊರೊನಾ ಘೋರವಾಗಿದೆ. ಸಂಬಂಧಗಳನ್ನು ದೂರ ಮಾಡುವ ಸಣ್ಣ ವೈರಸ್ ಇಂದು ಇಡಿ ಮನುಕುಲವನ್ನೇ ತಲ್ಲಣಗೊಳಿಸುತ್ತಿದೆ ಎಂದರು. ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿದ ಅವರು, ಚಿಕ್ಕಮಗಳೂರಿನಿಂದ ಆಗಮಿಸಿ ಬೇಲೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದು, ಕೊರೊನಾ ಸಂದರ್ಭ ಕ್ಲಿನಿಕ್ ಬಾಗಿಲು ಮುಚ್ಚದೆ ರೋಗಿಗಳ ತಪಾಸಣೆ ಮಾಡಿ ಚಿಕಿತ್ಸೆ ನೀಡಿದ್ದನ್ನು ನೆನಪಿಸಿಕೊಂಡರು. ಕ್ಲಿನಿಕ್ನಿಂದ ಮನೆಗೆ ತೆರಳಿದಾದ ಮಗಳನ್ನು ಮುಟ್ಟಲಾಗದ ಸ್ಥಿತಿಯಲ್ಲಿ ಕಿಟ್ ಧರಿಸಿಕೊಂಡು ಮುಟ್ಟಿದ್ದನ್ನು ಹಾಗೂ ಮಡದಿಯ ಸಹಕಾರವನ್ನು ಸ್ಮರಿಸಿದ ವೇಳೆ ಕಣ್ಣಲ್ಲಿ ನೀರು ತುಂಬಿಕೊಂಡವು. ಕೊರೊನಾ ವಾರಿರ್ಸ್ಗೆ ಸನ್ಮಾನಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಪುರಸಭ ಸದಸ್ಯ ಮಾಜಿ ಅಧ್ಯಕ್ಷ ಜಿ.ಶಾಂತಕುಮಾರ್ ಮಾತನಾಡಿ, ಕೋವಿಡ್ ಸಂದರ್ಭ ಪ್ರಾಣದ ಹಂಗುತೊರೆದು ಜನರ ಉತ್ತಮ ಆರೋಗ್ಯಕ್ಕಾಗಿ ಹೋರಾಡಿದ ಆರೋಗ್ಯ, ಪುರಸಭೆ, ಕಂದಾಯ, ಪೊಲೀಸ್, ಪೌರಕಾರ್ಮಿಕರು, ವಿದ್ಯುತ್ ಇಲಾಖೆ ನೌಕರರು ಇವರನ್ನು ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಇಂದು ಶ್ರೀವೀರಾಂಜನೇಯ ಸೇವಾ ಸಮಿತಿಯಿಂದ ಪ್ರಾಮಾಣಿಕ ಕೊರೊನಾ ವಾರಿರ್ಸ್ಗಳನ್ನು ಗುರುತಿಸಿ ಗೌರವಿಸುತ್ತಿರುವುದು ಸಂತೋಷವಾಗಿದ್ದು ಇದು ಕೊರೊನಾ ವಾರಿರ್ಸ್ಗಳ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.
ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತನುಜ ಮಾತನಾಡಿ, ಕೊರೊನಾ ವೇಳೆ ತಮ್ಮ ಕರ್ತವ್ಯದ ಸ್ಥಿತಿಗತಿ ತಿಳಿಸಿದರಲ್ಲದೆ, ಕೊರೊನಾ ರೋಗದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎಲ್ಲದರಂತೆ ಇದೂ ಒಂದು ಕಾಯಿಲೆಯಾಗಿದ್ದು ರೋಗ ಬರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ. ನಿರ್ಲಕ್ಷ್ಯ ತಾಳಿದರೆ ತೊಂದರೆ ಆಗಲಿದೆ. ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸೇವಾ ಸಮಿತಿ ಅಧ್ಯಕ್ಷ ಬಿ.ಕೆ.ಮೋಹನಕುಮಾರ್ ಮಾತನಾಡಿ, ದೇಗುಲದ ನಿರ್ಮಾಣದ ಹಂತದಿಂದ ಇದುವರಗಿನ ಏಳುಬೀಳುಗಳು, ಸಹಕರಿಸಿದವರನ್ನು ಸ್ಮರಿಸಿದರು. ಕೊರೊನಾ ದೂರವಾಗಿ ಹನುಮಜಯಂತಿ ವಿಜೃಂಭಣೆಯಿಂದ ಜರುಗುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಪುರಸಭ ಸದಸ್ಯ ಶ್ರೀನಿವಾಸ್, ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಮಾತನಾಡಿದರು. ಪುರಸಭ ಸದಸ್ಯ ಪ್ರಭಾಕರ್, ಆಂಬ್ಯುಲೆನ್ಸ್ ಚಾಲಕ ಕಿರಣ್ ಹಾಜರಿದ್ದರು. ಕು. ಗಾನ್ಹವಿ, ಪೂಜಾ, ಸೃಷ್ಠಿ ಇವರು ಪ್ರಾರ್ಥಿಸಿದರು. ವೀರಾಂಜನೇಯ ಭಜನಾ ಮಂಡಳಿಯ ಇಂದಿರಮ್ಮ ಸಂಗಡಿಗರು ಭಜನೆ ನಡೆಸಿದರು. ವಿಜಯ್ ಸ್ವಾಗತಿಸಿ, ಅನಂತರಾಜೇಅರಸು ನಿರೂಪಿಸಿ, ಕೌಶಿಕ್ ವಂದಿಸಿದರು.


