ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಶಾಖೆ ಮತ್ತು ಬ್ರಿಗೇಡ್ ಪಿಯು ಕಾಲೇಜುಗಳ ಆಶ್ರಯದಲ್ಲಿ ನಗರದ ಕೆ.ಎಸ್.ಅರ್.ಟಿ.ಸಿ ತರಬೇತಿ ಕೇಂದ್ರದ ಆವರಣದಲ್ಲಿ ಮಿಯಾವಾಕಿ ಮಾದರಿಯ ಪುಟ್ಟಡವಿ ನಿರ್ಮಾಣ ಮಾಡಲಾಯಿತು.
ಬ್ರಿಗೇಡ್ ಪಿಯು ಕಾಲೇಜಿನ 40 ವಿದ್ಯಾರ್ಥಿಗಳು, 10 ಗುಂಟೆ ಜಾಗದಲ್ಲಿ 400 ಸಸಿಗಳನ್ನು ನೆಡಲು ಕಲ್ಲುಗಳನ್ನು ತೆಗೆದು ಸ್ವಚ್ಛತೆ ಮಾಡಿ ಶ್ರಮದಾನ ಮಾಡಿದರು.ಕೆ.ಎಸ್.ಅರ್.ಟಿ.ಸಿ ತರಬೇತಿ ಕೇಂದ್ರದ ಪ್ರಾಂಶುಪಾಲ ಜಗದೀಶ್ ಮಾತನಾಡಿ, ಏಷ್ಯಾದಲ್ಲಿ ಅತ್ಯುತ್ತಮ ತರಬೇತಿ ಕೇಂದ್ರ ಎಂದು ಹಾಸನ ಕೆ.ಎಸ್.ಅರ್.ಟಿ.ಸಿ ತರಬೇತಿ ಕೇಂದ್ರ ಗೌರವ ಪಡೆದಿರುವುದು ನಮ್ಮ ಹೆಮ್ಮೆ ಎಂದರು.
ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಹೆಮ್ಮಿಗೆ ಮೋಹನ್ ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಮಿಯಾವಾಕಿ ಮಾದರಿಯ ಪುಟ್ಟಡವಿ ನಿರ್ಮಿಸುತ್ತಿರುವ ಎರಡನೇ ಯೋಜನೆ ಇದಾಗಿದೆ. ಈ ಮೊದಲು ಕೋರವಂಗಲ ಟ್ರೀ ಪಾರ್ಕ್ನಲ್ಲಿ ಪುಟ್ಟಡವಿಯನ್ನು ನಿರ್ಮಿಸಿದ್ದು, ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಈ ಮಾದರಿಯ ಪುಟ್ಟಡವಿ ನಿರ್ಮಿಸುವುದರಿಂದ ಹೆಚ್ಚು ಆಮ್ಲಜನಕ ಉತ್ಪತ್ತಿಯಾಗುತ್ತದೆ. ಇಂಗಾಲವನ್ನು ಹೆಚ್ಚಾಗಿ ಹೀರಿಕೊಳ್ಳುವುದರಿಂದ ವಾಯು ಮಾಲಿನ್ಯ ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಉಪ ಸಭಾಪತಿ ವೈ.ಎಸ್. ವೀರಭದ್ರಪ್ಪ, ಕಾರ್ಯದರ್ಶಿ ಶಬೀರ್ ಅಹ್ಮದ್, ಖಜಾಂಚಿ ಎಚ್.ಡಿ. ಜಯೇಂದ್ರ ಕುಮಾರ್, ನಿರ್ದೇಶಕರಾದ ಎಸ್.ಎಸ್. ಪಾಷಾ, ಸುಬ್ಬಸ್ವಾಮಿ ವೈ.ಎನ್., ಉದಯ ಕುಮಾರ್ ಬಿ.ಆರ್., ಸಂಚಾಲಕ ಹರ್ಷಿತ್ ಎಚ್.ಆರ್., ಬ್ರಿಗೇಡ್ ಪಿಯು ಕಾಲೇಜಿನ ಶಿಕ್ಷಕ ವಿಶ್ವನಾಥ್ ಹಾಜರಿದ್ದರು.