ಸಕಲೇಶಪುರದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಕದಿಯಲು ಯತ್ನ

ಸಕಲೇಶಪುರ: ಕಿಡಿಗೇಡಿಗಳ ಗುಂಪೊಂದು ನೆಲದೊಳಗೆ ಹಾದುಹೋಗಿರುವ ಪೆಟ್ರೋಲ್ ಪೈಪ್‌ಲೈನ್ ತುಂಡರಿಸಿ ಪೆಟ್ರೋಲಿಯಂ ಉತ್ಪನ್ನಗಳನ್ನು ಕದಿಯಲು ಯತ್ನ ಮಾಡಿ ವಿಫಲವಾಗಿರುವ ಘಟನೆ ತಾಲೂಕಿನ ಹಾನುಬಾಳ್ ಹೋಬಳಿ ಹುರುಡಿ ಸಮೀಪ ನಡೆದಿದೆ.

ಶುಕ್ರವಾರ ತಡ ರಾತ್ರಿ ಹುರುಡಿ ಗ್ರಾಮದ ಸಮೀಪ ಗದ್ದೆಗಳಿರುವ ಜಾಗದಲ್ಲಿ ಹಾದು ಹೋಗಿರುವ ಪೆಟ್ರೋನೆಟ್ ಎಮ್.ಎಚ್.ಬಿ ಲಿಮಿಟೆಡ್‌ನ ಪೈಪ್ ಲೈನ್‌ನ್ನು ಹಿಟಾಚಿ ಯಂತ್ರದಿಂದ ಬಗೆದು ಪೆಟ್ರೋಲ್-ಡಿಸೇಲ್ ಕಳ್ಳತನ ಮಾಡಲು ವಾಲ್ ಫಿಟ್ ಮಾಡಿ ಪೈಪ್ ಅಳವಡಿಸಿ ಡ್ರಿಲ್ ಮಾಡಲು ಹೋದಾಗ ಎಮ್.ಎಚ್.ಬಿ ಕಂಪನಿಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ನೆರಿಯ ಸ್ಟೇಷನ್‌ನ ಸಿಗ್ನಲ್‌ನಲ್ಲಿ ಪೆಟ್ರೋಲ್ ಪೈಪ್ ಲೈನ್‌ಗೆ ಡ್ರಿಲ್ ಮಾಡುತ್ತಿರುವುದು ಸೆನ್ಸಾರ್ ಮುಖಾಂತರ ಗೊತ್ತಾಗಿದೆ.

ತಕ್ಷಣ ಕಂಪನಿಯ ಸಿಬ್ಬಂದಿಗಳನ್ನು ಸ್ಥಳಕ್ಕೆ ಪೋಲಿಸರ ಜೊತೆ ಕಳುಹಿಸಿರುತ್ತಾರೆ. ಈ ಸಂಧರ್ಭದಲ್ಲಿ ಪೋಲಿಸರನ್ನು ನೋಡಿದ ಕಿಡಿಗೇಡಿಗಳು ಹಿಟಾಚಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.

ಗ್ರಾಮಾಂತರ ಠಾಣೆಯ ಪೋಲಿಸರು ಹಿಟಾಚಿ ವಶ ಪಡೆದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಮ್.ಎಚ್.ಬಿ ಕಂಪನಿಯ ಸ್ಥಳೀಯ ಉಸ್ತುವಾರಿ ಮಹೇಶ್ ಹೆಗ್ಡೆ ಹಾಗು ಅಧಿಕಾರಿಗಳು ಭೇಟಿ ನೀಡಿರುತ್ತಾರೆ. ಪೆಟ್ರೋಲ್ ಪೈಪ್‌ಲೈನ್ ತುಂಡರಿಸಿ ಪೆಟ್ರೋಲಿಯಂ ಉತ್ಪನ್ನಗಳನ್ನು ಕಳ್ಳತನ ಮಾಡುವುದು ಹುರುಡಿ ಸುತ್ತಮುತ್ತ ಸಾಮಾನ್ಯವಾಗಿತ್ತು. ಕಳೆದ ಎರಡು ವರ್ಷಗಳ ಹಿಂದೆ ಈ ಪ್ರಕರಣದ ಹಿನ್ನೆಲೆಯಲ್ಲಿ ಕೆಲವರನ್ನು ಬಂಧಿಸಲಾಗಿತ್ತು. ಪ್ರಸ್ತುತ ಈ ಕಳ್ಳತನ‌ ಯತ್ನದಲ್ಲಿ ಸ್ಥಳೀಯ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು ಈ ಕುರಿತು ಸರಿಯಾದ ತನಿಖೆ ನಡೆಯಬೇಕಾಗಿದೆ.

Post a Comment

Previous Post Next Post