ಹಾಸನ: ಸಮಾಜದಲ್ಲಿ ಮಹಿಳೆಯರು ಎಷ್ಟೇ ಎತ್ತರಕ್ಕೇರಿದ್ರೂ ಕೆಲವೊಂದು ಧಾರ್ಮಿಕ ಕಾರ್ಯಮಾಡಲು ಅವರಿಗೆ ಕಟ್ಟಳೆಗಳಿವೆ. ಕೆಲವು ಧಾರ್ಮಿಕ ವಿಧಿವಿಧಾನಗಳಲ್ಲಿ ಮಹಿಳೆಯರು ಭಾಗವಹಿಸುವುದು ನಿಷಿದ್ಧ. ಆದರೆ, ಅದನ್ನೂ ಮೀರಿ ಕ್ರಾಂತಿ ಮಾಡೋ ಕೆಲವರು ತಾವೂ ಯಾರಿಗು ಕಡಿಮೆಯಿಲ್ಲ ಎನ್ನುವುದನ್ನು ಸಾರಿ ಹೇಳುತ್ತಾರೆ.
ದೇವರ ಉತ್ಸವಗಳಲ್ಲಿ ಅಡ್ಡಪಲ್ಲಕ್ಕಿ ಹೊರುವುದು ಸಾಮಾನ್ಯವಾಗಿ ಪುರುಷರು. ಆದರೆ, ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೊಣನೂರಿನಲ್ಲಿ ಮಹಿಳೆಯರೇ ಶಿವ ಪಾರ್ವತಿಯರ ಅಡ್ಡಪಲ್ಲಕ್ಕಿ ಹೊತ್ತು ಗಮನ ಸೆಳೆದಿದ್ದಾರೆ. ಕೊಣನೂರಿನ ಆರ್ಯವೈಶ್ಯ ಮಂಡಳಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ನೆರವೇರಿತ್ತು.
ಈ ವೇಳೆ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯ ಭಕ್ತರು ಭಾಗಿಯಾಗಿದ್ದಾರೆ.
ಈ ಮೂಲಕ ಮಹಿಳೆಯರು ತಾವು ಧಾರ್ಮಿಕ ಕಾರ್ಯಕ್ಕೂ ಸೈ ಎನ್ನುವುದನ್ನು ಸಾಬೀತುಮಾಡಿದ್ದಾರೆ. ಸಮಿತಿಯ ಸದಸ್ಯರು ಕೂಡ ಮಹಿಳೆಯರಿಗೆ ಸಾಥ್ ನೀಡುವ ಮೂಲಕ ಬೆಂಬಲ ನೀಡಿದ್ದಾರೆ.
ವರದಿ: ಮಂಜುನಾಥ್ ಕೆಬಿ, ಹಾಸನ