ವ್ಯಕ್ತಿ ಸಾವು: ಚಿಕಿತ್ಸಾ ಲೋಪದ ಆರೋಪ ಖಾಸಗಿ ಆಸ್ಪತ್ರೆ ಎದಿರು ಶವವಿಟ್ಟು ಪ್ರತಿಭಟನೆ

 ಬೇಲೂರು : ಚಿಕಿತ್ಸೆಗೆಂದು ಇಂದು ಸಂಜೆ ಇಲ್ಲಿನ ನೆಹರೂನಗರದ ಹೋಲಿಕ್ರಾಸ್ ಆಸ್ಪತ್ರೆಗೆ ಬಂದ ತಾಲ್ಲೂಕಿನ ಕೊರಟಿಕೆರೆ ಗ್ರಾಮದ ಯೋಗೀಶ್ (೪೫) ಮೃತಪಟ್ಟಿರುವ ಘಟನೆ ನಡೆದಿದೆ.

 ಸಾವಿಗೆ ಆಸ್ಪತ್ರೆಯವರೆ ಕಾರಣ ಎಂದು ಆರೋಪಿಸಿದ ಮೃತನ ಸಂಬಂದಿಕರು, ಮೃತ ದೇಹದೊಂದಿಗೆ ಆಸ್ಪತ್ರೆ ಆವರಣದಲ್ಲಿ ಪ್ರತಭಟನೆ ನಡೆಸಿದರು.

ವಿವರ: ಘಟನೆ ಕುರಿತು ಮೃತನ ಪತ್ನಿ ಪುಷ್ಪಲತಾ ಮಾತನಾಡಿ, ಇಂದು ಸಂಜೆ ೬ ಗಂಟೆ ಸುಮಾರಿನಲ್ಲಿ ವಾಂತಿ ಆಗುತ್ತಿದೆ ಎಂಬ ಕಾರಣಕ್ಕೆ ಆಸ್ಪತ್ರೆಗೆ ಬಂದೆವು. ಅರ್ಧ ಗಂಟೆಯಾದರೂ ತಪಾಸಣೆ ಮಾಡಲಿಲ್ಲ. ನಂತರ ಗ್ಲೂಕೋಸ್ ಹಾಕಿ ಇಂಜಕ್ಷನ್ ಕೊಟ್ಟರು. ಇಂಜಕ್ಷನ್ ಕೊಟ್ಟ ೧೦ ನಿಮಿಷದಲ್ಲೇ ಗಂಡ ತೀರಿಕೊಂಡರು. 

ಆ ತಕ್ಷಣ ಆಟೋ ತರಿಸಿದ ಆಸ್ಪತ್ರೆಯವರು ಆಟೋದಲ್ಲಿ ಮೃತದೇಹ ಇರಿಸಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು.

ಆ ನಂತರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿದಾಗ ಮೃತಪಟ್ಟಿರುವುದಾಗಿ ತಿಳಿಸಿದರು, ವಿನಾಕಾರಣ ನನ್ನ ಗಂಡನನ್ನು ಸಾಯಿಸಿದ್ದಾರೆ, ಆಂಬ್ಯುಲೆನ್ಸ್ ನಲ್ಲಿ ಹೋಲಿಕ್ರಾಸ್ ತಂದಿದ್ದೇವೆ, ಆಸ್ಪತ್ರೆಗೆ ಬರುವಾಗ ನಡೆದುಕೊಂಡೇ ಬಂದಿದ್ದರೆಂದು ರೋದಿಸತೊಡಗಿದರು. 

ಈ ವೇಳೆಗಾಗಲೇ ವಿಷಯ ಕೊರಟಿಕೆರೆ ಗ್ರಾಮಸ್ಥರಿಗೆ, ಸಂಬಂದಿಕರಿಗೆ ತಿಳಿದು ಆಸ್ಪತ್ರೆ ಮುಂದೆ ಜಮಾಯಿಸಿದರು.

ವಿಷಯ ಅರಿತಿದ್ದ ಆಸ್ಪತ್ರೆಯವರು ಆಸ್ಪತ್ರೆ ಮುಂಭಾಗದ ಗೇಟಿಗೆ ಬೀಗ ಹಾಕಿಕೊಂಡು ಒಳಗಡೆ ಇದ್ದರು. ಸಿಪಿಐ ಯೋಗೇಶ್ ಹಾಗೂ ಸಿಬ್ಬಂದಿ ಆಗಮಿಸಿ ಗೇಟ್ ಬಿಗ ತೆಗೆಸಿದರು. ಆನಂತರ ಮೃತದೇಹದೊಂದಿಗೆ ಆಸ್ಪತ್ರೆ ಮುಂಭಾಗ ಧರಣಿ ನಡೆಸುತ್ತಿದ್ದಾರೆ. ಮೃತನ ಸಂಬಂದಿಕರು ಆಸ್ಪತ್ರೆ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

Post a Comment

Previous Post Next Post