ಬೇಲೂರು ಚೆನ್ನಕೇಶವ ದೇವಸ್ಥಾನದ ಕಲಾಮಂಟಪ ಜೀರ್ಣೋದ್ಧಾರಕ್ಕೆ ಪುರಾತತ್ವ ಇಲಾಖೆಗೆ ಮನವಿ

ಬೆಂಗಳೂರು: ಬೇಲೂರಿನ ಇತಿಹಾಸ ಪ್ರಸಿದ್ಧ ಚೆನ್ನಕೇಶವ ದೇವಸ್ಥಾನ ಮುಂಭಾಗದಲ್ಲಿರುವ ಕಲಾ ಮಂಟಪದ ಜೀರ್ಣೋದ್ಧಾರ ಕೈಗೊಂಡು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಕೋರಿ ರಾಷ್ಟ್ರಧರ್ಮ ಸಂಘಟನೆ ಸಂಸ್ಥಾಪಕ ಸಂತೋಷ್ ಕೆಂಚಾಂಬ ಅವರು ಇಂದು ಕೇಂದ್ರ ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಕೋರಮಂಗಲದಲ್ಲಿರುವ ಕೇಂದ್ರ ಪುರಾತತ್ವ ಇಲಾಖೆಯಲ್ಲಿ ಪುರಾತತ್ವ ಇಲಾಖೆಯ ಪುರಾತತ್ವ ಅಧೀಕ್ಷಕ ಬಿಪಿನ್ ಚಂದ್ರ ಅವರನ್ನು ಭೇಟಿಯಾಗಿ, ಈ ಕುರಿತು ಮನವಿ ಸಲ್ಲಿಸಲಾಯಿತು.
ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿರುವ ಕಲಾ ಮಂಟಪ ಶಿಥಿಲಗೊಂಡಿದ್ದು, ಯಾವುದೇ ಸಂದರ್ಭದಲ್ಲಾದರೂ ಕುಸಿಯುವ ಹಂತದಲ್ಲಿದೆ. ಇದರಿಂದ ದುರಂತ ಸಂಭವಿಸುವ ಸಾಧ್ಯತೆಯೂ ಇದೆ. ಆದ್ದರಿಂದ ಈ ಮಂಟಪವನ್ನು ಪುನರುಜ್ಜೀವನಗೊಳಿಸಿ, ಸ್ಥಳೀಯ ಕಲಾವಿದರಿಗೆ ಕಲಾಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದಾರೆ.
ಈ ಮಂಟಪಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಹೊಯ್ಸಳರ ಕಾಲದಲ್ಲಿ ನಾಟ್ಯರಾಣಿ ಶಾಂತಲೆ ಇಲ್ಲಿ ನೃತ್ಯ ಕಾರ್ಯಕ್ರಮ ನೀಡಿದ್ದರು. ಇಂತಹ ಅಪರೂಪದ ಇತಿಹಾಸ ಹೊಂದಿರುವ ಮಂಟಪವನ್ನು ಪುರಾತತ್ವ ಇಲಾಖೆಯಿಂದ ಪುನರುಜ್ಜೀವನಗೊಳಿಸಿದರೆ ರಾಷ್ಟ್ರಧರ್ಮ ಸಂಘಟನೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಸಂತೋಷ್ ಕೆಂಚಾಂಬ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಮನವಿಯನ್ನು ಪರಿಶೀಲಿಸಿದ ಪರಾತತ್ವ ಇಲಾಖೆ ಅಧೀಕ್ಷಕ ಬಿಪಿನ್ ಚಂದ್ರ, ಈ ಕುರಿತಂತೆ ಆದಷ್ಟು ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Post a Comment

Previous Post Next Post